
ಕೀಲು ನೋವಿನಿಂದ ಬಳಲುತ್ತಿದ್ದ ಬಡ ಮಹಿಳೆಗೆ ಉಚಿತವಾಗಿ ತಾವೇ ಶಸ್ತ್ರಚಿಕಿತ್ಸೆ ಮಾಡಿ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾನವೀಯತೆ ಮೆರೆದಿದ್ದಾರೆ.

ತುಮಕೂರು(Tumakuru )ಜಿಲ್ಲೆಯ ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎನ್ನುವರು ಕೀಲು ಶಸ್ತ್ರ ಚಿಕಿತ್ಸೆ (Woman Joint surgery) ಸಹಾಯಕಕ್ಕೆ ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿದ ರಂಗನಾಥ್, ಕೊನೆಗೆ ಮಹಿಳೆಯನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಉಚಿತವಾಗಿ ಸ್ವತಃ ತಾವೇ ಆಪರೇಷನ್ ಮಾಡಿದ್ದಾರೆ.

ಕಳೆದ 10 ವರ್ಷದ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ಕೀಲು ಆಪರೇಷನ್ ಮಾಡಿಕೊಂಡಿದ್ದರು. ಆದರೆ ಅದು ಡಿಸ್ ಲೊಕೆಟ್ ಆಗಿತ್ತು. ಇದೀಗ ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಲು 4 ರಿಂದ 5 ಲಕ್ಷ ರೂ. ಬೇಕಿತ್ತು.

ಇನ್ನು ಸರ್ಕಾರದ ಉಚಿತ ಯೋಜನೆಯಲ್ಲಿ ಒಂದೇ ಕಾಯಿಲೆಗೆ ಎರಡು ಬಾರಿ ಸರ್ಜರಿಗೆ ಅವಕಾಶ ಇರಲಿಲ್ಲ. ಸ್ವತಃ ರೋಗಿಗಳೇ ಹಣ ಸಂದಾಯ ಮಾಡಿ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು.

ಈ ಹಿನ್ನೆಲೆಯಲ್ಲಿ ಆಶಾ ತನ್ನ ಆರ್ಥಿಕ ಸಂಕಷ್ಟವನ್ನು ಶಾಸಕ ರಂಗನಾಥ್ ಬಳಿ ಹೇಳಿಕೊಂಡಿದ್ದರು. ಆಶಾಳ ಮನವಿಗೆ ಸ್ಪಂದಿಸಿದ ರಂಗನಾಥ್ ಸ್ವತಃ ತಾವೇ ಸರ್ಜರಿ ಮಾಡಿದ್ದಾರೆ.

ಮೂಲತಃ ಆರ್ಥೋಪೆಡಿಕ್ ವೈದ್ಯರಾಗಿರುವ ಶಾಸಕ ರಂಗನಾಥ್, ಇದೀಗ ಮಹಿಳೆಯ ಕೀಲು ಸರ್ಜರಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಮಹಿಳೆ ಆಶಾಳ ಹಣವನ್ನೂ ಸಹ ಉಳಿಸಿದ್ದಾರೆ. ಹೀಗಾಗಿ ಶಾಸಕರ ಸೇವೆಗೆ ಶ್ಲಾಘನೆ ವ್ಯಕ್ತವಾಗಿದೆ.