20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿ ಟ್ರಿಪ್​: ಸತೀಶ್ ಜಾರಕಿಹೊಳಿ ನಡೆಗೆ ಹೈಕಮಾಂಡ್ ಶಾಕ್!!

| Updated By: ರಮೇಶ್ ಬಿ. ಜವಳಗೇರಾ

Updated on: Oct 16, 2023 | 1:01 PM

ಬರಗಾಲ, ವಿದ್ಯುತ್ ಸಮಸ್ಯೆ,, ಐಟಿ ದಾಳಿ ಸಂಬಂಧ ರಾಜ್ಯ ರಾಜಕಾರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯೆ ಕೆಪಿಸಿಸಿ ಕಾರ್ಯಧ್ಯಕ್ಷ, ಸಚಿವ ಸತೀಶ್ ಜಾರಕಿಹೊಳಿ 20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿ ಪ್ರವಾಸಕ್ಕೆ ಪ್ಲ್ಯಾನ್ ಮಾಡಿರುವ ಸುದ್ದಿ ಕಾಂಗ್ರೆಸ್​ನಲ್ಲಿ ಕಂಪನ ಸೃಷ್ಟಿಸಿದೆ. ಇದು ಗಮನಕ್ಕೆ ಬರುತ್ತಿದ್ದಂತೆಯೇ ಹೈಕಮಾಂಡ್​ ಎಚ್ಚೆತ್ತುಕೊಂಡು ಖಡಕ್ ಸೂಚನೆ ರವಾನಿಸಿದೆ. ಇದಕ್ಕೆ ಸತೀಶ್ ಜಾರಕಿಹೊಳಿ ಸಹ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ವಿವರ ಈ ಕೆಳಗಿನಂತಿದೆ.

20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿ ಟ್ರಿಪ್​: ಸತೀಶ್ ಜಾರಕಿಹೊಳಿ ನಡೆಗೆ ಹೈಕಮಾಂಡ್ ಶಾಕ್!!
ಸತೀಶ್ ಜಾರಕಿಹೊಳಿ
Follow us on

ಬೆಂಗಳೂರು, (ಅಕ್ಟೋಬರ್ 16): ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದು ನಾಲ್ಕು ತಿಂಗಳುಗಳು ಕಳೆದಿವೆ., ಆದ್ರೆ, ಸರ್ಕಾರದಲ್ಲಿ ಒಂದಲ್ಲ ಒಂದು ಗೊಂದಲಗಳು ಉದ್ಭವಿಸುತ್ತಿವೆ. ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದು ಆಕ್ರೊಶ ವ್ಯಕ್ತಪಡಿಸಿದ್ದರು. ಇದನ್ನು ಸಿದ್ದರಾಮಯ್ಯ (Siddaramaiah) ಶಮನ ಮಾಡಿದ್ದರೂ ಸಹ ಆಗಾಗ ಕಾಂಗ್ರೆಸ್ ಶಾಸಕರಿಂದ ಅಸಮಾಧಾನದ ಮಾತುಗಳು ಕೇಳಿಬರುತ್ತಲ್ಲೇ ಇವೆ. ಇದರ ಬೆನ್ನಲ್ಲೇ ಇದೀಗ ಸಚಿವ ಸತೀಶ್ ಜಾತರಕಿಹೊಳಿ 20ಕ್ಕೂ ಅಧಿಕ ಶಾಸಕನ್ನು ಜೊತೆಗೆ ಕರೆದುಕೊಂಡು ಪ್ರವಾಸ ಹೋಗುವ ಸುದ್ದಿ ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿದೆ.

