ಸಿಎಂ ಬದಲಾಗುವುದು ಫಿಕ್ಸ್: ಮೋದಿ ಹೇಳಿಕೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಸಿಎಂ ಬದಲಾಗುವುದು ಫಿಕ್ಸ್ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗಾದ್ರೆ, ಮೋದಿ ಯಾಕೆ ಸಿದ್ದರಾಮಯ್ಯನವರ ಕುರ್ಚಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ? ವಿವರ ಈ ಕೆಳಗಿನಂತಿದೆ.

ಸಿಎಂ ಬದಲಾಗುವುದು ಫಿಕ್ಸ್: ಮೋದಿ ಹೇಳಿಕೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಸಿಎಂ ಸಿದ್ದರಾಮಯ್ಯ
Follow us
|

Updated on: Nov 06, 2023 | 3:33 PM

ಚಾಮರಾಜನಗರ, (ನವೆಂಬರ್ 06): ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ  ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಸಿಎಂ ಬದಲಾಗುವುದು ಫಿಕ್ಸ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಚಾಮರಾಜನಗರದಲ್ಲಿ ಇಂದು (ನವೆಂಬರ್ 06) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಎಂ ಬದಲಾಗುವುದು ಫಿಕ್ಸ್ . ಅದು ಲೋಕಸಭಾ ಚುನಾವಣೆಯ ಬಳಿಕವೋ ಅಥವಾ ಅದರೊಳಗೆ ಗೊತ್ತಿಲ್ಲ. ಆದ್ರೆ, ಸಿಎಂ ಸಿದ್ದರಾಮಯ್ಯ ಬದಲಾಗುವುದಂತು ಖಚಿತ ಎಂದರು.

ಇನ್ನು ಇದೇ ವೇಳೆ ನಾನೇ 5 ವರ್ಷ ಮುಖ್ಯಮಂತ್ರಿ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ಸಿಎಂ ಬದಲಾಗುವುದು ಫಿಕ್ಸ್ . ಅದು ಲೋಕಸಭಾ ಚುನಾವಣೆಯ ಬಳಿಕವೋ ಅಥವಾ ಅದರೊಳಗೆ ಗೊತ್ತಿಲ್ಲ.ಇದರಿಂದ ಸಿದ್ದರಾಮಯ್ಯನವರಿಗೆ ತಮ್ಮ ಖುರ್ಚಿ ಉಳಿಸಿಕೊಳ್ಳುವುದೆ ದೊಡ್ಡ ತಲೆ ನೋವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಎಷ್ಟು ದಿನ ರಾಜ್ಯಭಾರ ನಡೆಸ್ತಾರೋ? ಸಂಚಲನ ಮೂಡಿಸಿದ ಪ್ರಧಾನಿ ಮೋದಿ ಹೇಳಿಕೆ

ಕಾಂಗ್ರೆಸ್​ನಲ್ಲಿ ಒಂದರ ಮೇಲೊಂದು ಗೊಂದಲ

ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ಗೊಂದಲ ಉದ್ಭವಿಸುತ್ತಲೇ ಇವೆ. ಮೊದಲಿಗೆ ಎಂಬಿ ಪಾಟೀಲ್ ಅವರದ್ದು ಎನ್ನಲಾದ ಪತ್ರವೊಂದು ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಸಚಿವರು ಶಾಸಕರ ಮಾತಿಗೆ ಬೆಲೆ ಕೊಡುತ್ತಿಲ್ಲ. ಫೋನ್​ ಸ್ವೀಕರಿಸಲ್ಲ, ಶಾಸಕರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲ ಎಂದು ಖುದ್ದು ಕಾಂಗ್ರೆಸ್​ನ ಕೆಲ ಹಿರಿಯ ಶಾಸಕರು ಅಳಲು ತೋಡಿಕೊಂಡಿದ್ದರು. ಬಳಿಕ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ಶಾಸಕಾಂಗ ಸಭೆ ಕರೆಯಿರಿ ಎಂದು ಬರೆದ ಪತ್ರ ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಜಗಜ್ಜಾಹೀರು ಆಯ್ತು.

ಕಾಂಗ್ರೆಸ್​ನಲ್ಲಿ ಕಂಪನ ಸೃಷ್ಟಿಸಿದ್ದ ಜಾರಕಿಹೊಳಿ ನಡೆ

ಇನ್ನು ಹಿರಿಯ ಕಾಂಗ್ರೆಸ್​ ನಾಯಕ ಸತೀಶ್ ಜಾರಕಿಹೊಳಿ ಕೆಲ ಕಾರಣಗಳಿಂದ ಮುನಿಸಿಕೊಂಡಿದ್ದು, ನಾಯಕರಿಗೆ ಬಿಸಿ ಮುಟ್ಟಿಸಲು ಕೆಲ ಶಾಸಕರೊಂದಿಗೆ ಪ್ರವಾಸ ಹೋಗಲು ತಯಾರಾಗಿ ನಿಂತರು. ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್​ ನಡೆಯಿಂದ ಬೇಸತ್ತು ಕೆಲ ಶಾಸಕರನ್ನು ಕಟ್ಟಿಕೊಂಡು ಪ್ರವಾಸದ ನೆಪದಲ್ಲಿ ಎಚ್ಚರಿಕೆ ಸಂದೇಶ ರವಾನಿಸಲು ಮುಂದಾಗಿದ್ದಾರೆ. ಆಗಲೂ ಸಹ ಹೈಕಮಾಂಡ್ ಎಚ್ಚೆತ್ತುಕೊಂಡು ಸತೀಶ್ ಜಾರಕಿಹೊಳಿ ಪ್ರವಾಸಕ್ಕೆ ಬ್ರೇಕ್ ಹಾಕಿತ್ತು.

ಅಧಿಕಾರ ಹಂಚಿಕೆ ಕಿತ್ತಾಟ

ಹಾಗೇ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಶಾಸಕರು ಹಾಗೂ ಸಚಿವರ ನಡುವಿನ ಮಸುಕಿನ ಗುದ್ದಾಟಗಳು ಸಹ ಬಯಲಿಗೆ ಬಂದವು. ಇನ್ನೇನು ಶಾಸಕರು ಹಾಗೂ ಸಚಿವರ ಸಮನ್ವ ಕೊರತೆ ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲೇ ಸಿಎಂ ಅಧಿಕಾರ ಹಂಚಿಕೆ ಚರ್ಚೆ ಜೋರಾಯ್ತು. ಹೌದು.. ಎರಡುವರೆ ವರ್ಷ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದು, ನಂತರ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನು ಚರ್ಚೆ ಶುರುವಾಯ್ತು. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ಶಾಸಕರು, ಸಚಿವರ ಮಾತುಗಳು ತಾರಕಕ್ಕೇರಿತು. ಇದು ಮತ್ತೊಂದು ಹಂತಕ್ಕೆ ಹೋಗುವ ಮೊದಲೇ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಯಾವುದೇ ಕಾರಣಕ್ಕೂ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವಂತಿಲ್ಲ ಎಂದು ಖಡಕ್ ಸೂಚನೆ ರವಾನಿಸಿತು.​

ಸಿದ್ದರಾಮಯ್ಯ ಕುರ್ಚಿ ಮೇಲೆ ಮೋದಿ ಅನುಮಾನಪಟ್ಟಿದ್ದೇಕೆ?

ಹೀಗೆ ಹಲವು ಘಟನಾವಳಿಗಳು ಒಂದಾದ ಮೇಲೊಂದು ಕಾಂಗ್ರೆಸ್​ನಲ್ಲಿ ಮುನ್ನಲೆಗೆ ಬರುತ್ತಲೇ ಇವೆ. ಇದನ್ನೇ ಇಟ್ಟುಕೊಂಡು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ರ್ಯಾಲಿಯಲ್ಲಿ ಕರ್ನಾಟಕ ಕಾಂಗ್ರೆಸ್​ ಅನ್ನು ವ್ಯಂಗ್ಯವಾಡಿದ್ದರು. ಕಾಂಗ್ರೆಸ್​​ನಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಶುರುವಾಗಿದೆ. ಸಿದ್ದರಾಮಯ್ಯ ಅದೆಷ್ಟು ದಿನಗಳ ಕಾಲ ರಾಜ್ಯಭಾರ ನಡೆಸುತ್ತಾರೋ ಗೊತ್ತಿಲ್ಲ ಎಂದಿದ್ದರು. ಈ ಮೂಲಕ ಪರೋಕ್ಷವಾಗಿ ಮೋದಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಯಜಮಾನ ಮೋದಿ, ಸಿದ್ದರಾಮಯ್ಯ ಕುರ್ಚಿ ಮೇಲೆ ಅನುಮಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇತ್ತ ರಾಜ್ಯ ಬಿಜೆಪಿ ನಾಯಕರು ಸಹ ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಮಾತುಗಳನ್ನಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನವಾಗುತ್ತೆ ಎಂದು ಹೇಳುತ್ತಾ ಬಂದಿದ್ದಾರೆ. ಇದೀಗ ಮೋದಿ ಹೇಳಿಕೆ ರಾಜ್ಯ ಬಿಜೆಪಿ ನಾಯಕರಿಗೆ ಬೂಸ್ಟ್ ಕೊಟ್ಟಂತಾಗಿದೆ.

ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯನವರ ಅದೆಷ್ಟು ದಿನ ರಾಜ್ಯಭಾರ ನಡೆಸುತ್ತಾರೋ ಎನ್ನುವ ಹೇಳಿಕೆ ನೀಡಿದ್ದ ರಾಜ್ಯ ರಾಜಕಾರನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಸಿದ್ದರಾಮಯ್ಯನವರ ಕುರ್ಚಿ ಬಗ್ಗೆ ಚರ್ಚೆ ಶುರುವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