
25 ವರ್ಷಗಳಿಂದೆ ಮನೆ ಬಿಟ್ಟು ಹೋಗಿದ್ದ ಬಳ್ಳಾರಿ ಮೂಲದ ಸಾಕವ್ವ ಪತ್ತೆಯಾಗಿದ್ದು, ಇಂದು (ಡಿಸೆಂಬರ್ 24) ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇನ್ನು ಏರ್ಪೋರ್ಟ್ನಲ್ಲಿ ಮಕ್ಕಳು ತಾಯಿಯನ್ನು ಬಿಗಿದಪ್ಪಿ ಗಳಗಳನೆ ಅತ್ತುಬಿಟ್ಟರು. ಈ ವೇಳೆ ಮಕ್ಕಳ-ತಾಯಿ ಪ್ರೀತಿ ನೋಡಿ ಅಲ್ಲಿದ್ದವರು ಆನಂದ ಭಾಷ್ಪ ಸುರಿಸಿದರು

ಮಾಡಿದ್ದರು. ಬಳಿಕ ಸಾಕವ್ವನನ್ನ ಅಲ್ಲಿಂದ ಕರೆತರಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ತಮ್ಮ ಸಿಬ್ಬಂದಿಗಳನ್ನು ಮಂಡಿಗೆ ಕಳುಹಿಸಿದ್ದರು. ಅದರಂತೆ ಇಂದು ಇಂಡಿಗೋ ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದು ಮಕ್ಕಳಿಗೆ ಒಪ್ಪಿಸಿದರು.

ಬಳ್ಳಾರಿ ಮೂಲದ ಸಾಕಮ್ಮಾ 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ. ಈಕೆ ಮನೆಯಿಂದ ದೂರವಾಗಿ 25 ವರ್ಷಗಳು ಕಳೆದಿತ್ತು. ಆ ಮಹಿಳೆಯ ಸುಳಿವೇ ಸಿಗದ ಕಾರಣ ಕುಟುಂಬಸ್ಥರು ಮೃತಪಟ್ಟಿದ್ದಾಳೆ ಎಂದು ಅಂದಾಜಿಸಿ, ಆಕೆಯ ತಿಥಿ ಕಾರ್ಯವನ್ನೂ ಮಾಡಿದ್ದರು.

ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗುವಿನ ತಾಯಿಯಾಗಿದ್ದ ಸಾಕಮ್ಮಾ, ಮಾನಸಿಕ ಸಮಸ್ಯೆ ಹೊಂದಿದ್ದರು. ಮಕ್ಕಳಾದ ವಿಕ್ರಮ್, ಬೋಧರಾಜ್, ಲಕ್ಷ್ಮೀ ಚಿಕ್ಕವರಿರುವಾಗಲೇ ಹೊಸಪೇಟೆಯಿಂದ ಆಕಸ್ಮಿಕವಾಗಿ ರೈಲು ಹತ್ತಿದ್ದ ಸಾಕಮ್ಮ, ಹಿಮಾಚಲ ಪ್ರದೇಶಕ್ಕೆ ಹೋಗಿದ್ದರು. ಅನಾಥವಾಗಿದ್ದ ಸಾಕಮ್ಮಾ ಹಿಮಾಚಲ ಪ್ರದೇಶದ ಮಂಡಿಯ ನಿರಾಶ್ರಿತ ಶಿಬಿರದಲ್ಲೇ ಆಶ್ರಯ ಪಡೆದಿದ್ದರು.

ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮಂಡ್ಯ ಮೂಲದ ಐಪಿಎಸ್ ಅಧಿಕಾರಿ ರವಿನಂದನ್ ಅವರು ಸಾಕಮ್ಮಾಳ ಬಗ್ಗೆ ಬೆಂಗಳೂರಿನಲ್ಲಿರುವ ತಮ್ಮ ಸ್ನೇಹಿತರಿಗೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು. ಐಪಿಎಸ್ ಅಧಿಕಾರಿಯ ಸ್ನೇಹಿತ ಸಾಕಮ್ಮ ಅವರ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಗಮನಿಸಿದ್ದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ ಮಣಿವಣ್ಣನ್, ಆ ಬಳಿಕ ಐಪಿಎಸ್ ಅಧಿಕಾರಿ ರವಿನಂದನ್ ಜೊತೆ ಚರ್ಚೆ ನಡೆಸಿ, ಮಾಹಿತಿ ಪಡೆದಿದ್ದರು. ಬಳ್ಳಾರಿ ಮೂಲದ ಅಜ್ಜಿ ಬಗ್ಗೆ ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಬಳಿಕ ಮಣಿವಣ್ಣನ್ ನಿರ್ದೇಶನದ ಮೇರೆಗೆ ಮೂವರು ಸಿಬ್ಬಂದಿಗಳ ತಂಡ ಹಿಮಾಚಲ ಪ್ರದೇಶದ ಮಂಡಿಗೆ ಹೋಗಿತ್ತು. ಅಲ್ಲಿಗೆ ಹೋದಾಗ ಅಜ್ಜಿಗೆ ಮಕ್ಕಳು, ಕುಟುಂಬ ಇದೆ ಎಂಬ ಮಾಹಿತಿ ತಿಳಿದಿದೆ. ಮಾಹಿತಿ ತಿಳಿಯುತ್ತಲೇ ಕುಟುಂಬಸ್ಥರನ್ನು ಪತ್ತೆ ಹಚ್ಚಿದ ಅಧಿಕಾರಿಗಳು, ಮಂಡಿಯಿಂದಲೇ ವೀಡಿಯೋ ಕಾಲ್ ಮೂಲಕ ಮಕ್ಕಳ ಜೊತೆ ತಾಯಿ ಸಾಕಮ್ಮಾಳನ್ನು ಮಾತನಾಡಿಸಿದ್ದರು.

ತಾಯಿ ಜೊತೆ ಮಾತನಾಡುವಾಗ ಮಕ್ಕಳು ಭಾವುಕರಾಗಿ ಕಣ್ಣೀರು ಹಾಕಿದರು. ತಾಯಿ ಸತ್ತಿದ್ದಾಳೆ ಎಂದು ಈಗಾಗಲೇ ಎಲ್ಲಾ ಕಾರ್ಯ ಮುಗಿಸಿದ್ದ ಮಕ್ಕಳಿಗೆ ಅಧಿಕಾರಿಗಳ ಪ್ರಯತ್ನದಿಂದ ಹೆತ್ತಮ್ಮ ಮತ್ತೆ ಮನೆ ಸೇರುವಂತಾಗಿದೆ. ಮಣಿವಣ್ಣನ್ ಹಾಗೂ ಐಪಿಎಸ್ ಅಧಿಕಾರಿ ರವಿನಂದನ್ ಅವರಿಗೊಂದು ಸೆಲ್ಯೂಟ್ ಹೇಳಲೇಬೇಕು.