
ಯಾದಗಿರಿಯ ಕೊಡೆಕಲ್ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮುಗಿಸಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕೂಟರ ರಾಜಧಾನಿ ಮಳಖೇಡಕ್ಕೆ ಲಗ್ಗೆ ಇಟ್ಟರು.

ಪ್ರಧಾನಿ ನರೇಂದ್ರ ಮೋದಿ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಫುಲ್ ಜೋಶ್ನಲ್ಲಿ ಮೋದಿ ನಗಾರಿ ಬಾರಿಸುತ್ತಿದ್ದರೆ, ವೇದಿಕೆ ಮೇಲಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಸೇರಿದಂತೆ ಇತರೆ ನಾಯಕರು ಚಪ್ಪಾಳೆ ಹೊಡೆದು ಖುಷಿ ಪಟ್ಟರು.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ 5 ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರಗಳ ವಿತರಣೆ ಮಾಡಿದರು.

ಕಲಬುರಗಿ ಜಿಲ್ಲೆಯ 27,267 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಬೀದರ್ ಜಿಲ್ಲೆಯ 7,500 ತಾಂಡಾ ನಿವಾಸಿಗಳಿಗೆ, ರಾಯಚೂರು ಜಿಲ್ಲೆಯ 3,500 ತಾಂಡಾ ನಿವಾಸಿಗಳಿಗೆ, ವಿಜಯಪುರ ಜಿಲ್ಲೆಯ 2,605 ತಾಂಡಾ ನಿವಾಸಿಗಳಿಗೆ ಹೀಗೆ ಲಂಬಾಣಿ ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿ, ವಡ್ಡರಹಟ್ಟಿ ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸಲು ಹಕ್ಕುಪತ್ರ ವಿತರಿಸಿದರು.

ಬಳಿಕ ಲಂಬಾಣಿ ಭಾಷೆಯಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಆರಂಭದಲ್ಲಿ ಕಲಬುರಗಿ ಶರಣಬಸವೇಶ್ವರ, ಗಾಣಗಾಪುರ ದತ್ತಾತ್ರೇಯನನ್ನು ಸ್ಮರಿಸಿದರು. ಇನ್ನು ಇದೇ ವೇಳೆ 1994ರ ಚುನಾವಣೆ ಸಂದರ್ಭದಲ್ಲಿ ನಾನು ಇಲ್ಲಿಗೆ ಬಂದಿದ್ದೆ ಆಗ ನನಗೆ ನೀವೆಲ್ಲಾ ಆಶೀರ್ವಾದ ನೀಡಿದ್ದೀರಿ ಎಂದು ಆ ದಿನಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿಕೊಂಡರು.