ತಾತ್ಕಾಲಿಕ ಹುದ್ದೆ ನೀಡುವ ಮೂಲಕ ಪ್ರವೀಣ್ ನೆಟ್ಟಾರು ಪತ್ನಿಗೆ ಬಿಜೆಪಿ ಮೋಸ ಮಾಡಿದೆ: ರಾಮಲಿಂಗಾ ರೆಡ್ಡಿ ಕಿಡಿ

ಪ್ರವೀಣ್ ನೆಟ್ಟಾರು ಪತ್ನಿಗೆ ತಾತ್ಕಾಲಿಕ ಹುದ್ದೆಯನ್ನು ನೀಡುವ ಮೂಲಕ ಬಿಜೆಪಿ ಮೋಸ ಮಾಡಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.

ಬೆಂಗಳೂರು: ಅನುಕಂಪದ ಆಧಾರದಲ್ಲಿ ಸಿಎಂ ವಿಶೇಷ ಅಧಿಕಾರದಲ್ಲಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ದಿ. ಪ್ರವೀಣ್​ ನೆಟ್ಟಾರ್​ (Praveen Nettaru) ಅವರ ಪತ್ನಿ ನೂತನ ಕುಮಾರಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಪ್ರವೀಣ್ ನೆಟ್ಟಾರು ಪತ್ನಿಗೆ ತಾತ್ಕಾಲಿಕ ಹುದ್ದೆಯನ್ನು ನೀಡುವ ಮೂಲಕ ಬಿಜೆಪಿ ಮೋಸ ಮಾಡಿದೆ ಎಂದು  ಕಿಡಿಕಾರಿದ್ದಾರೆ. ಪ್ರವೀಣ್​ ನೆಟ್ಟಾರು ಪತ್ನಿಗೆ ತಾತ್ಕಾಲಿಕ ಹುದ್ದೆ ಯಾಕೆ ಕೊಡ್ಬೇಕಿತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಯಂ​ ಉದ್ಯೋಗವನ್ನೇ ಕೊಡಬೇಕಿತ್ತು ಎಂದು ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ನಿಜವಾದ ಬಣ್ಣ ಈಗ ಬಯಲಾಗಿದೆ: ಯಶ್​ಪಾಲ್ ಸುವರ್ಣ ಕಿಡಿ

ಈ ಕುರಿತಾಗಿ ಉಡುಪಿಯಲ್ಲಿ ಬಿಜೆಪಿ ಶಾಸಕ ಯಶ್​ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ ಸರ್ಕಾರದ ನಿಜವಾದ ಬಣ್ಣ ಈಗ ಬಯಲಾಗಿದೆ. ರಾಜ್ಯದ ಜನತೆಗೆ ಆಶ್ವಾಸನೆ ಕೊಟ್ಟ ಗ್ಯಾರಂಟಿ ಮೊದಲು ಈಡೇರಿಸಿ. ಜನರ ದಿಕ್ಕು ತಪ್ಪಿಸಲು ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಿಎಫ್​ಐ ದುಷ್ಕೃತ್ಯದಿಂದ ಪ್ರವೀಣ್ ನೆಟ್ಟಾರು ಕಳೆದುಕೊಂಡಿದ್ದೇವೆ. ಇಂತಹ ಕೃತ್ಯಗಳಿಗೆ ಕೈಹಾಕಿದಾಗ ಜನತೆ ಸೂಕ್ತ ಉತ್ತರ ಕೊಡ್ತಾರೆ.
ನೀವು ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಅನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಹೊಸ ಸರ್ಕಾರ ಅಸ್ವಿತ್ವಕ್ಕೆ ಬಂದ ಬೆನ್ನಲ್ಲೇ ಪ್ರವೀಣ್‌ ನೆಟ್ಟಾರು ಪತ್ನಿ ನೇಮಕಾತಿ ರದ್ದು

ವಿಪಕ್ಷದಲ್ಲಿದ್ದುಕೊಂಡು ಪ್ರವೀಣ್ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ. ಸಿದ್ದರಾಮಯ್ಯ 135 ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಅಲ್ಲ. ರಾಜ್ಯದ 224 ಕ್ಷೇತ್ರಗಳನ್ನು ಸಹ ಸಮಾನವಾಗಿ ನೋಡಬೇಕು. ಪ್ರವೀಣ್ ನೆಟ್ಟಾರು ಕುಟುಂಬದ ಜೊತೆ ಬಿಜೆಪಿ ಎಂದಿಗೂ ಇರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಬಿಕೆ ಹರಿಪ್ರಸಾದ್​ಗೆ ಕೈ ತಪ್ಪಿದ ಸಚಿವ ಸ್ಥಾನ: ಸಿಡಿದೆದ್ದ ಬಿಲ್ಲವ ಸಮುದಾಯ ಹೇಳಿದ್ದೇನು?​

ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಮಾನವೀಯ ದೃಷ್ಠಿಯಿಂದ 2022 ರ ಸೆ.22 ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೂತನ ಕುಮಾರಿಯನ್ನು ನೇಮಕ ಮಾಡಿತ್ತು. ಈ ಹಿನ್ನೆಲೆ ನೂತನ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಛೇರಿಯ ಪ್ರಾಕೃತಿಕ ವಿಕೋಪ ವಿಭಾಗದದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇದೀಗ ಹೊಸ ಸರ್ಕಾರ ಬಂದಿದ್ದು ನೂತನ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಘಟನೆ ಬಳಿಕ ಕಾರ್ಯಕರ್ತರ ಆಕ್ರೋಶ ಬಿಜೆಪಿ ಮುಖಂಡರ ಕಡೆಗೆ ತಿರುಗಿತ್ತು. ಈ ವೇಳೆ ಘಟನೆಯ ಸಮಗ್ರ ತನಿಖೆಯನ್ನು ಅಂದಿನ ಬಿಜೆಪಿ ಸರ್ಕಾರ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ವಹಿಸಿತ್ತು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:38 pm, Sat, 27 May 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us