ಕಾಳಿ ವಿವಾದ: ಮಹುವಾ ಮೊಯಿತ್ರಾ ಬಂಧನಕ್ಕೆ ಬಿಜೆಪಿ ಒತ್ತಾಯ; ನನಗೇನೂ ಭಯವಿಲ್ಲ ಎಂದ ತೃಣಮೂಲ ಸಂಸದೆ

ಬಿಜೆಪಿಯವರೇ ಮಾಡಿ, ನಾನು ಕಾಳಿ ಭಕ್ತೆ , ನಾನು ಯಾವುದಕ್ಕೂ ಹೆದರುವುದಿಲ್ಲ, ನಿಮ್ಮ ಅಜ್ಞಾನಕ್ಕೆ, ನಿಮ್ಮ ಗೂಂಡಾಗಳಿಗೆ, ನಿಮ್ಮ ಪೊಲೀಸರಿಗೆ ಹೆದರುವುದಿಲ್ಲ. ನಾನು ನಿಮ್ಮ ಟ್ರೋಲ್ ದಾಳಿಗೂ ಹೆದರಲಾರೆ. ಸತ್ಯಕ್ಕೆ ಯಾವುದೇ ಶಕ್ತಿಯ ಬೆಂಬಲ ಅಗತ್ಯವಿಲ್ಲ ಎಂದು ಮಹುವಾ ಮೊಯಿತ್ರಾ ಟ್ವೀಟ್

ಕಾಳಿ ವಿವಾದ: ಮಹುವಾ ಮೊಯಿತ್ರಾ ಬಂಧನಕ್ಕೆ ಬಿಜೆಪಿ ಒತ್ತಾಯ; ನನಗೇನೂ ಭಯವಿಲ್ಲ ಎಂದ ತೃಣಮೂಲ ಸಂಸದೆ
ಮಹುವಾ ಮೊಯಿತ್ರಾ
Edited By:

Updated on: Jul 06, 2022 | 4:05 PM

ದೆಹಲಿ: ಕಾಳಿ ಬಗ್ಗೆ(Kaali row) ವಿವಾದಾತ್ಮಕ ಹೇಳಿಕೆ ನೀಡಿ ಹಿಂದೂಗಳ ಭಾವನೆಗ ಧಕ್ಕೆ ತಂದಿದ್ದಕ್ಕೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಪಶ್ಚಿಮ ಬಂಗಾಳದ ಬಿಜೆಪಿ ( BJP) ಒತ್ತಾಯಿಸಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ವಿಚಾರದಲ್ಲಿ ಮೊಯಿತ್ರಾ ವಿರುದ್ಧ ಕೇಸು ದಾಖಲಿಸಲಾಗಿದೆ. 10 ದಿನಗಳೊಳಗೆ ಮೊಯಿತ್ರಾ ವಿರುದ್ಧ ಕ್ರಮಕೈಗೊಳ್ಳದೇ ಇದ್ದರೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಬಿಜೆಪಿ ಹೇಳಿದೆ. ಆದಾಗ್ಯೂ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೃಷ್ಣಾನಗರ ಸಂಸದೆ ಮೊಯಿತ್ರಾ ಅವರು ನನಗೇನೂ ಭಯವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯವರೇ ಮಾಡಿ, ನಾನು ಕಾಳಿ ಭಕ್ತೆ , ನಾನು ಯಾವುದಕ್ಕೂ ಹೆದರುವುದಿಲ್ಲ, ನಿಮ್ಮ ಅಜ್ಞಾನಕ್ಕೆ, ನಿಮ್ಮ ಗೂಂಡಾಗಳಿಗೆ, ನಿಮ್ಮ ಪೊಲೀಸರಿಗೆ ಹೆದರುವುದಿಲ್ಲ. ನಾನು ನಿಮ್ಮ ಟ್ರೋಲ್ ದಾಳಿಗೂ ಹೆದರಲಾರೆ. ಸತ್ಯಕ್ಕೆ ಯಾವುದೇ ಶಕ್ತಿಯ ಬೆಂಬಲ ಅಗತ್ಯವಿಲ್ಲ ಎಂದು ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.

ದೇವರನ್ನು ಪೂಜಿಸುವಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಲ್ಪನೆ ಇರುವಂತೆ ಕಾಳಿ ಮಾತೆಯನ್ನು ಮಾಂಸಾಹಾರಿ ಮತ್ತು ಮದ್ಯ ಸೇವಿಸುವ ದೇವರಾಗಿ ಊಹಿಸುವ ಹಕ್ಕು ನನಗಿದೆ ಎಂದು ಮೊಯಿತ್ರಾ ಹೇಳಿದ್ದು ವಿವಾದಕ್ಕೀಡಾಗಿದೆ.
ಮಹಿಳೆಯೊಬ್ಬರು ಕಾಳಿಯ ವೇಷ ಧರಿಸಿ ಸಿಗರೇಟ್ ಸೇದುತ್ತಾ ಕೈಯಲ್ಲಿ ಪ್ರೈಡ್ ಫ್ಲಾಗ್ ಹಿಡಿದುಕೊಂಡಿರುವ ಸಿನಿಮಾ ಪೋಸ್ಟರ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹೊತ್ತಲ್ಲೇ ಟಿಎಂಸಿ ಸಂಸದೆ ಈ ರೀತಿ ಹೇಳಿಕೆ ನೀಡಿದ್ದರು.
ಮೊಯಿತ್ರಾ ಹೇಳಿಕೆ ಖಂಡಿಸಿದ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿರುವ ಆಡಳಿತಾರೂಢ ಟಿಎಂಸಿ ಹಿಂದೂ ದೇವರು, ದೇವತೆಗಳನ್ನು ಅವಮಾನಿಸುವ ನೀತಿಯನ್ನು ಹೊಂದಿದೆಯೇ ಎಂದು ಪ್ರಶ್ನಿಸಿತ್ತು.

ಸನಾತನ ಹಿಂದೂ ಧರ್ಮದ ಪ್ರಕಾರ ಕಾಳಿ ಮದ್ಯ ಸೇವನೆ ಮಾಡುವ ಮಾಂಸಾಹಾರಿ ದೇವತೆ ಎಂದು ಎಲ್ಲಿಯೂ ಪೂಜಿಸುವುದಿಲ್ಲ. ದುಷ್ಟರ ವಿರುದ್ಧ ಹೋರಾಡುವ ದೇವತೆ ಎಂದೇ ಕಾಳಿಯನ್ನು ಪೂಜಿಸುತ್ತಿರುವುದು. ಆಕೆಯ ಹೇಳಿಕೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ. ಕಾಳಿ ವಿರುದ್ಧ ಆಕೆ ನೀಡಿದ ಹೇಳಿಕೆಗಾಗಿ ಆಕೆಯನ್ನು ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕುಂಟ ಮಂಜುಂದಾರ್ ಹೇಳಿದ್ದಾರೆ. ಮಹುವಾ ಮೊಯಿತ್ರಾ ವಿರುದ್ಧ ರಾಜ್ಯದಾದ್ಯಂತ ನೂರರಷ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಿರೋಧ ಪಕ್ಷ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

Published On - 3:40 pm, Wed, 6 July 22

Web contact

TV9 Kannada

Read More
Follow Us