
ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ವರ್ಷದ ಮೊದಲ ಹಿಮಪಾತ ಶುರುವಾಗಿದೆ. ಹೀಗಾಗಿ ಅಲ್ಲಿನ ಮನೆ, ರಸ್ತೆ, ದೇವಾಲಯಗಳು ಸೇರಿದಂತೆ ಇಡೀ ಪ್ರದೇಶ ಹಿಮದಲ್ಲಿ ಮುಚ್ಚಿ ಹೋಗಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪಕ್ಕದ ಪ್ರದೇಶದಲ್ಲಿ ಎರಡು ದಿನಗಳ ಕಾಲ ಅಲ್ಪ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇಲ್ಲಿ ಕನಿಷ್ಠ ತಾಪಮಾನವು ಎರಡರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ನಿರೀಕ್ಷೆಯಿರುವುದರಿಂದ ದೆಹಲಿಯು ಜನವರಿ 16 ಮತ್ತು 17 ರಂದು ತೀವ್ರ ಶೀತ ಅಲೆಯನ್ನು ಅನುಭವಿಸುವ ಸಾಧ್ಯತೆಯಿದೆ.

ಜನವರಿ 15-17 ರಿಂದ ರಾಜಸ್ಥಾನದ ಉತ್ತರ ಪ್ರದೇಶಗಳಲ್ಲಿ ಶೀತ ಗಾಳಿ ಹೆಚ್ಚಾಗಿ ಜನರು ತೀವ್ರ ಶೀತದ ಪರಿಸ್ಥಿತಿಗಳನ್ನು ಅನುಭವಿಸುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲೂ ಶೀತ ಗಾಳಿ ಹೆಚ್ಚಾಗಲಿದೆ.

ಉತ್ತರಾಖಂಡದ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಿದ್ದು ತಂಪು ಗಾಳಿ ಬೀಸುತ್ತಿದೆ. ಕೇದಾರನಾಥ, ಬದರಿನಾಥ್, ಔಲಿ ಸೇರಿದಂತೆ ಎತ್ತರದ ಪ್ರದೇಶಗಳು ಬಿಳಿ ಹಿಮದಿಂದ ಆವೃತವಾಗಿವೆ.

ಬದರಿನಾಥ್ನ ಸಿಂಗ್ದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಹಿಮ ಸಂಗ್ರಹವಾಗಿದೆ. ಔಲಿಯಲ್ಲೂ ಹಿಮಪಾತ ಆಗುತ್ತಿದೆ. ಕೇದಾರನಾಥ ಧಾಮದಲ್ಲೂ ಭಾರೀ ಹಿಮಪಾತವಾಗಿದೆ. ಒಂದು ಕಡೆ ಹಿಮ ಬೀಳುತ್ತಿರುವುದನ್ನು ನೋಡಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.