
ಬೆದರಿದ ಹೊಸ ದಸರಾ ಆನೆಗಳು, ಚದುರಿದ ಕುದುರೆಗಳು! ಇದು ಮೈಸೂರಿನಲ್ಲಿ ನಡೆದ ಸಿಡಿಮದ್ದು ತಾಲೀಮಿನಲ್ಲಿ ಕಂಡುಬಂದ ದೃಶ್ಯ. ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಗುರುವಾರ ವಿಶೇಷ ತಾಲೀಮು ನಡೆಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯವರು ಫಿರಂಗಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಆನೆಗಳು ಭಾರೀ ಸದ್ದಿಗೆ ಹೊಂದಿಕೊಳ್ಳುವಂತೆ ತರಬೇತಿ ನೀಡಿದರು.

ವಿಜಯದಶಮಿಯ ದಿನದಂದು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ಮತ್ತು ರಾಷ್ಟ್ರಗೀತೆ ನುಡಿಸುವಾಗ ಗೌರವಾರ್ಥವಾಗಿ 3 ಸುತ್ತಿನಲ್ಲಿ 21 ಕುಶಾಲ ಬಾರಿ ಕುಶಲತೋಪುಗಳನ್ನು ಸಿಡಿಸುವುದು ಸಂಪ್ರದಾಯ. ಹೀಗೆ ಸಿಡಿಮದ್ದು ಸಿಡಿಸಿದಾಗ ಉಂಟಾಗುವ ಭಾರೀ ಶಬ್ದದಿಂದ ಆನೆಗಳು ಕುದುರೆಗಳು ಬೆದರುತ್ತವೆ, ವಿಚಲಿತಗೊಳ್ಳುತ್ತವೆ. ಹೀಗಾಗಿ ಆನೆಗಳು ಕುದುರೆಗಳು ಈ ಸಿಡಿಮದ್ದು ಶಬ್ದಕ್ಕೆ ಹೊಂದಿಕೊಳ್ಳಲು ಈ ತಾಲೀಮು ನಡೆಸಲಾಯಿತು.

ಅರಮನೆಯ ಮುಂಭಾಗ ವಸ್ತು ಪ್ರದರ್ಶನ ಆವರಣದಲ್ಲಿ ಆನೆಗಳಿಗೆ ಈ ತರಬೇತಿ ನೀಡಲಾಯಿತು. ಒಟ್ಟು 14 ಆನೆಗಳು, 43 ಕುದುರೆಗಳು ತಾಲೀಮಿನಲ್ಲಿ ಭಾಗವಹಿಸಿದ್ದವು.

ಸಿಡಿಮದ್ದು ಸಿಡಿಸಿದ ವೇಳೆ ಇದೆ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿದ್ದ ಏಕಲವ್ಯ ಮತ್ತು ಈರಣ್ಯ ಆನೆಗಳು ಸ್ವಲ್ಪ ಮಟ್ಟಿಗೆ ವಿಚಲಿತಗೊಂಡವು. ಉಳಿದ ಆನೆಗಳು ಸದ್ದಿಗೆ ಬೆದರದೆ ಆರಾಮಗಿ ನಿಂತಿದ್ದವು. ಇನ್ನು ಸಿಡಿಮದ್ದು ಶಬ್ದಕ್ಕೆ ಕೆಲವು ಕುದುರೆಗಳು ಬೆಚ್ಚಿದರೆ ಬಹುತೇಕ ಕುದುರೆಗಳು ಬೆದರದೆ ಉತ್ತಮವಾಗಿ ಸ್ಪಂದಿಸಿದ್ವು. ಮೊದಲ ಭಾರೀ ಸದ್ದಿನ ತಾಲೀಮಿನಲ್ಲೇ ಯಾವುದೇ ತೊಂದರೆಯಾಗಲಿಲ್ಲ. ದಸರೆಯವರೆಗೂ ಇನ್ನು 2 ಬಾರಿ ಈ ರೀತಿ ತಾಲೀಮು ನೀಡಲಾಗುತ್ತದೆ.

ಸಿಡಿಮದ್ದು ತಾಲೀಮಿನಲ್ಲಿ ಇದೇ ಮೊದಲ ಬಾರಿಗೆ ದಸರಗೆ ಬಂದಿರುವ ಏಕಲವ್ಯ ಆನೆ ಬೆಚ್ಚುತ್ತದೆ ಎಂಬ ಆತಂಕ ಅಧಿಕಾರಿಗಳಲ್ಲಿ ಇತ್ತು. ಆದರೆ ಆ ಆನೆಗಳು ಸಹಾ ಎಲ್ಲಾ ಆನೆಗಳಂತೆ ಉತ್ಸಾಹದಿಂದಲೇ ತಾಲೀಮಿನಲ್ಲಿ ಪಾಲ್ಗೊಂಡವು. ಇದು ಅಧಿಕಾರಿಗಳಿಗೆ ಸಂತಸ ತಂದಿದೆ. ಇನ್ನೂ ಎರಡನೇ ಹಂತದ ಸಿಡಿಮದ್ದು ಸಿಡಿಸುವ ತಾಲೀಮು 29 ಹಾಗೂ 01 ರಂದು ನಡೆಯಲಿದ್ದು, ಈ ಬಾರಿ ಅದ್ದೂರಿ ದಸರೆ ಆಚರಣೆಗೆ ಭರ್ಜರಿ ಸಿದ್ದತೆ ನಡೆದಿದೆ.
Published On - 7:31 am, Fri, 27 September 24