ಆಸ್ಪತ್ರೆಯಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಡಿಸ್ಚಾರ್ಜ್, ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ರೋಡ್​ ಶೋಗೆ ರೆಡಿ

| Updated By: ರಮೇಶ್ ಬಿ. ಜವಳಗೇರಾ

Updated on: Mar 06, 2023 | 8:48 AM

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಕಳೆದ ಐದು ದಿನಗಳಿಂದ ಮೊಣಕಾಲು ನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ವಾಪಸ್ ಮನೆಗೆ ಮರಳಿದ್ದು, ಹಾಸನ ಟಿಕೆಟ್​ ಗೊಂದಲವನ್ನು ನಿವಾರಿಸಲಿದ್ದಾರೆ.

ಆಸ್ಪತ್ರೆಯಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಡಿಸ್ಚಾರ್ಜ್, ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ರೋಡ್​ ಶೋಗೆ ರೆಡಿ
Follow us on

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಮೊಣಕಾಲು ನೋವಿನ ಚಿಕಿತ್ಸೆಗಾಗಿ ಕಳೆದ ಐದು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮೊಣಕಾಲು ನೋವು ಕಡಿಮೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಇಂದು(ಮಾರ್ಚ್ 06) ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.

ಇದನ್ನೂ ಓದಿ: ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೋದಿ ರೋಡ್​ ಶೋ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ದೇವೇಗೌಡ

ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ ಅವರು ಫೆಬ್ರುವರಿ 28ರಂದು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಇದರಿಂದ ಟ್ವೀಟ್ ಮೂಲಕ ಮಾಹಿತಿ ನೀಡಿದ್ದ ದೇವೇಗೌಡ್ರು, , ಯಾರೂ ಗಾಬರಿಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಮಾಮೂಲಿ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ಗಾಬರಿಗೊಳ್ಳುವ ಅಗತ್ಯವಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಮನೆಗೆ ಮರಳಲಿದ್ದೇನೆ ಎಂದಿದ್ದರು.

ಹಾಸನ ಟಿಕೆಟ್​​ ಗೊಂದಲಕ್ಕೆ ತೆರೆ ಬೀಳುತ್ತಾ?

ಹೌದು…ಹಾಸನ ಟಿಕೆಟ್​ ವಿಚಾರವಾಗಿ ಕುಟುಂಬದಲ್ಲಿ ಮುಸುಕಿನ ಗುದ್ದಾಟ ನಡೆದಿದೆ. ಹೆಚ್​ಡಿ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬದ ನಡುವೆ ಟಿಕೆಟ್​ ಫೈಟ್​ ಶುರುವಾಗಿದ್ದು, ಇದೀಗ ಇದು ದೊಡ್ಡಗೌಡ್ರ ಅಂಗಳ ತಲುಪಿದೆ. ದೇವೇಗೌಡ್ರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣ ಹಾಸನ ಟಿಕೆಟ್​ ಫೈನಲ್​ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅದರಂತೆ ಇದೀಗ ದೇವೇಗೌಡ್ರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು,  ಇಂದು ಹಾಸನ ಟಿಕೆಟ್​ ಗೊಂದಲ ಬಗೆಹರಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಯಾರಿಗೆ ಟಿಕೆಟ್ ಒಲಿಯಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಚುನಾವಣೆ ಪ್ರಚಾರದಲ್ಲಿ ಭಾಗಿ ಸಾಧ್ಯತೆ

ಕೆಲ ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳುತ್ತಿರುವ ದೇವೇಗೌಡ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆಯೂ ಕೆಲವೆಡೆ ಚುನಾವಣೆ ಪ್ರವಾಸ ಕೈಗೊಂಡಿದ್ದಾರೆ. ಇನ್ನು ತೀರಾ ಹೋಗಲು ಆಗದೇ ಇರುವ ಪರಿಸ್ಥಿತಿ ಇರುವಾಗ ಮನೆಯಲ್ಲಿ ಕುಳಿತುಕೊಂಡು ನಾಯಕರುಗಳಿಗೆ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಜೆಡಿಎಸ್ ತನ್ನ ಪಂಚರತ್ನ ಯಾತ್ರೆಯ ಸಮಾರೋಪ ಕಾರ್ಯಕ್ರಮಕ್ಕೂ ಮುನ್ನ ಮಾರ್ಚ್ 26 ರಂದು ಬೆಂಗಳೂರಿನ ಕುಂಬಳಗೋಡಿನಿಂದ ಮೈಸೂರಿನವರೆಗೆ 100 ಕಿಲೋಮೀಟರ್ ತೆರೆದ ವ್ಯಾನ್‌ನಲ್ಲಿ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರನ್ನು ಕರೆದುಕೊಂಡು ಹೋಗಲಿದೆ.

ಬೆಂಗಳೂರಿನಿಂದ ಮೈಸೂರಿನವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲು ದೇವೇಗೌಡರು ತೀರ್ಮಾನಿಸಿದ್ದಾರೆ. ಇದೆ ಮಾರ್ಚ್​ 26ರಂದು ರೋಡ್ ಶೋಗೆ ದೊಡ್ಡಗೌಡ್ರು ನಿರ್ಧಾರ ಮಾಡಿದ್ದಾರೆ. ಸಾವಿರಾರು ಕಾರ್ಯಕರ್ತರನ್ನು ಸೇರಿಸಿ ರೋಡ್ ಶೋ ಮೂಲಕ ದೇವೇಗೌಡ ಮೈಸೂರು ತಲುಪಲಿದ್ದಾರೆ. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್​ ಸುಪ್ರೀಂ ಎನ್ನುವ ಸಂದೇಶ ನೀಡಲಿದ್ದಾರೆ.

Published On - 8:42 am, Mon, 6 March 23