ಹೈಕಮಾಂಡ್ ಸಂದೇಶಕ್ಕೆ ಬೆಳಗ್ಗಿನವರೆಗೂ ಕಾದು ನೋಡೋಣ; ಕೊನೆಯ ನಿಮಿಷದವರೆಗೂ ಸಿಎಂ ಆಗಿ ಕೆಲಸ ಮಾಡ್ತೇನೆ: ಬಿಎಸ್ ಯಡಿಯೂರಪ್ಪ

| Updated By: ganapathi bhat

Updated on: Jul 25, 2021 | 5:43 PM

BS Yediyurappa: ಮುಖ್ಯಮಂತ್ರಿ ಆಗಿ ಮುಂದುವರಿ ಅಂದ್ರೆ ಮುಂದುವರೆಯುತ್ತೇನೆ. ರಾಜೀನಾಮೆ ಕೊಡಿ ಅಂದ್ರೆ ರಾಜೀನಾಮೆ ಸಲ್ಲಿಸುತ್ತೇನೆ. ಆದರೆ, ಇದುವರೆಗೂ ಹೈಕಮಾಂಡ್‌ನಿಂದ ಸಂದೇಶ ಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೈಕಮಾಂಡ್ ಸಂದೇಶಕ್ಕೆ ಬೆಳಗ್ಗಿನವರೆಗೂ ಕಾದು ನೋಡೋಣ; ಕೊನೆಯ ನಿಮಿಷದವರೆಗೂ ಸಿಎಂ ಆಗಿ ಕೆಲಸ ಮಾಡ್ತೇನೆ: ಬಿಎಸ್ ಯಡಿಯೂರಪ್ಪ
ಬಿ.ಎಸ್​.ಯಡಿಯೂರಪ್ಪ
Follow us on

ಬೆಂಗಳೂರು: ಇವತ್ತು ರಾತ್ರಿಯೊಳಗೆ ಅಥವಾ ನಾಳೆ ಬೆಳಗ್ಗೆ ಸಂದೇಶ ಬರಬಹುದು. ವರಿಷ್ಠರ ಸಂದೇಶಕ್ಕೆ ಬೆಳಗ್ಗೆವರೆಗೂ ಕಾದು ನೋಡೋಣ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಇನ್ನೂ ಹತ್ತು ಹದಿನೈದು ವರ್ಷ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಕೊನೆಯ ನಿಮಿಷದವರೆಗೂ ಸಿಎಂ ಆಗಿ ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಮುಖ್ಯಮಂತ್ರಿ ಆಗಿ ಮುಂದುವರಿ ಅಂದ್ರೆ ಮುಂದುವರೆಯುತ್ತೇನೆ. ರಾಜೀನಾಮೆ ಕೊಡಿ ಅಂದ್ರೆ ರಾಜೀನಾಮೆ ಸಲ್ಲಿಸುತ್ತೇನೆ. ಆದರೆ, ಇದುವರೆಗೂ ಹೈಕಮಾಂಡ್‌ನಿಂದ ಸಂದೇಶ ಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ, ಬಿ.ಎಸ್. ಯಡಿಯೂರಪ್ಪ ಬದಲಾವಣೆ ಬಗ್ಗೆ ಚರ್ಚೆ ವಿಚಾರ ವಿವಿಧ ಆಯಾಮ ಪಡೆದು ಮುಂದುವರಿಯುತ್ತಿದೆ. ಈ ಮಧ್ಯೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಚಿವ ಮುರುಗೇಶ್ ನಿರಾಣಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮುರುಗೇಶ್ ನಿರಾಣಿ ಸಹೋದರ ಎಂಎಲ್​ಸಿ ಹಣಮಂತ ನಿರಾಣಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ರಾತ್ರಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಿರಾಣಿ ಸೋದರ ದೇಗುಲ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿಗೆ ಆಗಮಿಸಿದ ಗಣಿ ಸಚಿವ ಮುರುಗೇಶ್ ನಿರಾಣಿ, ಖಾಸಗಿ ಕೆಲಸದ ನಿಮಿತ್ತ ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ. ಇಂದು ರಾತ್ರಿಯೇ ದೆಹಲಿಯಿಂದ ಮುರುಗೇಶ್ ನಿರಾಣಿ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ.

ಇತ್ತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ದೆಹಲಿಗೆ ತೆರಳಲಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ. ಜೋಶಿ, ಮಧ್ಯಾಹ್ನ 1.30ಕ್ಕೆ ಬುಕ್‌ ಆಗಿದ್ದ ಟಿಕೆಟ್‌ ರದ್ದು ಮಾಡಿದ್ದರು. ಬಳಿಕ, ಸಂಜೆ 5.55ಕ್ಕೆ ತೆರಳುವ ವಿಸ್ತಾರ ವಿಮಾನದಲ್ಲಿ ಪ್ರಯಾಣ ಮಾಡುವ ಬಗ್ಗೆ ತಿಳಿದುಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಲ್ಹಾದ್ ಜೋಶಿ, ಹೈಕಮಾಂಡ್​ ನನಗೆ ಬುಲಾವ್ ನೀಡಿಲ್ಲ. ದೆಹಲಿಗೆ ತೆರಳುತ್ತಿದ್ದೇನೆ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಬದಲಾವಣೆ ಆಗುತ್ತಾರೆಂಬುದು ಕೇವಲ ಊಹಾಪೋಹ. ವರಿಷ್ಠರ ತೀರ್ಮಾನ ಏನಿರುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಇನ್ನೂ 24 ಗಂಟೆ ಸಮಯಾವಕಾಶವಿದೆ ಎಂದು ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಸಂಸದ ಬಿ.ಎನ್. ಬಚ್ಚೇಗೌಡ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್​ ನಿರ್ಧಾರದ ಬಗ್ಗೆ ಕುತೂಹಲದಿಂದ ಕಾಯ್ತಿದ್ದೇನೆ ಎಂದು ದೆಹಲಿಗೆ ತೆರಳುವ ಮುನ್ನ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: BS Yediyurappa: ಬಿಜೆಪಿ ಬಿಎಸ್ ಯಡಿಯೂರಪ್ಪಗೆ ಬಹಳಷ್ಟು ಅವಕಾಶ ನೀಡಿದೆ: ಸಿಟಿ ರವಿ

ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ..ಕರ್ನಾಟಕ ರಾಜಕೀಯದಲ್ಲಿ ಅಸ್ಥಿರತೆ ಇಲ್ಲ: ಜೆ.ಪಿ.ನಡ್ಡಾ

(BS Yediyurappa on High Command Order Karnataka CM Politics Karnataka BJP)

Published On - 5:36 pm, Sun, 25 July 21