ಹಾಸನ ಜಿಲ್ಲೆಯ 7 ಕ್ಷೇತ್ರ ಗೆಲ್ಲಲು ದೇವೇಗೌಡರ ಸೂಚನೆ: ಹೆಚ್ ಡಿ ರೇವಣ್ಣ ಏನಂದ್ರು ನೋಡಿ

ಇಂದು ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ಹಾಸನ ಜಿಲ್ಲಾ ಜೆಡಿಎಸ್ ಅಭ್ಯರ್ಥಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ರೇವಣ್ಣ ಭಾಗಿಯಾಗಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ ಗೈರಾಗಿದ್ದಾರೆ.

ಹಾಸನ ಜಿಲ್ಲೆಯ 7 ಕ್ಷೇತ್ರ ಗೆಲ್ಲಲು ದೇವೇಗೌಡರ ಸೂಚನೆ: ಹೆಚ್ ಡಿ ರೇವಣ್ಣ ಏನಂದ್ರು ನೋಡಿ
ಹೆಚ್​ಡಿ ರೇವಣ್ಣ
Rakesh Nayak Manchi

Updated on: Mar 20, 2023 | 8:50 PM

ಹಾಸನ: ಇಂದು ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ (HD Deve Gowda) ಸಮ್ಮುಖದಲ್ಲಿ ಹಾಸನ ಜಿಲ್ಲಾ ಜೆಡಿಎಸ್ (Hassan JDS) ಅಭ್ಯರ್ಥಿಗಳ ಸಭೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ನಡೆಯಿತು. ಈ ಸಭೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಗೈರಾಗಿದ್ದಾರೆ. ಆದರೆ ಹಾಸನ ಕ್ಷೇತ್ರದ ಟಿಕೆಟ್​ ತನ್ನ ಪತ್ನಿ ಭವಾನಿಗೆ ನೀಡಲು ಪಟ್ಟು ಹಿಡಿದಿರುವ ಹೆಚ್.ಡಿ. ರೇವಣ್ಣ (HD Revanna) ಸಭೆಯಲ್ಲಿ ಭಾಗಿಯಾಗಿದ್ದಾರೆ. ಬಳಿಕ ಮಾತನಾಡಿದ ಅವರು, ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂದು ದೇವೇಗೌಡರು ಸೂಚಿಸಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್‌ ಸಂಬಂಧ ಹೆಚ್ಚು ತಲೆಕೆಡಿಸಿಕೊಳ್ಳೋದು ಬೇಡ ಎಂದು ಹೇಳಿದರು.

ಹಾಸನ ಜಿಲ್ಲೆಗೆ ಕುಮಾರಸ್ವಾಮಿ ನೀಡಿದ್ದ ಅನುದಾನಕ್ಕೆ ಬಿಜೆಪಿಯವರು ತಡೆ ನೀಡಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಯಿಂದಲೇ ಐಐಟಿ, ವಿಮಾನ ನಿಲ್ದಾಣಕ್ಕೆ ತಡೆಯಾಗಿದೆ. ಆದರೂ ನಾವು ಧೃತಿಗೆಡದೆ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಹೇಳಿದ ರೇವಣ್ಣ, ಕುಮಾರಸ್ವಾಮಿ ಅವರು ಏಕಾಂಗಿಯಾಗಿ ರಾಜ್ಯದಲ್ಲಿ ಪಂಚರತ್ನ ಯಾತ್ರೆ ಮಾಡಿದ್ದಾರೆ. ಕಾಂಗ್ರೆಸ್ ಬಿಜೆಪಿ ಅವರು ಡಜನ್ ಗಟ್ಟಲೆ ಜನರನ್ನು ಕರೆದುಕೊಂಡು ಯಾತ್ರೆ ಮಾಡುತ್ತಾ ಇದ್ದಾರೆ. ಬೆಸ್ಕಾಂ ಈಗ 48 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿದೆ. ಹೀಗಿದ್ದಾಗ ಕಾಂಗ್ರೆಸ್‌ ಯಾರಿಗೆ ಗ್ಯಾರಂಟಿ ಕಾರ್ಡ್‌ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: War of words goes unabated: ಕೆಎಂ ಶಿವಲಿಂಗೇಗೌಡರ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಹೆಚ್ ಡಿ ರೇವಣ್ಣ

