ಕ್ಷೇತ್ರ ಹಂಚಿಕೆ ಫೈನಲ್ ಆಯ್ತಾ? ಮಂಡ್ಯದಲ್ಲಿ ಲೋಕಸಭಾ ತಯಾರಿ ಆರಂಭಿಸಿದ ಜೆಡಿಎಸ್ ನಾಯಕ, ಸುಮಲತಾ ನಡೆ ಏನು?
ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದ್ರೆ, ಸೀಟು ಹಂಚಿಕೆ ಮಾತ್ರ ಇನ್ನೂ ಅಧಿಕೃತವಾಗಿ ಫೈನಲ್ ಆಗಿಲ್ಲ. ಇದರ ಮಧ್ಯೆ ಜೆಡಿಎಸ್ ಕೆಲ ಕ್ಷೇತ್ರಗಳು ಸಿಗುವುದು ಖಚಿತವಾಗಿದ್ದರಿಂದ ಚುನಾವಣಾ ತಯಾರಿ ಆರಂಭಿಸಿದೆ. ಅದರಂತೆ ಮಂಡ್ಯ ಕ್ಷೇತ್ರದಲ್ಲಿ ಮಾಜಿ ಸಂಸದ ಚುನಾವಣಾ ಸಿದ್ಧತೆ ನಡೆಸಿದ್ದು, ಸುಮಲತಾ ಅಂಬರೀಶ್ ಮುಂದಿನ ನಡೆ ಏನು ಎನ್ನುವುದೇ ಕುತೂಹಲ ಮೂಡಿಸಿದೆ.

ಬೆಂಗಳೂರು, (ಡಿಸೆಂಬರ್ 01): ಲೋಕಸಬಾ ಚುನಾವಣೆಗೆ (Loksabha Elections 2024) ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಸಜ್ಜುಗೊಳ್ಳುತ್ತಿವೆ. ಅದರಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ (jds bjp alliance )ಕಾಂಗ್ರೆಸ್ ವಿರುದ್ಧ ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದು, ಭರ್ಜರಿ ಗೆಲುವು ಸಾಧಿಸಲು ರಣತಂತ್ರಗಳನ್ನ ರೂಪಿಸುತ್ತಿವೆ. ಆದ್ರೆ, ಕ್ಷೇತ್ರ ಹಂಚಿಕೆ ಮಾತುಕತೆ ಹಂತದಲ್ಲಿದ್ದು, ಕೆಲ ಗೊಂದಲಗಳು ಏರ್ಪಟ್ಟಿವೆ. ಇದರಿಂದ ಕ್ಷೇತ್ರ ಹಂಚಿಕೆ ಕಗ್ಗಂಟಾಗಿ ಉಳಿದಿದೆ. ಅದರಲ್ಲೂ ಮಂಡ್ಯ ಕ್ಷೇತ್ರಕ್ಕೆ ಪಟ್ಟು ಹಿಡಿದಿರುವ ಜೆಡಿಎಸ್, ಚುನಾವಣಾ ತಯಾರಿ ಮಾಡಿಕೊಳ್ಳುವಂತೆ ಸಿಎಸ್ ಪುಟ್ಟರಾಜುಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಸುಮಲತಾ ಅಂಬರೀಶ್ ನಡೆ ತೀವ್ರ ಕುತೂಹಲಕ ಮೂಡಿಸಿದೆ.
ಮಂಡ್ಯ ಲೋಕಸಭಾ ಚುನಾವಣೆಗೆ ಜೆಡಿಎಸ್ ತಯಾರಿ ಆರಂಭಿಸಿದ್ದು, ಸಿದ್ಧತೆ ಮಾಡಿಕೊಳ್ಳುವಂತೆ ಸಿಎಸ್ ಪುಟ್ಟರಾಜುಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪುಟ್ಟರಾಜು ಅವರು ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಸಾವಿರು ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ ತಯಾರಿ ನಡೆಸಿದ್ದಾರೆ. ಇದರೊಂದಿಗೆ ಪುಟ್ಟರಾಜು ಮಂಡ್ಯ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಖಚಿತ ಎನ್ನುವ ಚರ್ಚೆಗಳು ಶುರುವಾಗಿವೆ.
ಜೆಡಿಎಸ್ ವರಿಷ್ಠರ ಸೂಚನೆಯಂತೆ ಸಿದ್ಧತೆ ಆರಂಭಿಸಿರುವ ಪುಟ್ಟರಾಜು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಕ್ರೀಡಾಂಗಣದಲ್ಲಿ 60ನೇ ವರ್ಷದ ಹುಟ್ಟುಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಿದ್ದಾರೆ. ಅರ್ಜುನ್ ಜನ್ಯ ನೇತೃತ್ವದಲ್ಲಿ ಸಾಂಸ್ಕೃತಿಕ ಆಯೋಜಿಸಲಾಗಿತ್ತು. ಅಲ್ಲದೇ ಹಲವು ನಟ, ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಅದ್ದೂರಿ ಕಾರ್ಯಕ್ರಮದ ಮೂಲಕ ಪುಟ್ಟರಾಜು ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದೇಶ ರವಾನಿಸಿದ್ದಾರೆ.
ಸುಮಲತಾ ನಡೆ ನಿಗೂಢ
ಸದ್ಯ ಮಂಡ್ಯ ಸಂಸದೆಯಾಗಿರೋ ಸುಮಲತಾ ಅವರು ಈಗಾಗಲೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮೈತ್ರಿ ಅಂತಾ ಬಂದರೆ ಮಂಡ್ಯದಿಂದ ಸುಮಲತಾಗೆ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಈ ಬಾರಿ ಮಂಡ್ಯ ಕ್ಷೇತ್ರ ಸೇರಿ ಕೆಲವು ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಗೆ ಅಂತಾದ್ರೆ ಸುಮಲತಾ ನಡೆ ಏನು? ಇದರ ನಡುವೆ ಸುಮಲತಾ ಬೆಂಗಳೂರು ಉತ್ತರದಿಂದ ಸ್ವರ್ಧೆ ಮಾಡುತ್ತಾರೆ ಎಂಬ ಚರ್ಚೆ ಕೂಡ ಶುರುವಾಗಿದೆ. ಮತ್ತೊಂದೆಡೆ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲೇ ಸ್ಪರ್ಧೆ ಮಾಡುತ್ತಾರಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಯಾಕಂದರೆ ರಾಜಕೀಯ ಬಿಡುತ್ತೇನೆ ಹೊರತು ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಈಗಾಗಲೇ ಸುಮಲತಾ ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೆ ಸುಮಲತಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಡ್ಯ ಅಖಾಡಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