ಅಯೋಧ್ಯೆಯ ರಾಮನ ಅವತಾರದ ವಿಶೇಷ ಗಣಪ. ವಿಭಿನ್ನ ಅವತಾರಗಳಲ್ಲಿ ಕಂಗೊಳಿಸುತ್ತಿರುವ ಗೌರಿಸುತ. ಗಣೇಶನನ್ನು ಖರೀಧಿಸಿ ಕೊಂಡೊಯ್ಯುತ್ತಿರುವ ಗಣಪತಿ ಮಂಡಳಿ ಭಕ್ತರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ.
ಹೌದು, ಈಗಾಗಲೇ ಸರ್ಕಾರ ಪಿಓಪಿ ಗಣಪತಿ ಮಾರಾಟವನ್ನು ನಿರ್ಬಂಧಿಸಿ ಆದೇಶಿಸಿದೆ. ಆದರೂ ಸಹ ಪಿಓಪಿ ಗಣಪತಿ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಹೀಗಾಗಿ, ಪರಂಪರಾಗತವಾಗಿ ಮಣ್ಣಿನ ಮೂರ್ತಿ ತಯಾರಿಸಿಕೊಂಡು ಬಂದಿರುವ ಕುಟುಂಬಗಳು ಸಂಕಷ್ಟಕ್ಕೀಡಾಗುವಂತಾಗಿದೆ.
ಕಷ್ಟಪಟ್ಟು ಮಣ್ಣಿನ ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಂದಿದ್ದೇವೆ. ಆದ್ರೆ, ಪಿಓಪಿ ಗಣಪತಿ ವಿಗ್ರಹಗಳ ಹಾವಳಿಯಿಂದ ಬೇಡಿಕೆ ಕುಸಿದಿದೆ ಎಂದು ಚಳ್ಳಕೆರೆ ಮೂಲಕ ಗಣಪತಿ ತಯಾರಕರಾದ ತ್ರಿವೇಣಿ ಅವರು ಅಳಲು ತೋಡಿಕೊಂಡರು .
ಇನ್ನು ಹೊಳಲ್ಕೆರೆ ಮೂಲದ ಗಣಪತಿ ತಯಾರಕ ಸಿದ್ದೇಶ್ ಅವರಿಗೆ ಎಂದಿನ ಬೇಡಿಕೆ ಇದೆ. ಸುಮಾರು ಐನೂರಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಈಗಾಗಲೇ ಬುಕ್ ಆಗಿವೆ. ಅಯೋಧ್ಯೆಯ ಶ್ರೀರಾಮ ಅವತಾರದ ಮೂರ್ತಿಗೆ ಬೇಡಿಕೆಯಿದೆ.
ಅಂತೆಯೇ ಅನೇಕ ಗಣೇಶ ಮಂಡಳಿಗಳವರು ಮೊದಲೇ ಆರ್ಡರ್ ಮಾಡಿದ್ದಾರೆ. ಆದ್ರೆ, ಪಿಓಪಿ ಗಣಪ ಬ್ಯಾನ್ ಆಗಿದ್ದು ನಗರಸಭೆ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಂತಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಉತ್ಸವ ನಾಡಿನ ಜನರ ಗಮನ ಸೆಳೆದಿದೆ. ಆದ್ರೆ, ದುರ್ಗದಲ್ಲೇ ಪಿಓಪಿ ಗಣಪತಿಗಳ ಹಾವಳಿ ಹೆಚ್ಚಿದ್ದು, ಮಣ್ಣಿನ ಗಣಪತಿ ತಯಾರಕರಿಗೆ ಪೆಟ್ಟು ಬಿದ್ದಿದ್ದು ಅಲ್ಲದೆ ಪರಿಸರ ನಾಶದ ಭೀತಿ ಸೃಷ್ಠಿಸಿದೆ. ಹೀಗಾಗಿ, ನಗರಸಭೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.