ಒಂದು ಕಡೆ ಕಣ್ಣು ಹಾಯಿಸದಲ್ಲೆಲ್ಲಾ ಬಂಡಾರ, ಬಂಡಾರದಲ್ಲಿ ಮಿಂದೆದ್ದ ಭಕ್ತ ಸಾಗರ. ಇನ್ನೊಂದು ಕಡೆ ಭಕ್ತರ ಹರ್ಷೋದ್ಗಾರ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ಯಲ್ಲಾಪೂರ ಓಣಿಯಲ್ಲಿ. ಹೌದು ಹುಬ್ಬಳ್ಳಿಯ ಪ್ರಮುಖ ಓಣಿ. ಇಲ್ಲಿ ರಂಗಪಂಚಮಿ ನಿಮಿತ್ಯ ಭರ್ಜರಿಯಾಗಿ ಬಣ್ಣದೋಕಳಿ ಆಡಲಾಗುತ್ತೆ.ಇಂದು(ಮಾ.21)ಇದೇ ಯಲ್ಲಾಪೂರ ಓಣಿಯಲ್ಲಿ ಎಲ್ಲಿ ನೋಡಿದರೂ ಬಂಡಾರ. ಗುರುತು ಸಿಗದಷ್ಟು ಬಂಡಾರದಲ್ಲಿ ಮಿಂದೆದ್ದರು. ಇದಕ್ಕೆಲ್ಲ ಕಾರಣ ಯಲ್ಲಾಪೂರ ಓಣಿಯ ದ್ಯಾಮಮ್ಮ ದೇವಿ ಜಾತ್ರೆ.
ಹೌದು ಕಳೆದ 20 ವರ್ಷಗಳಿಂದ ದ್ಯಾಮಮ್ಮದೇವಿ ಜಾತ್ರೆಯನ್ನು ಅದ್ದೂರಿಯಾಗಿ ಮಾಡಿರಲಿಲ್ಲ. ಸಾಂಕೇತಿಕವಾಗಿ ಜಾತ್ರೆಯನ್ನು ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ದ್ಯಾಮಮ್ಮ ದೇವಿ ಜಾತ್ರೆಯನ್ನು ಓಣಿಯ ಹಿರಿಯರೆಲ್ಲರೂ ಸೇರಿ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಅದೂ ಬಂಡಾರದ ಜಾತ್ರೆ ಮಾಡೋದರ ಮೂಲಕ ದ್ಯಾಮಮ್ಮನ ಹರಕೆ ತೀರಿಸಿದ್ದಾರೆ. ಯಲ್ಲಾಪೂರ ಓಣಿ, ಸಿದ್ದಿಪೇಟೆ ಮಾರ್ಗವಾಗಿ ಬಂಡಾರದ ಜಾತ್ರೆ ಅದ್ದೂರಿಯಾಗಿ ಸಾಗಿತ್ತು. 20 ವರ್ಷಗಳ ಬಳಿಕ ನಡೆದ ಜಾತ್ರೆಯಲ್ಲಿ ಸುಮಾರು 4 ರಿಂದ ಐದು ಸಾವಿರ ಭಕ್ತರು ಭಾಗಿಯಾಗಿದ್ದರು.
ಇನ್ನು ದ್ಯಾಮಮ್ಮದೇವಿ ಅದ್ದೂರಿ ಜಾತ್ರೆ ಹಿನ್ನಲೆ ಯಲ್ಲಾಪೂರ ಓಣಿಯಲ್ಲಿ ಬಹಳ ಕಟ್ಟು ನಿಟ್ಟಿನ ಕ್ರಮ ಆಚರಣೆ ಮಾಡಲಾಗುತ್ತೆ. ಒಂದು ತಿಂಗಳ ಕಾಲ ಮನೆಯಲ್ಲಿ ಯಾರೂ ಹಂಚು ಇಡೋದಿಲ್ಲ. ಅಲ್ಲದೇ ಇವತ್ತು ಯಾರೂ ಚಪ್ಪಲಿ ಧರಿಸೋದಿಲ್ಲ.
ಹೌದು ಇಂದು ದೇವಸ್ಥಾನದ ಬಳಿ ಚಪ್ಪಲಿ ಧರಿಸಿಕೊಂಡು ಬರುವ ಹಾಗಿಲ್ಲ. ಅಷ್ಟು ಕಟ್ಟು ನಿಟ್ಟಾಗಿ ದ್ಯಾಮಮ್ಮ ದೇವಿ ಜಾತ್ರೆಯನ್ನ ಆಚರಣೆ ಮಾಡಲಾಗತ್ತೆ. ಇನ್ನು ಈ ವರ್ಷ ದ್ಯಾಮಮ್ಮ ದೇವಿ ಮೂರ್ತಿಗೆ ಬಣ್ಣ ಕೂಡ ಮಾಡಿಸಲಾಗಿದೆ.
ಒಟ್ಟಾರೆ ಯಲ್ಲಾಪೂರ ಓಣಿಯಲ್ಲಿ ಇಂದು ಎಲ್ಲಿ ನೋಡಿದರೂ ಬಂಡಾರ. ಭಕ್ತ ಗಣ ಬಂಡಾರದಲ್ಲಿ ಮಿಂದೆದ್ದು ದೇವಿ ಹರಕೆ ತೀರಿಸಿದ್ರು. ಕಳೆದ ಒಂದು ತಿಂಗಳಿಂದ ಕಟ್ಟು ನಿಟ್ಟಿನ ನಿಯಮ ಪಾಲಿಸುವ ಯಲ್ಲಾಪೂರ ಓಣಿಯ ಜನ ಇಂದು ಬಂಡಾರದಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿದರು.
ಪ್ರತಿ ವರ್ಷ ಸಾಂಕೇತಿಕವಾಗಿ ನಡೆಯುತ್ತಿದ್ದ ಜಾತ್ರೆ ಈ ಬಾರಿ ಅದ್ದೂರಿಯಾಗಿ ನಡೆಯಿತು.ಕಟ್ಟು ನಿಟ್ಟಿನ ನಿಯಮ ಪಾಲಿಸಿ ಭಕ್ತರು ಬಂಡಾರದಲ್ಲಿ ಮಿಂದೆದ್ದರು.
Published On - 3:15 pm, Wed, 22 March 23