
ಆಷಾಢಮಾಸ ಶುಕ್ರವಾರ ಹಿನ್ನೆಲೆ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬೆಟ್ಟದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಆಷಾಡ ಶುಕ್ರವಾರದ ಪ್ರಯುಕ್ತ ಬೆಳಗಿನ ಜಾವ 3.30ಕ್ಕೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾದವು. ನಾಡ ದೇವತೆ ಚಾಮುಂಡಿಗೆ ಅಭಿಷೇಕ ಅರ್ಚನೆ, ಅಷ್ಟೋತ್ತರ ಪೂಜೆಗಳನ್ನು ದೇವಸ್ಥಾನದ ಅರ್ಚಕರು ನೆರವೇರಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿದೇವತೆಯ ದರ್ಶನ ಪಡೆದರು.

ಆಷಾಡ ಮಾಸದ ಮೊದಲನೇ ಶುಕ್ರವಾರದಂದು ತಾಯಿ ಚಾಮುಂಡಿ ದೇವಿಯ ದರ್ಶನ ಪಡೆದರೆ ಒಳಿತಾಗುವುದು ಎಂಬ ನಂಬಿಕೆ ಭಕ್ತರದು. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ಆ ಮೂಲಕ ದೇವಿಯ ದರ್ಶನ ಪಡೆದು ಪುನೀತರಾದರು.

ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡ ಭಕ್ತರ ಮೊಗದಲ್ಲಿ ಧನ್ಯತಾ ಭಾವ ಮನೆ ಮಾಡಿತ್ತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹಾ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಇನ್ನು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿಯನ್ನು ಭಕ್ತರ ಮೊಗದಲ್ಲಿ ಧನ್ಯತಾ ಭಾವ ಮನೆ ಮಾಡಿತ್ತು.

ಕಳೆದ ವರ್ಷದಂತೆಯೇ ಈ ವರ್ಷವೂ ಬೆಟ್ಟಕ್ಕೆ ಸಾರ್ವಜನಿಕರ ಖಾಸಗಿ ವಾಹನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬೆಟ್ಟದ ತಪ್ಪಲಿನಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಪೊಲೀಸ್ ಬಿಗಿ ಬಂದೋಬಸ್ತ್, ಬ್ಯಾರಿಕೇಡ್ ಕುಡಿಯುವ ನೀರಿನ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು.