MVA crisis ಎನ್​​ಸಿಪಿ, ಕಾಂಗ್ರೆಸ್ ಜತೆಗಿನ ಅಸಹಜ ಮೈತ್ರಿಯಿಂದ ಹೊರಬನ್ನಿ ಎಂದು ಶಿವಸೇನಾಗೆ ಶಿಂಧೆ ಸಲಹೆ; ಮಾತೋಶ್ರೀಗೆ ಉದ್ಧವ್ ಠಾಕ್ರೆ ಶಿಫ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Jun 22, 2022 | 10:36 PM

ಪಕ್ಷ ಮತ್ತು ಸೈನಿಕರ ಉಳಿವಿಗಾಗಿ, ಈ ಅಸಹಜ ಮೈತ್ರಿಯಿಂದ ಹೊರಬರುವುದು ಅವಶ್ಯಕ. ಮಹಾರಾಷ್ಟ್ರದ ಒಳಿತಿಗಾಗಿ ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ ಎಂದು ಏಕನಾಥ್ ಶಿಂಧೆ ಟ್ವೀಟಿಸಿದ್ದಾರೆ.

MVA crisis ಎನ್​​ಸಿಪಿ, ಕಾಂಗ್ರೆಸ್ ಜತೆಗಿನ ಅಸಹಜ ಮೈತ್ರಿಯಿಂದ ಹೊರಬನ್ನಿ ಎಂದು ಶಿವಸೇನಾಗೆ ಶಿಂಧೆ ಸಲಹೆ; ಮಾತೋಶ್ರೀಗೆ ಉದ್ಧವ್ ಠಾಕ್ರೆ ಶಿಫ್ಟ್
ಏಕನಾಥ್ ಶಿಂಧೆ
Follow us on

ಮುಂಬೈ: ಶಿವಸೇನಾದ (Shiv Sena) ಶಾಸಕರು ಏಕನಾಥ್ ಶಿಂಧೆ  (Eknath Shinde) ಪಾಳಯಕ್ಕೆ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆ, ರಾಜ್ಯ ನಗರಾಭಿವೃದ್ಧಿ ಮತ್ತು ಲೋಕೋಪಯೋಗಿ ಸಚಿವ ಶಿಂಧೆ,  ಶಿವಸೇನಾ ಮತ್ತು ಅದರ ಸೈನಿಕರ ಉಳಿವು ಖಚಿತಪಡಿಸಿಕೊಳ್ಳಲು ಪಕ್ಷವು “ಅಸಹಜ ಮೈತ್ರಿ ” ದಿಂದ ಹೊರಬರುವುದು ಅಗತ್ಯ ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ  ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ (NCP) ಜೊತೆ ಮೈತ್ರಿ ಮಾಡಿಕೊಂಡಿದ್ದು ಅದನ್ನೇ ಶಿಂಧೆ ಅಸಹಜ ಮೈತ್ರಿ ಎಂದು ಹೇಳಿದ್ದಾರೆ. ಎಂವಿಎ ಸರ್ಕಾರದ ಅಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ, ಸಮ್ಮಿಶ್ರ ಪಾಲುದಾರರು ಮಾತ್ರ ಲಾಭ ಪಡೆದರು. ಶಿವಸೈನಿಕರು ಹತಾಶರಾಗಿದ್ದರು. ನಮ್ಮ ಮಿತ್ರಪಕ್ಷಗಳು ಬಲಗೊಂಡಾಗ ಶಿವಸೇನಾ ಮತ್ತು ಸೈನಿಕರನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಲಾಯಿತು. ಪಕ್ಷ ಮತ್ತು ಸೈನಿಕರ ಉಳಿವಿಗಾಗಿ, ಈ ಅಸಹಜ ಮೈತ್ರಿಯಿಂದ ಹೊರಬರುವುದು ಅವಶ್ಯಕ. ಮಹಾರಾಷ್ಟ್ರದ ಒಳಿತಿಗಾಗಿ ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ ಎಂದು ಶಿಂಧೆ ಟ್ವೀಟಿಸಿದ್ದಾರೆ.

ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಸಂಜೆ ಫೇಸ್​​ಬುಕ್ ಲೈವ್ ಮೂಲಕ ರಾಜ್ಯವನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ನಾನು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಲು ಸಿದ್ಧ. ಬಂಡಾಯ ಶಾಸಕರಿಂದ ಅಧಿಕೃತ ಹೇಳಿಕೆ ಬಂದರೆ ಸಿಎಂ ಸ್ಥಾನ ತ್ಯಜಿಸಿ ನಾನು ಮುಖ್ಯಮಂತ್ರಿ ನಿವಾಸವನ್ನು ತೊರೆಯುತ್ತೇನೆ. ನನ್ನ ಬಳಿ ಬಂದು ರಾಜೀನಾಮೆ ಪತ್ರ ಕೇಳಿದರೆ ನಾನು ಅದನ್ನು ಕೊಡುತ್ತೇನೆ. ನಾನು ಸಿಎಂ ಆಗಿ ಮುಂದುವರಿಯುವುದು ಇಷ್ಟವಿಲ್ಲ ಎಂದು ಯಾವುದಾದರೂ ಶಾಸಕ ಹೇಳಿದರೆ ನಾನು ವರ್ಷಾ ಬಂಗ್ಲಾದಿಂದ (ಸಿಎಂ ಅಧಿಕೃತ ನಿವಾಸ) ಮಾತೋಶ್ರೀಗೆ ನನ್ನ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇನೆ. ಸ್ವಂತದವರು ಹೊಡೆದರೆ ಹೆಚ್ಚು ನೋವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ
Maharashtra Political Crisis ನೀವು ರಾಜೀನಾಮೆ ನೀಡಿ ಎಂದು ಹೇಳಿದರೆ ಸಿಎಂ ಸ್ಥಾನ ತ್ಯಜಿಸಲು ಸಿದ್ಧ: ಉದ್ಧವ್ ಠಾಕ್ರೆ
Maharashtra Political Crisis: ಬಂಡಾಯ ಶಾಸಕರು ಗುಜರಾತ್​ನಿಂದ ಅಸ್ಸಾಂಗೆ ಶಿಫ್ಟ್, 40 ಶಾಸಕರ ಬೆಂಬಲವಿದೆ ಎಂದ ಏಕನಾಥ್ ಶಿಂಧೆ
ಮಧ್ಯಪ್ರದೇಶ, ಕರ್ನಾಟಕದ ಬಳಿಕ ಮಹಾರಾಷ್ಟ್ರದಲ್ಲಿ ಅಪರೇಷನ್ ಕಮಲ; ಶಿವಸೇನಾ ವಿರುದ್ಧ ಬಂಡಾಯ ಎದ್ದ 22 ಶಾಸಕರು

ಏತನ್ಮಧ್ಯೆ, ಒಡೆದುಹೋದ ಬಣದ ಭಾಗವಾಗಿರುವ 34 ಶಿವಸೇನೆ ಶಾಸಕರು ಏಕನಾಥ್ ಶಿಂಧೆ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸುವ ನಿರ್ಣಯವನ್ನು ಅಂಗೀಕರಿಸಿದರು. ನಿರ್ಣಯದಲ್ಲಿ, ಅವರು “ ಸೈದ್ಧಾಂತಿಕವಾಗಿ ಪಕ್ಷವನ್ನು ವಿರೋಧಿಸುವ ಎನ್‌ಸಿಪಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಸರ್ಕಾರ ರಚಿಸಿದ್ದಕ್ಕಾಗಿ ಶಿವಸೇನಾದೊಂದಿಗೆ ಪಕ್ಷದ ಕಾರ್ಯಕರ್ತರಲ್ಲಿ ತುಂಬಾ ಅಸಮಾಧಾನವಿದೆ ಎಂದು ಹೇಳಿದ್ದಾರೆ.

ಮಾತೋಶ್ರೀ ಬಂಗ್ಲೆಗೆ ಶಿಫ್ಟ್ ಆದ ಉದ್ಧವ್ ಠಾಕ್ರೆ ಮತ್ತು ಕುಟುಂಬ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯವರ ಅಧಿಕೃತ ನಿವಾಸ ‘ವರ್ಷಾ’ದಿಂದ ತಮ್ಮ ವೈಯಕ್ತಿಕ ವಸ್ತುಗಳನ್ನು ‘ಮಾತೋಶ್ರೀ’ಗೆ ಸ್ಥಳಾಂತರಿಸಿದ್ದಾರೆ. ಮನೆಯಿಂದ ಹೊರಡುವಾಗ ಪತ್ನಿ ರಶ್ಮಿ, ಮಕ್ಕಳಾದ ತೇಜಸ್ ಮತ್ತು ಆದಿತ್ಯ ಜೊತೆಗಿದ್ದರು. ವರ್ಷಾ ಅಧಿಕೃತ ನಿವಾಸವಾಗಿದ್ದರೂ, ಠಾಕ್ರೆ ತನ್ನ ಖಾಸಗಿ ನಿವಾಸ ಮಾತೋಶ್ರೀಯಿಂದ ಕಾರ್ಯನಿರ್ವಹಿಸಲು ಬಳಸುತ್ತಿರುತ್ತಾರೆ.


‘ಮಾತೋಶ್ರೀ’ ಹೊರಗೆ ಶಿವಸೇನಾ ಕಾರ್ಯಕರ್ತರ ದಂಡು

ಮುಂಬೈನಲ್ಲಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಶಿವಸೇನೆ ಕಾರ್ಯಕರ್ತರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಜಮಾಯಿಸಿದ್ದಾರೆ.


ಶಿವಸೇನೆಯ ಯಾವುದೇ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ, ಏಕನಾಥ್ ಶಿಂಧೆ ಜೊತೆ ಮಾತನಾಡಿಲ್ಲ: ಬಿಜೆಪಿ ನಾಯಕ

ಮುಂಬೈನಲ್ಲಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ನಾಯಕ ರಾವ್ಸಾಹೇಬ್ ಪಾಟೀಲ್ ದಾನ್ವೆ, ಯಾವುದೇ ಶಿವಸೇನಾ ನಾಯಕರು ಪಕ್ಷದೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದಾರೆ.


ಉದ್ಧವ್ ಠಾಕ್ರೆ ಸಿಎಂ ಆಗಿಯೇ ಇರುತ್ತಾರೆ: ಶಿವಸೇನೆ ನಾಯಕ ಸಂಜಯ್ ರಾವತ್


ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದು, ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ಅವಕಾಶ ಸಿಕ್ಕರೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ ಎಂದಿದ್ದಾರೆ ರಾವತ್.

ಕೊವಿಡ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉದ್ಧವ್ ವಿರುದ್ಧ ದೂರು

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮುಂಬೈನ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ಜನರನ್ನು ಭೇಟಿ ಮಾಡಿದ್ದಕ್ಕಾಗಿ ಬಿಜೆಪಿ ಯುವ ರಾಷ್ಟ್ರೀಯ ಕಾರ್ಯದರ್ಶಿ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದಾರೆ.

Published On - 9:57 pm, Wed, 22 June 22