
ನಿಮಗೆ ತಿಳಿದಿರುವಂತೆ ಕಾರ್ಗಿಲ್ ಯುದ್ಧ ನಡೆದ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ ಇದೆ (ಎಲ್ಒಸಿ). ಆ ಪ್ರದೇಶದಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದ ಕಾರಣ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಅಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ.

ಆದರೆ 1999 ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಈ ಕಾರಣದಿಂದ ಯುದ್ಧ ಶುರುವಾಯಿತು. ಬಳಿಕ ಇದು1999ರ ಜುಲೈ 26 ರಂದು ಕೊನೆಗೊಂಡಿತು. ಆದ್ದರಿಂದ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಣೆ ಮಾಡಲಾಗುತ್ತದೆ. ಹಾಗಾದರೆ ಈಗ ಆ ಪ್ರದೇಶ ಹೇಗಿರಬಹುದು ಎಂಬ ಕುತೂಹಲ ಕೆಲವರಿಗೆ ಇರಬಹುದು.

ಈ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ತಮ್ಮ ಗಡಿಗಳನ್ನು ಹಿಂದಿಗಿಂತಲೂ ಮತ್ತಷ್ಟು ಭದ್ರಪಡಿಸಿಕೊಂಡಿವೆ. 25 ವರ್ಷದ ಹಿಂದಿದ್ದ ಸೇನೆಗಿಂತ ಮೂರು ಪಟ್ಟು ಹೆಚ್ಚು ಸೇನೆಯನ್ನು ನಿಯೋಜಿಸಲಾಗಿದೆ. ಜೊತೆಗೆ ಪಾಕ್ ಸೈನಿಕರು ಬಳಸಿದ್ದ ಕಳ್ಳ ಮಾರ್ಗಗಳನ್ನು ಗುರುತಿಸಿ, ಅವುಗಳಿಗೆ ಗ್ರಿಡ್ಗಳನ್ನು ಅಳವಡಿಸಲಾಗಿದೆ.

ಮೊದಲಿದ್ದ ಹಾಗೆ ಚಳಿಗಾಲದಲ್ಲಿ ಪೋಸ್ಟ್ಗಳು ಈಗ ಖಾಲಿ ಇರುವುದಿಲ್ಲ. ಎಲ್ಒಸಿ ಹತ್ತಿರದ ಪ್ರದೇಶದಲ್ಲಿ ಬಹಳಷ್ಟು ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿದ್ದು, ಸೇನೆಯು ಹೊಸ ಯುದ್ಧ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಬೇರೆ ಬೇರೆ ಜಾಗಗಳನ್ನು ನಿರ್ಮಿಸಿದೆ. ಈ ಎಲ್ಲ ಸ್ಥಳಗಳಲ್ಲಿ ಫಿರಂಗಿ ಬಂದೂಕುಗಳು ಯಾವಾಗಲೂ ಲಭ್ಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ರಸ್ತೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಮಾನವರಹಿತ ಕಣ್ಗಾವಲು ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿದೆ. ಉಪಗ್ರಹಗಳ ಸೇವೆ ಪಡೆಯಲಾಗುತ್ತಿದೆ. ಹಾಗಾಗಿ ಇಂತಹ ಸೌಕರ್ಯ ಮೊದಲಿಗಿಂತಲೂ ಹೆಚ್ಚು ಉಪಯೋಗವಾಗುತ್ತಿದೆ.
Published On - 4:05 pm, Thu, 25 July 24