ಇದು ಸಂಪೂರ್ಣ ಪೊಲಿಟಿಕಲ್ ಬಜೆಟ್ ಎಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 07, 2023 | 6:55 PM

ಸಿಎಂ ಸಿದ್ಧರಾಮಯ್ಯ ಅವರು ಇಂದು ದಾಖಲೆಯ 14ನೇ ರಾಜ್ಯ ಬಜೆಟ್​ ಮಂಡನೆ ಮಾಡಿದ್ದಾರೆ. ವಿಪಕ್ಷ ಬಿಜೆಪಿ ಪಕ್ಷದ ನಾಯಕರು ಈ ಬಜೆಟ್​ ವಿರುದ್ಧ ಕಿಡಿಕಾರಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇದು ಸಂಪೂರ್ಣ ಪೊಲಿಟಿಕಲ್ ಬಜೆಟ್​ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು: ಹಳೇ ಹಾಗೂ ಹೊಸ ಕಾರ್ಯಕ್ರಮದ ಬಗ್ಗೆ ಹೇಳುವ ನಿರೀಕ್ಷೆ ಇತ್ತು. ಪ್ರತಿಯೊಂದನ್ನೂ 2013 ಮತ್ತು 2018ಕ್ಕೆ ಹೋಲಿಕೆ ಮಾಡಿದ್ದಾರೆ. ಹಾಗಾಗಿ ಇದು ಸಂಪೂರ್ಣ ಪೊಲಿಟಿಕಲ್ ಬಜೆಟ್​ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ರಿವರ್ಸ್ ಗೇರ್ ಇರುವ ಸರ್ಕಾರ ಅಂತಾ ಸಾಬೀತಾಗಿದೆ ಎಂದು ಕಿಡಿಕಾರಿದರು.

ಕೊವಿಡ್ ಬಳಿಕ ಆರ್ಥಿಕ ನಿರ್ವಹಣೆ ಸರಿಯಾಗಿಲ್ಲ ಎಂದಿದ್ದಾರೆ. ಕೇಂದ್ರ ಸರ್ಕಾರ ಹಣ ಕಡಿತಗೊಳಿಸಿದೆ ಎಂದು ಆರೋಪಿಸಿದ್ದಾರೆ. ಬಜೆಟ್​ ಪ್ರತಿಯಲ್ಲಿ 50 ಪ್ಯಾರಾಗ್ರಾಫ್​ಗಿಂತ ಹೆಚ್ಚು ಟೀಕೆಯೇ ಇದೆ. ಗ್ಯಾರಂಟಿ ಯೋಜನೆಗಳಿಗೆ ಸಮಯ ನಿಗದಿ ಮಾಡಿಲ್ಲ.

ರಾಜ್ಯ ಸರ್ಕಾರ ಹೆಚ್ಚಿನ ಸಾಲ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಬಜೆಟ್​ನಲ್ಲಿ ಅಬಕಾರಿ ಸುಂಕ, ನೋಂದಣಿ ಮತ್ತು ಮುದ್ರಾಂಕ ಮೋಟಾರು ವಾಹನ ತೆರಿಗೆ ಹೆಚ್ಚಳ ಮಾಡಿದ್ದಾರೆ. ಇದು ಸಾಮಾನ್ಯ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಸಾಲ ಮತ್ತು ತೆರಿಗೆ ಎರಡನ್ನೂ ಹೆಚ್ಚು ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Karnataka Budget 2023: ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಂಗ್ರೆಸ್ ನಾಯಕರು ಸುತ್ತುವರಿದು ಅಭಿನಂದಿಸಿದರು!

ಸರ್​ಪ್ಲಸ್ ಬಜೆಟ್​ನ್ನು ಕೊರತೆ ಬಜೆಟ್​ಗೆ ಕೊಂಡೊಯ್ದಿದ್ದಾರೆ. ಜನರಿಗೆ ಏನೋ ದೊಡ್ಡ ಸಹಾಯ ಮಾಡುವ ರೀತಿ ತೋರಿಸಿದ್ದಾರೆ. ಬಜೆಟ್​ನಲ್ಲಿ ಹಣಕಾಸಿನ ಸಮಸ್ಯೆ ಸೃಷ್ಟಿಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಮೀಸಲಿಟ್ಟ ಹಣ ಕಡಿತ ಮಾಡಲಾಗಿದೆ.

2018ರಲ್ಲಿ ಕಾಂಗ್ರೆಸ್ ಅಧಿಕಾರ ಬಿಟ್ಟಾಗ ಎಷ್ಟು ಪೆಂಡಿಂಗ್ ಬಿಲ್​ಗಳು ಇದ್ದವು. ಇದೊಂದು ನಿರಾಶಾದಾಯಕ ಬಜೆಟ್. ಬಜೆಟ್​ನ್ನು ಟೀಕೆಗೆ ಹೆಚ್ಚು ಬಳಸಿರುವುದು ದೇಶದಲ್ಲೇ ಮೊದಲು. ನಮ್ಮ ಹಲವು ಕಾರ್ಯಕ್ರಮ ಬಗ್ಗೆ ಸಂಪೂರ್ಣ ಮೌನವಾಗಿದ್ದಾರೆ.

ನಡೆ ನುಡಿಗಳಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಜನರಿಗೆ ಭಾರ ಹೊರಿಸಿರುವ ಅಭಿವೃದ್ಧಿಗೆ ಮಾರಕ ಬಜೆಟ್ ಇದು. ಹೇಗೆ ಹಣಕಾಸು ಹೊಂದಾಣಿಕೆ ಮಾಡುತ್ತಾರೆ ಎಂಬ ಸ್ಪಷ್ಟತೇ ಇಲ್ಲ. ಮುಖಪುಟಕ್ಕೂ ಒಳಗಿನ ವಿವರಣೆಗೂ ಸಾಕಷ್ಟು ವ್ಯತ್ಯಾಸ ಇದೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: Agriculture, Horticulture Budget 2023: ಸಿದ್ಧರಾಮಯ್ಯ ಬಜೆಟ್​ನಲ್ಲಿ ರೈತರ ಜೀವಾಳ ಕೃಷಿ ಮತ್ತು ತೋಟಗಾರಿಕೆಗೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ


ರಾಜ್ಯ ಸರ್ಕಾರದ ಬಜೆಟ್ ಕುರಿತು ವಿಪಕ್ಷ ಬಿಜೆಪಿ ಟ್ವೀಟ್ ಮಾಡಿದ್ದು, ಇದು ಎಟಿಎಂ ಸರ್ಕಾರದ ಕಲೆಕ್ಷನ್ ಬಜೆಟ್​ ಎಂದಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಾಲ ಮಾಡಿರುವ ಆರ್ಥಿಕ ವರ್ಷ. ಸರ್ಕಾರ ಮಾಡಿರುವ ಸಾಲ ಉತ್ಪಾದಕ ವಲಯಕ್ಕೆ ಪೂರಕವಾಗಿರದೇ, ಅನುತ್ಪಾದಕ ವಲಯಕ್ಕೆ ಮೀಸಲಾಗಿದೆ. ಆದಾಯವನ್ನು ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೇ, ಕೇವಲ ಸಾಲದ ಹೊರೆಯ ಹೇರಿಕೆ ಎಂದು ಟ್ವೀಟ್ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.