
ಬೆಂಗಳೂರು ನಂತರ ಅತಿ ಉದ್ದದ ರನ್ ವೇ ಹೊಂದಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದಿನಿಂದ (ಆಗಸ್ಟ್ 31) ವಿಮಾನ ಹಾರಾಟ ಶುರುವಾಗಿದೆ. ಬೆಂಗಳೂರಿನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬಂದಿಳಿದಿದ್ದು, ಮಲೆನಾಡಿಗರ ಕನಸು ನೆರವೇರಿದೆ.

ಬೆಳಗ್ಗೆ 9.55ಕ್ಕೆ ಬೆಂಗಳೂರಿನಿಂದ ಹೊರಟ್ಟಿದ್ದ ಮೊದಲ ವಿಮಾನ ಬೆಳಗ್ಗೆ 11.05 ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿದೆ.ಇನ್ನು ಈ ಮೊದಲ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಯಾಣಿಸಿದ್ದರು.

ಕಳೆದ ಫೆಬ್ರವರಿ.27ರಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಜನ್ಮದಿನದಂದೇ ಸುಮಾರು 450 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗದ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದರು.

ಮಲೆನಾಡಿನ ಏಕೈಕ ಏರ್ಪೋರ್ಟ್ ಇದಾಗಿದ್ದು, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಕರಾವಳಿ ಭಾಗಕ್ಕೂ ಅನುಕೂಲವಾಗಲಿದೆ.ಆ.11ರಿಂದ ಆರಂಭವಾಗಬೇಕಿದ್ದ ವಿಮಾನಯಾನ ಸೇವೆಯು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು.

ಶಿವಮೊಗ್ಗದಲ್ಲಿ ಏರ್ಪೋರ್ಟ್ ಆಗಬೇಕೆಂದು ಬಹಳ ವರ್ಷಗಳ ಕನಸಿತ್ತು. ನಿಮ್ಮೆಲ್ಲರ ಆಶೀರ್ವಾದ, ಬೆಂಬಲ, ಪ್ರಧಾನಿ ವಿಶೇಷ ಆಸಕ್ತಿಯಿಂದ ಕನಸು ನನಸಾಗಿದೆ. ಕೆಲವೇ ವರ್ಷಗಳಲ್ಲಿ ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿ ಮಾಧ್ಯಮಗಳಿಗೆ ತಿಳಿಸಿದರು.

ಶಿವಮೊಗ್ಗ ಏರ್ಪೋರ್ಟ್ ನಿರ್ಮಾಣಕ್ಕೆ ಯಾವುದೇ ತಕರಾರು ಇಲ್ಲದೆ ಸುಗಮವಾಗಿ ನಡೆಯಲು ಪ್ರಮುಖ ಕಾರಣ ಅಲ್ಲಿನ ರೈತ ಕುಟುಂಬ. ಹಾಗಾಗಿ ಎಲ್ಲಾ ಗೌರವ ಆ ಭಾಗದ ರೈತರಿಗೆ ಸಲ್ಲಬೇಕು. ಸಹಕಾರ ಕೊಟ್ಟ ರೈತರಿಗೆ ಧನ್ಯವಾದ ತಿಳಿಸುತ್ತೇನೆ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Published On - 3:13 pm, Thu, 31 August 23