ಹಾಸನದ ಟಿಕೆಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ, ಏನಾಗಿತ್ತದೆ ಅಂತ ಪರದೆ ಮೇಲೆ ನಡೆಯಲಿ. ಎರಡು ರಾಷ್ಟ್ರೀಯ ಪಕ್ಷ ಟ್ರೈಲರ್ ಬಿಡುಗಡೆ ಮಾಡಲಿ, ಆಮೇಲೆ ನೋಡೊಣ. ದೇಶದಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕು. ಕುಮಾರಸ್ವಾಮಿ ಶಿಕ್ಷಣ ಇಲಾಖೆಗೆ ಕ್ರಾಂತಿ ಮಾಡಿದ್ದಾರೆ. ಶಾಲೆ, ಶಿಕ್ಷಕರನ್ನು ನೇಮಿಸಿದ್ದು ಕುಮಾರಸ್ವಾಮಿಯವರು. ಅನೇಕ ಯೋಜನೆಗಳನ್ನು ನೀಡಿರುವುದು ಕುಮಾರಸ್ವಾಮಿ ಎಂದರು.

ಮೈಸೂರು ಬೆಂಗಳೂರು ಹೆದ್ದಾರಿ ಇಷ್ಟು ಶರವೇಗದಲ್ಲಿ ಆಗಿದೆ ಎಂದರೆ ಅದಕ್ಕೆ ಕುಮಾರಸ್ವಾಮಿ ಮತ್ತು ನಾನು ಕಾರಣ. ನಾನು ಭೂಮಿ ಕೊಡದೇ ಹೋಗಿದ್ದಿದ್ದರೆ ಏನಾಗುತ್ತಿತ್ತು? ಮೈಸೂರು ಸಂಸದರು ಏನು ಹೇಳುತ್ತಾರೋ ಆ ಬಗ್ಗೆ ನಾನು ಮಾತಾಡುವುದಿಲ್ಲ. ನಾನು ಹಾಸನ ಶಾಸಕರ ಬಗ್ಗೆ ಮಾತಾಡುವುದಿಲ್ಲ ಎಂದರು.

ಸಭೆಯಲ್ಲಿ ಹಾಸನ ಜಿಲ್ಲೆಯ ರಾಜಕೀಯ ಸ್ಥಿತಿ ಗತಿ ಬಗ್ಗೆ ಚರ್ಚೆ

ದೇವೆಗೌಡರ ನಿವಾಸದಲ್ಲಿ ಹಾಸನ ಜಿಲ್ಲೆಯ ಹಾಲಿ ಜೆಡಿಎಸ್ ಶಾಸಕರ ಸಭೆಯಲ್ಲಿ ಜಿಲ್ಲೆಯ ರಾಜಕೀಯ ಸ್ಥಿತಿ ಗತಿಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದೇ ವೇಳೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಕುರಿತು ಸಮಾಲೋಚನೆ ನಡೆಸಲಾಯಿತು. ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದ ಟಿಕೆಟ್ ಅನ್ನು ಸಾಮಾನ್ಯ ಕಾರ್ಯಕರ್ತನಿಗೆ ನೀಡುವುದಾಗಿ ಪಟ್ಟು ಹಿಡಿದಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ರೇವಣ್ಣ ಅವರು ತಮ್ಮ ಪತ್ನಿಯನ್ನು ಹಾಸನ ಕ್ಷೇತ್ರದಲ್ಲಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಟಿಕೆಟ್​ಗಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ದೇವೇ ಗೌಡರ ಜೊತೆಗಿನ ಹಾಸನ ಶಾಸಕರ ಸಭೆ ಹಾಗೂ ಈ ಸಭೆಗೆ ಕುಮಾರಸ್ವಾಮಿ ಅವರು ಗೈರಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿರುದ್ಧ ರೇವಣ್ಣ ವಾಗ್ದಾಳಿ

