ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ: ಬಿಜೆಪಿಯ ಅಸ್ತ್ರಗಳನ್ನು ಬಿಚ್ಚಿಟ್ಟ ಅಶೋಕ್

ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಸದನದಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ-ಜೆಡಿಎಸ್​ ಸಿದ್ಧವಾಗಿವೆ. ಈಗಾಗಲೇ ಮೈತ್ರಿ ಪಕ್ಷಗಳ ನಾಯಕರು ಪೂರ್ವಭಾವಿ ಸಭೆ ನಡೆಸಿದ್ದು, ಹೋರಾಟದ ರೂಪುರೇಷಗಳ ಬಗ್ಗೆ ಚರ್ಚಿಸಿದ್ದಾರೆ. ಇನ್ನು ಈ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದ್ದು, ಸರ್ಕಾರದ ವಿರುದ್ಧ ತಮ್ಮ ಬಳಿ ಇರುವ ಅಸ್ತ್ರಗಳ ಬಗ್ಗೆ ವಿವರಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ: ಬಿಜೆಪಿಯ ಅಸ್ತ್ರಗಳನ್ನು ಬಿಚ್ಚಿಟ್ಟ ಅಶೋಕ್
Edited By:

Updated on: Dec 02, 2023 | 2:41 PM

ಬೆಂಗಳೂರು, (ಡಿಸೆಂಬರ್ 03): ಇದೇ ಡಿಸೆಂಬರ್ 4ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಶುರುವಾಗಲಿದೆ. ಬಿಜೆಪಿ ಹಾಗೂ ಜೆಡಿಎಸ್​ ಜಂಟಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿವೆ. ಇನ್ನು ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಬೆಳಗಾವಿ ಅಧಿವೇಶನ ಬಿಜೆಪಿ ಪಾಲಿಗೆ ಪ್ರಮುಖ ಅಧಿವೇಶನವಾಗಿದೆ. ಸರ್ಕಾರ ಬಂದಾಗಿಂದ ಅರವತ್ತು ತಪ್ಪುಗಳಾಗಿವೆ. ಬಂದ ಕೂಡಲೇ ವರ್ಗಾವಣೆ ಅಂಗಡಿ ತೆರೆದರು. ಐಟಿ ದಾಳಿಯಾಗಿ ಇವರ ಲೂಟಿ ಹಣ ಸಿಕ್ಕಿದೆ. ಈ ಬಗ್ಗೆ ಅಧಿವೇಶನದಲ್ಲಿ ಬಿಜೆಪಿ – ಜೆಡಿಎಸ್ ಒಂದಾಗಿ, ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಿಲುವಳಿಗಳನ್ನೂ ಒಟ್ಟಾಗಿ ಮಂಡಿಸಿ ಚರ್ಚೆ ಮಾಡುತ್ತೇವೆ. ಮುಖ್ಯವಾಗಿ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವನ್ನು ಜೆಡಿಎಸ್ ಬಿಜೆಪಿ ಒಟ್ಟಾಗಿ ಮಾಡುತ್ತೇವೆ. ಸರ್ಕಾರ, ಮಂತ್ರಿಗಳು ಬರ ನಿರ್ವಹಣೆಗೆ ಯಾವ ಕೆಲಸವನ್ನೂ ಮಾಡಿಲ್ಲ. ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಬರ, ಕಾನೂನು ಸುವ್ಯವಸ್ಥೆ ವೈಫಲ್ಯ, ಶಾಲೆಗಳಿಗೆ ಹುಸಿ ಬಾಂಬ್ ಮೇಲ್, ಜಮೀರ್ ಅಹಮದ್ ಅಸಂಬದ್ಧ ಹೇಳಿಕೆ, ಎನ್‌ಇಪಿ ರದ್ದು, ಜಾತಿಜನಗಣತಿ ವರದಿ, ನೀರಾವರಿ ಯೋಜನೆಗಳು ವಿಚಾರಗಳಲ್ಲಿ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ಮಾಡುತ್ತೇವೆ ಎಂದು ವಿವರಿಸಿದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಜಂಟಿ ಹೋರಾಟಕ್ಕೆ ಬಿಜೆಪಿ, JDS ನಿರ್ಧಾರ: ವಿರೋಧ ಪಕ್ಷದ ಬಳಿ ಯಾವೆಲ್ಲ ಅಸ್ತ್ರಗಳಿವೆ ಗೊತ್ತಾ?

ಕಾಂಗ್ರೆಸ್ ಗ್ಯಾರಂಟಿಗಳು ವಿಫಲವಾಗಿವೆ. ಇದರ ಬಗ್ಗೆಯೂ ಚರ್ಚೆ ಮಾಡುತ್ತೇವೆ. ನಿರುದ್ಯೋಗಿಗಳಿಗೆ ಆರು ತಿಂಗಳಿಂದ ಸರ್ಕಾರ ನಾಮ ಹಾಕಿದೆ. ಸಿಬಿಐ ತನಿಖೆಯ ಅನುಮತಿ ವಾಪಸ್ ಬಗ್ಗೆಯೂ ಸದನದಲ್ಲಿ ಚರ್ಚಿಸಲಾಗುತ್ತದೆ. ರಾಜ್ಯದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ‌. ನಮ್ಮ ಬತ್ತಳಿಕೆಯಲ್ಲಿ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳಿವೆ ಎಂದರು.

ಡಿಕೆ ಶಿವಕುಮಾರ್​ ತೆಲಂಗಾಣಕ್ಕೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ನಾವು ಇಲ್ಲಿನ ಜನರ ಕಷ್ಟಗಳ ಬಗ್ಗೆ ಚರ್ಚೆ ಮಾಡುವ ಬಗ್ಗೆ ಮಾತನಾಡುತ್ತೇವೆ. ಡಿಕೆ ಶಿವಕುಮಾರ್ ಅವರು ಜನರ ಹಿತ, ಕಷ್ಟ ಕಡೆಗಣಿಸಿ ತೆಲಂಗಾಣಕ್ಕೆ ಹೋಗುತ್ತಿದ್ದಾರೆ. ತೆಲಂಗಾಣ ಶಾಸಕರ ಹಿತವೇ ಡಿಕೆಶಿಗೆ ಹೆಚ್ಚಾಗಿದೆ. ರಾಜ್ಯದ ಜತರ ಕಷ್ಟಕ್ಕಿಂತಲೂ ತೆಲಂಗಾಣ ಶಾಸಕರ ಯೋಗಕ್ಷೇಮವೇ ಡಿಕೆಶಿಗೆ ಮುಖ್ಯ. ತೆಲಂಗಾಣ ಶಾಸಕರಿಗೆ ಯಾವ ಹೊಟೇಲ್ ನಲ್ಲಿ ಇರಿಸಬೇಕು? ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ ಕೊಡಿಸಬೇಕಾ? ಯೋಗಕ್ಷೇಮ ಹೇಗೆ ಮಾಡಬೇಕು ಅನ್ನೋದೇ ಡಿಕೆಶಿಗೆ ಮುಖ್ಯ. ಇವರಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Loading...
Unable to load recommendations.
Follow Us