ಸತೀಶ್ ಜಾರಕಿಹೊಳಿ ಅವರು 20ಕ್ಕೂ ಅಧಿಕ ಶಾಸಕರೊಂದಿಗೆ ಮೈಸೂರಿಗೆ ತೆರಳಲು ಸಿದ್ದತೆ ನಡೆಸಿದ್ದರು. ತಮ್ಮ ಉಸ್ತುವಾರಿ ಜಿಲ್ಲೆಯ ಎಲ್ಲಾ ಶಾಸಕರನ್ನು ಒಗ್ಗೂಡಿಸಿಕೊಂಡು ಮೈಸೂರು ದಸರಾಗೆ ತೆರಳಲು ಪ್ಲಾನ್ ಮಾಡಿದ್ದರು. ಎಲ್ಲಾ ಶಾಸಕರನ್ನು ಕರೆದುಕೊಂಡಲು ಬಸ್​ ಸಹ ಸಿದ್ಧವಾಗಿತ್ತು. ಆದ್ರೆ, ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ಹೌದು…20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿಕೊಂಡು ಪ್ರವಾಸಕ್ಕೆ ತೆರಳುತ್ತಿರುವ ಮಾಹಿತಿ ಕಾಂಗ್ರೆಸ್​ ಹೈಕಮಾಂಡ್​ಗೆ ಗೊತ್ತಾಗಿತ್ತಿದ್ದಂತೆಯೇ ಇದಕ್ಕೆ ಬ್ರೇಕ್ ಹಾಕಿದ್ದು, ಈ ಸಮಯದಲ್ಲಿ ಬಸ್ ನಲ್ಲಿ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ. ವಿಪಕ್ಷಗಳಿಗೆ ನಾವೇ ಆಹಾರ ಕೊಟ್ಟಂತೆ ಆಗಲಿದೆ. ಹೀಗಾಗಿ ಪ್ರವಾಸವನ್ನು ರದ್ದು ಮಾಡುವಂತೆ ಹೈಕಮಾಂಡ್​ ಸೂಚಿಸಿದೆ. ಹೈಕಮಾಂಡ್​ ಸೂಚನೆ ಮೇರೆಗೆ ಸತೀಶ್ ಜಾರಕಿಹೊಳಿ ಅವರು ಶಾಸಕರನ್ನು ಒಗ್ಗೂಡಿಸಿಕೊಂಡು ಮೈಸೂರು ದಸರಾಗೆ ಹೋಗುವ ಪ್ಲ್ಯಾನ್ ಕೈಬಿಟ್ಟಿದ್ದಾರೆ.

ಇದನ್ನೂ ಓದಿ: ಈ ವಾರದಲ್ಲೇ ನಿಗಮ ಮಂಡಳಿಗೆ ನೇಮಕಾತಿ ಸಾಧ್ಯತೆ: ಮೊದಲ ಪಟ್ಟಿಯಲ್ಲಿ 20 ರಿಂದ 30 ಶಾಸಕರಿಗೆ ಅವಕಾಶ

ಇನ್ನು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ದಸರಾ ನೋಡುವುದಕ್ಕೆ ಬನ್ನಿ ಎಂದು ಅಲ್ಲಿನ(ಮೈಸೂರು) ಶಾಸಕರೂ ಹೇಳಿದ್ದರು. ಅದರಂತೆ ನಮ್ಮಲ್ಲಿ ಕೆಲವರು ಮೈಸೂರಿಗೆ ಹೋಗಬೇಕು ಎಂದು ಮಾತನಾಡಿದ್ದೆವು. ನಮ್ಮ ಲೈಕ್ ಮೈಂಡೆಡ್ ಶಾಸಕರು ಹೋಗಬೇಕು ಅಂತ ಇತ್ತು. ಮತ್ತೊಂದೆಡೆ ನಮ್ಮನ್ನು ಎಲ್ಲಾದರೂ ಟ್ರಿಪ್ ಕರೆದುಕೊಂಡು ಹೋಗಿ ಎಂದು ಕೆಲವರು ಹೇಳುತ್ತಿದ್ದರು. ಹಾಗೆ ಸಮಾನ ಮನಸ್ಕರರು ಸಹ ಎಲ್ಲಾದರೂ ಹೋಗಬೇಕು ಅಂತ ಹೇಳುತ್ತಿದ್ದರು. ಈಗ ದಸರಾ ಹಬ್ಬ ಬೇಡ ಎಂದು ಸುಮ್ಮನಾಗಿದ್ದೇವೆ. ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ. ಯಾವುದೇ ಬಣ ಗಿಣ ಅಂತೇನಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ 20ಕ್ಕೂ ಹೆಚ್ಚು ಶಾಸಕರನ್ನೂ ಒಗ್ಗೂಡಿಸಿಕೊಂಡು ಸತೀಶ್ ಜಾರಕಿಹೊಳಿ ಪ್ರವಾಸಕ್ಕೆ ಪ್ಲ್ಯಾನ್ ಹಾಕಿದ್ದು ರಾಜ್ಯ ಕಾಂಗ್ರೆಸ್​​ನಲ್ಲಿ ಕಂಪನ ಸೃಷ್ಟಿಸಿದ್ದಂತೂ ಸತ್ಯ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Mon, 16 October 23