AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಪಕ್ಷ ನಾಯಕ ಸ್ಥಾನ ಕೊಡಿ ಅಂತ ಕೇಳಲು ಬಂದಿಲ್ಲವೆಂದ ಬಸವರಾಜ ಬೊಮ್ಮಾಯಿ; ಏನಂದ್ರು ಅಮಿತ್ ಶಾ?

Karnataka Politics; ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕರಿಲ್ಲದಿದ್ದರೆ ಜನರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡುತ್ತದೆ. ಪಕ್ಷದ ಬಗ್ಗೆಯೂ ತಪ್ಪು ಸಂದೇಶ ಹೋಗುತ್ತದೆ. ಯಾರನ್ನಾದರೂ ವಿರೋಧ ಪಕ್ಷದ ನಾಯಕನ್ನಾಗಿ ಮಾಡಿ. ಅವರ ನೇತೃತ್ವದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಅಮಿತ್ ಶಾ ಬಳಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

ಪ್ರತಿಪಕ್ಷ ನಾಯಕ ಸ್ಥಾನ ಕೊಡಿ ಅಂತ ಕೇಳಲು ಬಂದಿಲ್ಲವೆಂದ ಬಸವರಾಜ ಬೊಮ್ಮಾಯಿ; ಏನಂದ್ರು ಅಮಿತ್ ಶಾ?
ಅಮಿತ್ ಶಾ & ಬಸವರಾಜ ಬೊಮ್ಮಾಯಿ
Pramod Shastri G
| Updated By: Ganapathi Sharma|

Updated on:Aug 08, 2023 | 6:58 PM

Share

ನವದೆಹಲಿ, ಆಗಸ್ಟ್ 8: ದೆಹಲಿ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ (Basavaraj Bommai) ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೆಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಪ್ರತಿಪಕ್ಷದ ನಾಯಕನ ನೇಮಕ ವಿಚಾರವಾಗಿ ಅಮಿತ್ ಶಾ ಬಳಿ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ಪ್ರತಿಪಕ್ಷದ ನಾಯಕನ ಸ್ಥಾನ ನನಗೆ ಕೊಡಿ ಎಂದು ಕೇಳುವುದಕ್ಕಾಗಿ ಬಂದಿಲ್ಲ. ಆದರೆ, ಶೀಘ್ರದಲ್ಲೇ ಪ್ರತಿಪಕ್ಷ ನಾಯಕನನ್ನು ನೇಮಕ ಮಾಡದಿದ್ದರೆ ನಕಾರಾತ್ಮಕ ಅಭಿಪ್ರಾಯ ಮೂಡುತ್ತದೆ ಎಂದು ಅಮಿತ್ ಶಾ ಅವರ ಬಳಿ ಬೊಮ್ಮಾಯಿ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕರಿಲ್ಲದಿದ್ದರೆ ಜನರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡುತ್ತದೆ. ಪಕ್ಷದ ಬಗ್ಗೆಯೂ ತಪ್ಪು ಸಂದೇಶ ಹೋಗುತ್ತದೆ. ಯಾರನ್ನಾದರೂ ವಿರೋಧ ಪಕ್ಷದ ನಾಯಕನ್ನಾಗಿ ಮಾಡಿ. ಅವರ ನೇತೃತ್ವದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಾಯಕರು ಅಂತ ಯಾರಾದರೂ ಇದ್ದರೆ ಉಳಿದವರಿಗೂ ಹುರುಪು ಬರುತ್ತದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಯಾರನ್ನೂ ಹೆಸರಿಸದೆ ಇರುವುದು ಸರಿಯಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ ಎನ್ನಲಾಗಿದೆ.

ಬೊಮ್ಮಾಯಿಗೆ ಅಮಿತ್ ಶಾ ಉತ್ತರವೇನು?

ಭೇಟಿ ವೇಳೆ ಅಮಿತ್ ಶಾ ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಬೊಮ್ಮಾಯಿ ಅವರಿಂದ ಮಾಹಿತಿ ಪಡೆದರು. ಗ್ಯಾರಂಟಿ ಯೋಜನೆಗಳು ಹೇಗೆ ನಡೆಯುತ್ತಿವೆ, ಆರ್ಥಿಕ ವ್ಯವಸ್ಥೆ ಹೇಗಿದೆ, ಲೋಪಗಳು ಮತ್ತಿತರ ವಿಚಾರಗಳ ಕುರಿತು ಅಮಿತ್ ಶಾ ಮಾಹಿತಿ ಪಡೆದರು ಎನ್ನಲಾಗಿದೆ.

ಪ್ರತಿಪಕ್ಷ ನಾಯಕನ ನೇಮಕದ ಬಗ್ಗೆ ಅಮಿತ್ ಶಾ ಹೇಳಿದ್ದೇನು?

ಪ್ರತಿಪಕ್ಷ ನಾಯಕನ ನೇಮಕ ಮನವಿಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಈಗ ಎಲ್ಲರೂ ಜತೆಯಾಗಿ ಕೆಲಸ ಮಾಡುತ್ತಿದ್ದೀರಿ. ಹೀಗೆಯೇ ಮಾಡಿಕೊಂಡು ಹೋಗಿ. ಶೀಘ್ರವಾಗಿ ಎಲ್ಲ ತಂಡವನ್ನೂ ರಚಿಸುತ್ತೇವೆ ಎಂದು ಉತ್ತರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಕುತೂಹಲ ಮೂಡಿಸಿದ ಬೊಮ್ಮಾಯಿ ದಿಲ್ಲಿ ಪ್ರವಾಸ

ಕರ್ನಾಟಕದಲ್ಲಿ ಮೇ 13ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 135 ಸ್ಥಾನ ಗಳಿಸಿ ಸರ್ಕಾರ ರಚನೆ ಮಾಡಿದೆ. ಅದಾಗಿ ಸುಮಾರು ಮೂರೂವರೆ ತಿಂಗಳಾದರೂ ಬಿಜೆಪಿಯು ಪ್ರತಿಪಕ್ಷ ನಾಯಕನ ನೇಮಕ ಮಾಡಿಲ್ಲ. ವಿಪಕ್ಷ ನಾಯಕನಿಲ್ಲದೇ ಬಜೆಟ್ ಅಧಿವೇಶನವೂ ನಡೆದಿದ್ದು ಬಿಜೆಪಿಯನ್ನು ಮುಜುಗರಕ್ಕೀಡುಮಾಡಿತ್ತು. ಬಿಜೆಪಿಯಿಂದ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೂ ಹೊಸಬರ ನೇಮಕವಾಗುವ ಬಗ್ಗೆ ವದಂತಿ ಇದ್ದು, ಸಿಟಿ ರವಿ ಅವರ ಹೆಸರು ಕೇಳಿಬಂದಿದೆ. ಆದರೆ, ಹೈಕಮಾಂಡ್ ಪ್ರತಿಪಕ್ಷ ನಾಯಕನ ಆಯ್ಕೆ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರವಾಗಿ ಈವರೆಗೆ ತುಟಿಬಿಚ್ಚಿಲ್ಲ.

ರಾಜಕೀಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Tue, 8 August 23