ಹೆಚ್​ಡಿ ರೇವಣ್ಣ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ನಡುವಿನ ಆಡಿಯೋ ವೈರಲ್ ವಿಚಾರವಾಗಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ, ಆ ಹುಡುಗ ಆಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ನನಗೆ ಗೊತ್ತಿಲ್ಲ. ಆಡಿಯೋದಲ್ಲಿ ಹೇಳಿರುವುದು ಸತ್ಯ ಅಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಹೇಳಲಿ ಎಂದು ಸವಾಲು ಹಾಕಿದರು. ಶಿವಲಿಂಗೇಗೌಡ ರಾಗಿ ಕಳ್ಳ ಅಂದ ಕೂಡಲೇ ಸತ್ಯ ಮಾಡಲಿಲ್ವಾ? ಕುರುಬರು, ಲಿಂಗಾಯತರು, ಒಕ್ಕಲಿಗರು ನನಗೆ ವೋಟು ಹಾಕಲ್ಲ ಅಂತ ಆ ಆಡಿಯೋದಲ್ಲೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ. ನಾನೇನಾದರು ಒಂದು ಪದ ಎಡಿಟ್ ಮಾಡಿದ್ದರೆ ಧರ್ಮಸ್ಥಳದ ಮಂಜುನಾಥ ನನ್ನನ್ನು ನೋಡಿಕೊಳ್ಳಲಿ. ಇಲ್ಲವಾದರೆ ಆ ದೇವರು ಅವರನ್ನು ನೋಡಿಕೊಳ್ಳಲಿ ಎಂದರು.

ಅರಸೀಕೆರೆ ಜನ ದುಡ್ಡು ಇಲ್ಲದೆ ಓಟು ಹಾಕಲ್ಲ ಅಂತಾರೆ, ಹಾಗಾದರೆ ಹದಿನೈದು ವರ್ಷ ಅರಸೀಕೆರೆ ಜನ ದುಡ್ಡು ತಗೊಂಡು ಓಟು ಹಾಕಿದ್ದರೇ? ಹದಿನಾಲ್ಕು ತಿಂಗಳಿನಲ್ಲಿ 250 ಕೋಟಿ ಕೊಟ್ಟಿದ್ದೇವೆ. ಗುತ್ತಿಗೆ ಪಡೆದವರು ನಾನು ಒಂದು ಬಿಡಗಾಸು ತಗಂಡಿದ್ದೇನೆ ಅಂತ ಆರೋಪ ಮಾಡಿದರೆ ರಾಜಕೀಯ ಬಿಟ್ಟು ಹೋಗುತ್ತೇನೆ. ದೇವರು ಇದ್ದರೆ ಇದನ್ನೆಲ್ಲಾ ನೋಡಿಕೊಳ್ಳಲಿ. ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲೇಬೇಕು ಅಂತ ಹೊರಟರು, ಏನಾಯಿತು? ಈತ ಗಂಡಸಿಲಿ‌ ಹದಿನೇಳು ವೋಟಲ್ಲಿ ಸೋತಿದ್ದ. ರಾಜಕೀಯ ವಿದ್ಯಾಮಾನ ಏನಾಯ್ತು? ಸಮಯ ಬಂದಾಗ ಹೇಳುತ್ತೇನೆ. ಇನ್ನೊಂದು ಸ್ವಲ್ಪ ಬಿಚ್ಚುವುದು ಇದೆ. ಎಳೆಎಳೆಯಾಗಿ ಬಿಚ್ಚುತ್ತೇನೆ. ಹದಿನೈದು ವರ್ಷದಲ್ಲಿ ನಮ್ಮದು ಏನೇನಿದೆಯೋ ಬಿಚ್ಚೋಕೆ ಹೇಳಿ, ಬರಲಿ ಧರ್ಮಸ್ಥಳದ ಮುಂದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:50 pm, Mon, 20 March 23

Loading...
Unable to load recommendations.
Follow Us