
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿಯಲ್ಲಿ ಧಾರಾಕಾರ ಮಳೆಗೆ ಘಾಟ್ ರಸ್ತೆಯಲ್ಲಿ ಬಿರುಕು ಉಂಟಾಗಿದೆ. ಪರಿಣಾಮವಾಗಿ ರಸ್ತೆ ಕುಸಿಯುವ ಹಂತ ತಲುಪಿದೆ. ದಕ್ಷಿಣ ಕನ್ನಡ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಇದಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ರಸ್ತೆ ಕಾಮಗಾರಿ ನಡೆದಿತ್ತು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ವ್ಯಾಪ್ತಿಯಲ್ಲಿ ಭಾರಿ ಸುಂಟರಗಾಳಿಗೆ ರಟ್ಟಾಡಿ ಗ್ರಾಮದ ಜನರು ಕಂಗಾಲಾಗಿದ್ದಾರೆ. ಸುಂಟರಗಾಳಿಗೆ ಅಪಾರ ಪ್ರಮಾಣದ ಮರ, ಮನೆಗಳಿಗೆ ಹಾನಿಯಾಗಿದೆ. ಮೊದಲ ಬಾರಿಗೆ ಇಂತಹ ಅನುಭವಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಅಮಾವಾಸ್ಯೆ ಬೈಲು ಗ್ರಾಮ ಪಂಚಾಯಿತಿ ಪಿಡಿಒ ಭೇಟಿ ನೀಡಿ ಮರ, ಮನೆಗಳ ಹಾನಿ ಕುರಿತು ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ, ಡ್ರೋನ್ ಸಹಾಯದ ಮೂಲಕ ಹಾನಿ ವ್ಯಾಪ್ತಿಯ ಪರಿಶೀಲನೆ ನಡೆಸಲಾಗುತ್ತಿದೆ.

ಕುಂದಾಪುರ ತಾಲೂಕಿನ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದೊಳಗೆ ಕುಬ್ಜ ನದಿ ನೀರು ಹರಿದಿದೆ. ಬೆಳಗಿನ ಜಾವ ಮೂರುವರೆ ಸುಮಾರಿಗೆ ಕುಬ್ಜಾ ನದಿ ನೀರು ದೇವಿಯ ಚರಣ ಸ್ಪರ್ಶ ಮಾಡಿದೆ. ಗರ್ಭಗುಡಿಗೆ ನೀರು ಬರುತ್ತಿದ್ದಂತೆ ಅರ್ಚಕರು ಮಂಗಳಾರತಿ ಮಾಡಿದರು. ವರ್ಷಂಪತಿ ಒಂದು ಬಾರಿ ಗರ್ಭಗುಡಿಗೆ ಕುಬ್ಜಾ ನದಿ ನೀರು ಹರಿದುಬರುತ್ತದೆ. ಈ ನೈಸರ್ಗಿಕ ಪುಣ್ಯ ಸ್ನಾನಕ್ಕೆ ಭಕ್ತರು ಕಾತರದಿಂದ ಕಾಯುತ್ತಿದ್ದರು.

ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ಬುಧವಾರ ರಾತ್ರಿ ಭಾರೀ ಮಳೆಯಾಗಿದ್ದು, ತುಂಗಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ತುಂಗಾ ನದಿ ಅಪಾಯದ ಅಂಚಿನಲ್ಲಿ ಹರಿಯುತ್ತಿದೆ. ಮಳೆ ಹೀಗೆಯೇ ಮುಂದುವರೆದರೆ ತುಂಗಾ ನದಿ ಇಕ್ಕೆಲಗಳ ತೋಟಗಳು ಜಲಾವೃತವಾಗುವ ಸಾಧ್ಯತೆ ಇದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾದ ಕಾರಣ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಡ್ಯಾಂನ ನೀರಿನ ಮಟ್ಟ ನೂರು ಅಡಿ ಸನಿಹಕ್ಕೆ ಬಂದಿದೆ. ಒಂದೇ ವಾರದಲ್ಲಿ ಕೆಆರ್ಎಸ್ ಡ್ಯಾಂಗೆ 12 ಅಡಿಯಷ್ಟು ನೀರು ಹರಿದುಬಂದಿದೆ. ಸದ್ಯ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ 99.30 ಅಡಿ ತಲುಪಿದೆ. ವಾರದ ಹಿಂದೆಯಷ್ಟೆ 87 ಅಡಿಗೆ ಕುಸಿದಿದ್ದ ಡ್ಯಾಂನ ನೀರಿನ ಮಟ್ಟ ಇದೀಗ ಮಳೆಯಿಂದಾಗಿ ಚೇತರಿಸಿಕೊಂಡಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯ ಇದಾಗಿದೆ. ಶೀಘ್ರವೇ ನಾಲೆಗಳಿಗೆ ನೀರು ಬಿಡುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಯಲ್ಲಾಪುರ ತಾಲೂಕಿನ ಫಾಲ್ಸ್ಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಭಾರಿ ಮಳೆಯಿಂದಾಗಿ ಗಂಗಾವಳಿ ನದಿ ನೀರಿ ಪ್ರಮಾಣ ಹೆಚ್ಚಳವಾಗಿದೆ. ಯಲ್ಲಾಪುರ ತಾಲೂಕಿನ ಎಲ್ಲಾ ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಯಲ್ಲಾಪುರ ತಾಲೂಕಿನ ಶಿರಲೆ ಜಲಪಾತ, ಕಾನೂರು ಫಾಲ್ಸ್, ಕುಳಿ ಮಾಗೋಡು ಜಲಪಾತ ಬಳಿ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.