ಭಾರತದ ಮಾಜಿ ಪ್ರಧಾನಿ,ಮಹಾನ್ ವಾಗ್ಮಿ ಅಟಲ್ ಬಿಹಾರಿ ವಾಜಪೇಯಿ ಅವರು 16 ಆಗಸ್ಟ್ 2018 ರಂದು ನಿಧನರಾದರು. ಇಂದು ಅವರ 5ನೇ ವರ್ಷದ ಪುಣ್ಯ ತಿಥಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ನೀವು ತಿಳಿದುಕೊಳ್ಳಬೇಕಾದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.
ಅಟಲ್ ಬಿಹಾರಿ ವಾಜಪೇಯಿ ಅವರು 25 ಡಿಸೆಂಬರ್ 1924 ರಂದು (ಕ್ರಿಸ್ಮಸ್ ದಿನ) ಜನಿಸಿದರು. ತಾಯಿ ಕೃಷ್ಣಾ ದೇವಿ ಮತ್ತು ಅವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ.
ಅಟಲ್ ಬಿಹಾರಿ ವಾಜಪೇಯಿ ಅವರು ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರೂ ಕೂಡ ಮಾಂಸಾಹಾರ ಎಂದರೆ ಅಚ್ಚು ಮೆಚ್ಚು. ವಿಶೇಷವಾಗಿ ಸಮುದ್ರಹಾರಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದರು.
10ನೇ ತರಗತಿಯಲ್ಲಿ ಕವನಗಳನ್ನು ಬರೆಯುವ ಅತಿಯಾದ ಆಸಕ್ತಿಯನ್ನು ಹೊಂದಿದ್ದರು. "ಹಿಂದೂ ತಾನ್ ಮನ್, ಹಿಂದೂ ಜೀವನ್, ರಾಗ್ ರಾಗ್ ಹಿಂದೂ-ಮೇರಾ ಪರಿಚಯ್" ಮುಂತಾದ ಕವಿತೆಗಳನ್ನು ಬರೆದಿದ್ದಾರೆ.
ವಾಜಪೇಯಿ ಅವರು ಮರಾಠಿ ಭಾಷೆಯಲ್ಲೂ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರು ವೀರ್ ಸಾವರ್ಕರ್ ಅವರ ಕವಿತೆಗಳನ್ನು ಮರಾಠಿಯಿಂದ ಹಿಂದಿಗೆ ಅನುವಾದಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಮತ್ತು ಅವರ ಹಿರಿಯ ಸಹೋದರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ 23 ದಿನಗಳ ವರೆಗೆ ಜೈಲುವಾಸವನ್ನೂ ಅನುಭವಿಸಿದರು.
ಅಟಲ್ ಬಿಹಾರಿ ವಾಜಪೇಯಿ ಮತ್ತು ಅವರ ತಂದೆ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಅವರು ಮತ್ತು ಅವರ ತಂದೆ ತಮ್ಮ ಕಾನೂನು ಅಧ್ಯಯನಕ್ಕಾಗಿ ಒಂದೇ ಕಾನೂನು ಕಾಲೇಜಿಗೆ (ಕಾನ್ಪುರದ ಡಿಎವಿ ಕಾಲೇಜು) ಒಟ್ಟಿಗೆ ದಾಖಲಾತಿ ಪಡೆದು, ಹಾಸ್ಟೆಲ್ನಲ್ಲಿ ಒಂದೇ ಕೊಠಡಿಯನ್ನು ಹಂಚಿಕೊಂಡಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವರು ಮದುವೆಯಾಗಿಲ್ಲ. ಆದರೆ ಪುತ್ರಿ ನಮಿತಾ ಭಟ್ಟಾಚಾರ್ಯ ಅವರನ್ನು ದತ್ತು ಪಡೆದುಕೊಂಡಿದ್ದರು. 2004 ರಲ್ಲಿ, ಅಟಲ್ ಬಿಹಾರಿ ಅವರು ತಮ್ಮ ಕೊನೆಯ ಚುನಾವಣೆಯಲ್ಲಿ ಲಕ್ನೋದಿಂದ ಸ್ವತಂತ್ರ ಅಭ್ಯರ್ಥಿಯಾದ ರಾಮ್ ಜೇಠ್ಮಲಾನಿ ಅವರ ವಿರುದ್ಧ ಗೆದ್ದರು.