ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಸೂಚನೆ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಹೇಳಿದ್ದೇನು?

ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೂಚನೆ ನೀಡಿದೆ. ಆ ಮೂಲಕ ಕರ್ನಾಟಕಕ್ಕೆ ಬಿಗ್ ಶಾಕ್​ ಹೊಡೆದಂತಾಗಿದೆ. ಸದ್ಯ ಈ ವಿಚಾರವಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ ಪ್ರತಿಕ್ರಿಯೆ ಹೀಗಿದೆ.

ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಸೂಚನೆ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 28, 2023 | 8:30 PM

ಮೈಸೂರು, ಆಗಸ್ಟ್ 28: ತಮಿಳುನಾಡಿಗೆ (Tamil Nadu) ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸೂಚನೆ ನೀಡಿದೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ಮುಂದಿನ 15 ದಿನಗಳವರೆಗೆ 5,000 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದೆ. ಪ್ರತಿದಿನ 24 ಸಾವಿರ ಕ್ಯೂಸೆಕ್ ಹರಿಸುವಂತೆ ಅವರು ವಾದಿಸಿದ್ದರು. ನಾವು ಅಷ್ಟು ನೀರು ಹರಿಸಲು ಆಗುವುದಿಲ್ಲವೆಂದು ವಾದ ಮಂಡಿಸಿದ್ದು, ಹಾಗಾಗಿ ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲು ಸೂಚಿಸಲಾಗಿದೆ ಎಂದರು.

ಸಂಕಷ್ಟ ಸೂತ್ರದಂತೆ ಅಷ್ಟು ನೀರು ಹರಿಸಲು ಆಗಲ್ಲವೆಂದು ಮನವರಿಕೆ ಮಾಡುತ್ತೇವೆ. ನಮ್ಮ ಕಾನೂನು ಘಟಕದ ಜೊತೆ ಮಾತನಾಡುತ್ತೇನೆ. ಜಲಸಂಪನ್ಮೂಲ ಇಲಾಖೆ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದೇ ಅಂತಿಮವಲ್ಲ, ನಾಳೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತೇವೆ: ಡಿ.ಕೆ.ಶಿವಕುಮಾರ್​

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ಇದೇ ಅಂತಿಮವಲ್ಲ, ನಾಳೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್‌ ನೀಡುವ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ. ನಮ್ಮ ರೈತರ ಹಿತ ಮುಖ್ಯ, ವಿವಾದ ಬಗೆಹರಿಯುವುದು ಅಷ್ಟೇ ಮುಖ್ಯ. ನಾವು ಬಿಟ್ಟ ನೀರು ಬಿಳಿಗುಂಡ್ಲು ಮಾಪನ ಕೇಂದ್ರ ತಲುಪಲು 5 ದಿನ ಬೇಕು. ಬೀಗ ಅವರ ಕೈಯಲ್ಲಿದೆ, ಎಷ್ಟು ನೀರು ಬಿಡುತ್ತಾರೆ ಎಂಬುದರಲ್ಲಿ ಗೊಂದಲವಿಲ್ಲ ಎಂದು ಹೇಳಿದ್ದಾರೆ.

ಡ್ರೈ ರನ್‌ ನಡೆಸಿ ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದೇವೆ

ಆ.30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಕಾರ್ಯಕ್ರಮ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಡ್ರೈ ರನ್‌ ಮಾಡಿದ್ದೇವೆ. ಡ್ರೈ ರನ್‌ ನಡೆಸಿ ಮಾಡಿಕೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದೇವೆ. ‌ನಾಳೆಯೂ ಪರಿಶೀಲನೆ ಮಾಡುತ್ತೇವೆ. ನಾಡಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗುವವರು ಮಾತ್ರ ಮುಖ್ಯವಲ್ಲ.

ಇದನ್ನೂ ಓದಿ: ಕರ್ನಾಟಕಕ್ಕೆ ಬಿಗ್ ಶಾಕ್, ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ

ಈಗಾಗಲೇ 50 ಲಕ್ಷ ಫಲಾನುಭವಿಗಳ ಪಟ್ಟಿ ರೆಡಿಯಾಗಿದೆ. ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳಿಗೂ ಯೋಜನೆ ಹಣ ತಲುಪುತ್ತೆ. ಗೃಹಲಕ್ಷ್ಮೀ ಯೋಜನೆ ಪಕ್ಷಾತೀತವಾಗಿದೆ‌. ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ಎಲ್ಲಾ ಶಾಸಕರು ಮುಂದಾಗಬೇಕು ಎಂದರು.

ನಿಖಿಲ್ ಕುಮಾರಸ್ವಾಮಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಿಖಿಲ್ ಕುಮಾರಸ್ವಾಮಿ ನಮ್ಮ ಹುಡುಗ, ಅವನಿಗೆ ಒಳ್ಳೆಯದಾಗಲಿ. ನಿಖಿಲ್ ಮುಂದಿನ 5 ವರ್ಷ ಸಿನಿಮಾದಲ್ಲಿರಲಿ ಎಂದು ಹೇಳಿದ್ದ ಮಾಜಿ ಸಿಎಂ ಹೆಚ್​ಡಿ ಹೇಳಿದ್ದಾರೆ. ಅವರ ಕುಟುಂಬದ ವಿಚಾರದ ಬಗ್ಗೆ ನಾನು ಮಾತಾಡುವುದಿಲ್ಲ ಎಂದು ಹೇಳಿದರು.

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬಾರದು: ಗೋವಿಂದ ಕಾರಜೋಳ 

ಬೆಂಗಳೂರಿನಲ್ಲಿ ಟಿವಿ9ಗೆ ಮಾಜಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, ನೀರು ಕಡಿಮೆಯಾಗಿದ್ದರಿಂದ ನಮ್ಮ ರೈತರಿಗೆ ನೀರು ಕೊಡುವ ಪರಿಸ್ಥಿತಿ ಇಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬಾರದು. CWRC ಸೂಚನೆಯನ್ನು ಕರ್ನಾಟಕ ಸರ್ಕಾರ ಒಪ್ಪಬಾರದು. ನಾಳಿನ ಸಭೆಯಲ್ಲಿ ನೀರು ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಈ ವರ್ಷ ನೀರು ಬಿಡಲು ಆಗಲ್ಲವೆಂದು ‘ಸುಪ್ರೀಂ’ಗೆ ಮನವರಿಕೆ ಮಾಡಲಿ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.