Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ ಅಧ್ಯಕ್ಷ ಡಿಕೆ ಶಿವಕುಮಾರ್ ​ರೌಡಿ ಕೊತ್ವಾಲ್ ರಾಮಚಂದ್ರನ ಶಿಷ್ಯ: ರೇಣುಕಾಚಾರ್ಯ

ರಾಜ್ಯ ಕಾಂಗ್ರೆಸ್​ನ​ ಅಧ್ಯಕ್ಷ ಒಬ್ಬ ರೌಡಿ ಎಂದು ಹೊನ್ನಾಳಿ ಬಿಜೆಪಿ ಎಂ. ಪಿ ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ.

ಕಾಂಗ್ರೆಸ್​​ ಅಧ್ಯಕ್ಷ ಡಿಕೆ ಶಿವಕುಮಾರ್ ​ರೌಡಿ ಕೊತ್ವಾಲ್ ರಾಮಚಂದ್ರನ ಶಿಷ್ಯ: ರೇಣುಕಾಚಾರ್ಯ
ಶಾಸಕ ಎಂ ಪಿ ರೇಣುಕಾಚಾರ್ಯ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 05, 2022 | 3:18 PM

ದಾವಣಗೆರೆ: ರಾಜ್ಯ ಬಿಜೆಪಿ (BJP) ನಾಯಕರ ಜೊತೆ ಹಾಲಿ ಮತ್ತು ಮಾಜಿ ರೌಡಿಶೀಟರ್​ಗಳು (Rowdies) ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ (Congress)​ ಬಿಟ್ಟು ಬಿಡದೇ ಬಿಜೆಪಿ ಮೇಲೆ ಹರಿಹಾಯುತ್ತಿದ್ದೆ. ಇದಕ್ಕೆ ಬಿಜೆಪಿ ನಾಯಕರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ರಾಜ್ಯ ಕಾಂಗ್ರೆಸ್​ನ​ ಅಧ್ಯಕ್ಷ ಒಬ್ಬ ರೌಡಿ ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ ರೇಣುಕಾಚಾರ್ಯ (M P Renukacharya) ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ, ಶಾಸಕ ಡಿಕೆ ಶಿವಕುಮಾರ್​ (DK Shivakumar) ಕೊತ್ವಾಲ್ ರಾಮಚಂದ್ರನ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತು. ಮ್ಯಾನ್​ ಪವರ್, ಮನಿ ಪವರ್​ನಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್​ನಲ್ಲೇ ಎಲ್ಲಾ ರೌಡಿಗಳು ಇದ್ದಾರೆ. ಗೂಂಡಾಗಳು, ರೌಡಿಗಳನ್ನು ಪೋಷಿಸುವ ಸಂಸ್ಕತಿ ಕಾಂಗ್ರೆಸ್​​ನದ್ದು. ರೌಡಿಗಳ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್​. ಬಿಜೆಪಿ ಅಂದರೇ ದೇಶಭಕ್ತರ ಪಕ್ಷವಾಗಿದ್ದು, ಬಿಜೆಪಿ ರೌಡಿಗಳನ್ನು ಮಟ್ಟಹಾಕಿದೆ. ಗೂಂಡಾ ಮನಸ್ಸನ್ನು ಪರಿವರ್ತನೆ ಮಾಡಿದ ಪಕ್ಷ ಅಂತ ಇದ್ದರೇ ಅದು ಬಿಜೆಪಿ ಎಂದರು .

ಇದನ್ನೂ ಓದಿ: ಕಾಂಗ್ರೆಸ್ ಕುತಂತ್ರ ರಾಜಕಾರಣದಿಂದಲೇ ರೆಡ್ಡಿ & ಯಡ್ಡಿಯೂರಪ್ಪ ಜೈಲುಪಾಲಾಗಿದ್ದರು: ಶ್ರೀರಾಮುಲು ಸ್ಫೋಟಕ ಹೇಳಿಕೆ

ಗುಜರಾತ್ ಜನತೆ ಮನೆ‌ ಮಗನನ್ನು ಗೆಲ್ಲಿಸಿಯೇ ಗೆಲ್ಲಿಸುತ್ತಾರೆ

ಪ್ರಧಾನಿ ನರೇಂದ್ರ ಮೋದಿ ಅವರ ತವರೂರು ಗುಜರಾತ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಎರಡು ಹಂತದಲ್ಲಿ ಮತದಾನ ಮುಗಿದ್ದಿದ್ದು, ಮತದಾರ ಪ್ರಭು ಯಾರತ್ತ ವಾಲಿದ್ದಾರೆ ಎಂಬುವುದನ್ನು ನೋಡಬೇಕಾಗಿದೆ. ಈ ಸಂಬಂಧ ಮಾತನಾಡಿದ ಶಾಸಕ ರೇಣುಕಾಚಾರ್ಯ ಗುಜರಾತ್ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಬಿಜೆಪಿ ಗೆಲ್ಲುತ್ತೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಜರಾತ್ ಜನತೆ ಮನೆ‌ ಮಗನನ್ನು ಗೆಲ್ಲಿಸಿಯೇ ಗೆಲ್ಲಿಸುತ್ತಾರೆ. ಗುಜರಾತ್​ನಲ್ಲಿ 120 – 130 ಸೀಟು ಬಂದೇ ಬರುತ್ತವೆ. ಗುಜರಾತ್ ಚುನಾವಣೆ ದೇಶದ ಎಲ್ಲಾ ರಾಜ್ಯಗಳ ಚುನಾವಣೆಯ ದಿಕ್ಸೂಚಿಯಾಗುತ್ತೆ ಎಂದರು.

ಕರ್ನಾಟಕದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ

ಮಹಾರಾಷ್ಟ್ರ ಗಡಿ ವಿಚಾರವಾಗಿ ಮಾತನಾಡಿದ ಅವರು ಕರ್ನಾಟಕದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ. ನಮ್ಮ ಸರ್ಕಾರ ಈಗಾಗಲೇ ಅವರಿಗೆ ಎಚ್ಚರಿಕೆಯನ್ನು ಕೊಟ್ಟಿದೆ. ಕರ್ನಾಟಕದ ನೆಲ, ಜಲ ಮತ್ತು ಭಾಷೆಗೆ ಧಕ್ಕೆ ಬಂದರೆ ಸಹಿಸೋಲ್ಲ. ಗಡಿಭಾಗದಲ್ಲಿ ಮಹಾರಾಷ್ಟ್ರದವರ ಗುಂಡಾಗಿರಿ ನಡೆಯೋದಿಲ್ಲ. ಕರ್ನಾಟಕದ ಒಂದಿಂಚು ಭೂಮಿಯನ್ನು ತಗೋಳ್ಳಿ ನೋಡೋಣ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Mon, 5 December 22