
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ವರುಣ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ನೀರು ರಸ್ತೆಗೆ ಹರಿದುಬಂದು ರಸ್ತೆಗಳು ಮುಳುಗುತ್ತಿವೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಮೂಕ ಪ್ರಾಣಿಗಳು ಮಳೆ ಗಾಳಿಗೆ ಜೀವ ಕಳೆದುಕೊಳ್ಳುತ್ತಿವೆ.

ಈ ವರ್ಷದ ಮಳೆಯಲ್ಲಿ ಗಾಳಿಯ ಪ್ರಮಾಣ ಜಾಸ್ತಿಯಾಗಿದ್ದು, ಮಳೆ, ಗಾಳಿಗೆ ಪಕ್ಷಿಗಳ ಗೂಡುಗಳು ನಾಶವಾಗುತ್ತಿವೆ. ಹೀಗಾಗಿ ಎಳೆಯ ಪಕ್ಷಿಗಳು ಸಾಯುತ್ತಿದ್ದು, ಕಳೆದ ಜೂನ್ನಿಂದ ಜುಲೈ 31ರವರೆಗೆ ಬರೋಬ್ಬರಿ 2 ಸಾವಿರ ಪಕ್ಷಿಗಳು ಮೃತಪಟ್ಟಿವೆ. ಅಷ್ಟೇ ಅಲ್ಲದೆ ಗಾಯಗೊಳ್ಳುತ್ತಿರುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಿದೆ.

ಮಳೆ ಹಾಗೂ ಗಾಳಿಯಿಂದಾಗಿ ಪಕ್ಷಿಗಳಿಗೆ ಗಾಯಗಳಾಗುತ್ತಿವೆ. ಜೂನ್ 1 ರಿಂದ ಜುಲೈ 31 ರವರೆಗೆ, ರಕ್ಷಣಾ ಕೇಂದ್ರಗಳು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಾಯಗೊಂಡ ಪಕ್ಷಿಗಳನ್ನು ರಕ್ಷಿಸಿವೆ.

ಸಾಮಾನ್ಯವಾಗಿ, ಬೇಸಿಗೆಯ ತಿಂಗಳಲ್ಲಿ ಪಕ್ಷಿಗಳು ಸಾಯುವುದನ್ನ ನೋಡಿರ್ತೀವಿ. ಆದ್ರೆ ಈ ವರ್ಷ ಜೂನ್ ಹಾಗೂ ಜುಲೈ ತಿಂಗಳ ಗಾಳಿ ಮಳೆಗೆ ಪಕ್ಷಿಗಳ ಸಾವು ಹೆಚ್ಚಾಗಿದೆ.

ಎರಡು ತಿಂಗಳಲ್ಲಿ ಪಕ್ಷಿಗಳನ್ನ ರಕ್ಷಿಸಲು ಒಟ್ಟು 1,479 ರಕ್ಷಣಾ ಕರೆಗಳು ಬಂದಿದ್ದು, ಅದ್ರಲ್ಲಿ 515 ಪಕ್ಷಿಗಳನ್ನು ರಕ್ಷಿಸಲಾಗಿದೆ. ಇನ್ನು ಜನವರಿಯಿಂದ ಜುಲೈವರೆಗೆ ಒಟ್ಟು ನಗರದಾದ್ಯಂತ 7,000 ಕ್ಕೂ ಹೆಚ್ಚು ಪಕ್ಷಿಗಳನ್ನು ರಕ್ಷಿಸಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಪಕ್ಷಿಗಳ ರಕ್ಷಣಾ ಕೇಂದ್ರಗಳು ಕಡಿಮೆ ಇವೆ. ಇವುಗಳನ್ನ ಹೆಚ್ಚಳ ಮಾಡಿದ್ದೆ ಆಗಿದ್ದಲ್ಲಿ ಪಕ್ಷಿಗಳನ್ನ ರಕ್ಷಣೆ ಮಾಡಬಹುದಾಗಿದೆ ಅಂತ ಪಕ್ಷಿ ಪ್ರಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕಾಗಿದೆ.