
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗರಕಹಳ್ಳಿ ರೈತ ಇಡೀ ಸ್ಯಾಂಡಲ್ವುಡ್ ನಟಿಮಣಿಯರನ್ನೇ ತನ್ನ ಹೊಲದಲ್ಲಿ ನಿಲ್ಲಿಸಿದ್ದಾನೆ. ಸೌತೆಕಾಯಿ ಬೆಳೆ ಮೇಲೆ ದೃಷ್ಟಿ ಬೀಳದಂತೆ ನಟಿಮಣಿಯರ ಸುಂದರವಾದ ಭಾವಚಿತ್ರಗಳನ್ನು ಹೊಲದಲ್ಲಿ ಅಳವಡಿಸುವ ಮೂಲಕ ತನ್ನ ಬೆಳೆ ಕಾಪಾಡಿಕೊಳ್ಳಲು ಮುಂದಾಗಿದ್ದಾನೆ.

ಸ್ಯಾಂಡಲ್ವುಡ್ ನಟಿಯರಾದ ರಮ್ಯ,ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ,ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಸೋನಾಲ್ ಸೇರಿ ಇನ್ನು ಇಡೀ ಸ್ಯಾಂಡಲ್ವುಡ್ ನಟಿಯರ ಭಾವಚಿತ್ರವನ್ನು ಫ್ಲೆಕ್ಸ್ ಮಾದರಿಯಲ್ಲಿ ಹಾಕಿದ್ದಾನೆ. ಈ ರೈತ ಮಾಡಿದ ಈ ಡಿಫ್ರೆಂಟ್ ಐಡಿಯಾ ಇಡೀ ಊರಿನವರಿಗೆ ಹೊಸದೆನಿಸಿದೆ.

ಅಲ್ಲದೇ ಎಲ್ಲಾ ರೈತರು ತಮ್ಮ ತಮ್ಮ ಬೆಳೆಗೆ ದೃಷ್ಟಿ ತಾಕದಂತೆ ಮಾಡಲು ಇಂಥದ್ದೇ ಐಡಿಯಾ ಮಾಡಿದರೆ ಹೇಗಿರುತ್ತೆ ಅಂತ ಚರ್ಚೆ ಶುರು ಮಾಡಿದ್ದಾರೆ.

ಹೀಗೆ ಹೊಲದಲ್ಲಿ ನಟಿಮಣಿಯರ ಮುಗುಳುನಗುವ ಸುಂದರ ಫೊಟೋಗಳನ್ನು ಅಳವಡಿಸುವ ಮೂಲಕ ದಾರಿ ಮಧ್ಯೆ ಹೋಗುವವರ ದೃಷ್ಟಿಯನ್ನು ಹಿರೋಯಿನ್ ಗಳ ಮೇಲೆ ನೆಟ್ಟಿರುವಂತೆ ಮಾಡಿ ಬೆಳೆ ಮೇಲೆ ದೃಷ್ಟಿ ತಾಕದೇ ಇರಲಿ ಎನ್ನುವುದು ಈ ರೈತನ ಐಡಿಯಾ.

ಚನ್ನಪಟ್ಟಣ ಭಾಗದಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಅದರಲ್ಲೂ ಆನೆ ಕರಡಿ ಮತ್ತು ಕಾಡುಹಂದಿಗಳ ಉಪಟಳದಿಂದ ರೈತರು ಹಾಕಿದ ಬೆಳೆ ಕೈಗೆ ಬಂತೂ ಎನ್ನವಷ್ಟರಲ್ಲಿ ಹಾಳಾಗಿರುತ್ತದೆ. ಹೀಗಿರುವಾಗ ಒಳ್ಳೆಯ ಬೆಳೆ ಬಂದ್ರೂ ಮನುಷ್ಯನ ಕೆಟ್ಟ ದೃಷ್ಟಿ ಮಾತ್ರ ತಾಕಬಾರರು ಎಂಬ ಆತಂಕಕ್ಕೆ ಒಳಗಾಗಿರುವ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ನಾನಾ ತರಹದ ಐಡಿಯಾ ಮಾಡುತ್ತಿದ್ದಾರೆ.

ತಮ್ಮ ಬೆಳೆಗೆ ಏನೂ ಆಗದಿರಲಿ ಎಂದು ಹಳ್ಳಿಯ ರೈತರು ಬೆದರುಗೊಂಬೆ, ದೃಷ್ಟಿ ಗೊಂಬೆಗಳನ್ನು ತಮ್ಮ ಜಮೀನಿನಲ್ಲಿ ಇಟ್ಟಿರುವುದನ್ನು ನಾವು ಕಾಣುತ್ತೇವೆ. ಆದರೆ ರಾಮನಗರಲ್ಲಿ ಈ ರೈತ ತನ್ನ ಬೆಳೆಯ ರಕ್ಷಣೆಗಾಗಿ ನಟಿಯರ ಫ್ಲೆಕ್ಸ್ ಗಳನ್ನು ಹೊಲಸದ ಸುತ್ತಲೂ ಹಾಕಿದ್ದಾರೆ. ಸದ್ಯ ರೈತನ ಈ ಐಡಿಯಾ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ

ಈ ರೀತಿ ಮಾಡುತ್ತಿರುವುದು ಹೊಸದೇನಲ್ಲ. ಚಿಕ್ಕಬಳ್ಳಾಪುರ ಸೇರಿದಂತೆ ಇನ್ನಿತರ ಜಿಲ್ಲೆಗಳ ಹೊಲದಲ್ಲೂ ಸಹ ಸನ್ನಿ ಲಿಯೋನ್ ಫೋಟೋವನ್ನು ಬ್ಯಾನರ್ ಮಾಡಿ ಹಾಕಿಸಿರುವ ಉದಾಹರಣೆ ಇದೆ.