ಶ್ರೀರಾಮಾನುಜಾಚಾರ್ಯರ ಚಿನ್ನದ ಪ್ರತಿಮೆಗೆ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಶ್ರೀರಾಮಾನುಜಾಚಾರ್ಯ ಪ್ರತಿಮೆ ಅನಾವರಣಗೊಳಿಸಲಾಗಿದೆ. ಪದ್ಮಾಸನದ ಭಂಗಿಯಲ್ಲಿನ 216 ಅಡಿ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಮುಚ್ಚಿಂತಲ್ ಬಳಿ ಶ್ರೀರಾಮಾನುಜಾಚಾರ್ಯ ವಿಶೇಷ ಆಶ್ರಮದಲ್ಲಿ ಬರೋಬ್ಬರಿ 45 ಎಕರೆ ವಿಶಾಲ ಪ್ರದೇಶದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ಹೈದರಾಬಾದ್ ಬಳಿ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಮುಚ್ಚಿಂತಲ್ನಲ್ಲಿ ಪ್ರತಿಮೆ ಅನಾವರಣಗೊಂಡಿದೆ.
ಸಾಮಾಜಿಕ ಸಂತ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ ‘ದಿವ್ಯ ಸಾಕೇತಂ’ ಆಶ್ರಮದಲ್ಲಿ ತಲೆ ಎತ್ತಿದೆ. ಪ್ರತಿಮೆ ಲೋಕಾರ್ಪಣೆ ಬಳಿಕ ಪ್ರಧಾನಿ ಮೋದಿ ಸಭಾಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
11ನೇ ಶತಮಾನದ ಸಂತ ಶ್ರೀರಾಮಾನುಜರ 1,000ನೇ ಜನ್ಮೋತ್ಸವ ಸಂಭ್ರಮದ ಈ ಸಂದರ್ಭದಲ್ಲಿ ರಾಮಾನುಜಾಚಾರ್ಯರ ಪಂಚಲೋಹದ ಬೃಹತ್ ಪ್ರತಿಮೆ ಅನಾವರಣಗೊಂಡಿದೆ. ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ (Chinna Jeeyar Swamy) ಆಶ್ರಮದ ಸಮೀಪದಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಂಚು ಹಾಗೂ ಜಿಂಕ್ನಿಂದ ನಿರ್ಮಾಣಗೊಂಡಿರುವ ಈ ಪ್ರತಿಮೆಯು ಕುಳಿತ ಭಂಗಿಯಲ್ಲಿ ಇರುವ ಪ್ರಪಂಚದ ಅತೀ ಎತ್ತರದ ಮೂರ್ತಿಗಳಲ್ಲಿ ಒಂದಾಗಿದೆ.
ಪ್ರಧಾನಿ ಮೋದಿ ಅಮೆರಿಕಕ್ಕೆ ಹೋದಾಗ ಉಪವಾಸದಲ್ಲಿದ್ದರು. ನವರಾತ್ರಿ ಅಂಗವಾಗಿ ಉಪವಾಸ ವ್ರತಾಚರಣೆಯಲ್ಲಿದ್ದರು. ವೈದಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ಇದು ಪ್ರಧಾನಿ ಮೋದಿಯವರ ವ್ರತನಿಷ್ಠೆ ತೋರಿಸುತ್ತದೆ ಎಂದು ಕಾರ್ಯಕ್ರಮದಲ್ಲಿ ಚಿನ್ನ ಜೀಯರ್ ಸ್ವಾಮಿ ಹೇಳಿದ್ದಾರೆ.