ಬಿಜೆಪಿ ಸಂಸದ ರಮೇಶ್ ಬಿಧುರಿಗೆ ರಾಜಸ್ಥಾನದಲ್ಲಿ ಚುನಾವಣಾ ಜವಾಬ್ದಾರಿ; ಇದು ದ್ವೇಷಕ್ಕೆ ಪ್ರತಿಫಲ ಎಂದ ವಿಪಕ್ಷ

ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೊಂದಿದ್ದ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಟೋಂಕ್ ಜಿಲ್ಲೆಯಲ್ಲಿ ಗುರ್ಜರ್ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಿಧುರಿ ಅವರು ಅದೇ ಜಾತಿಯವರಾಗಿರುವುದರಿಂದ ಮತಗಳನ್ನು ಪಡೆಯಲು ಅವರ ಉಪಸ್ಥಿತಿ ಸಹಾಯ ಮಾಡಬಹುದು ಎಂದು ಬಿಜೆಪಿ ನಂಬುತ್ತದೆ. ಪೈಲಟ್ ಕೂಡ ಗುರ್ಜರ್ ಸಮುದಾಯದವರು.

ಬಿಜೆಪಿ ಸಂಸದ ರಮೇಶ್ ಬಿಧುರಿಗೆ ರಾಜಸ್ಥಾನದಲ್ಲಿ ಚುನಾವಣಾ ಜವಾಬ್ದಾರಿ; ಇದು ದ್ವೇಷಕ್ಕೆ ಪ್ರತಿಫಲ ಎಂದ ವಿಪಕ್ಷ
ರಮೇಶ್ ಬಿಧುರಿ
ರಶ್ಮಿ ಕಲ್ಲಕಟ್ಟ

Updated on: Sep 28, 2023 | 2:37 PM

ದೆಹಲಿ ಸೆಪ್ಟೆಂಬರ್ 28: ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ (Danish Ali) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಬಿಜೆಪಿಯ ಲೋಕಸಭಾ ಸದಸ್ಯ ರಮೇಶ್ ಬಿಧುರಿ (Ramesh Bidhuri) ಅವರಿಗೆ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಬಿಜೆಪಿ (BJP) ಚುನಾವಣಾ ಜವಾಬ್ದಾರಿಯನ್ನು ನೀಡಿರುವ ಬಗ್ಗೆ ವಿರೋಧ ಪಕ್ಷದ ನಾಯಕರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಡ್ಯಾನಿಶ್ ಅಲಿ ವಿರುದ್ಧ ಸಂಸತ್ತಿನಲ್ಲಿ “ಅವಾಚ್ಯ ಪದಗಳಿಂದ” ದಾಳಿ ಮಾಡಿದ್ದಕ್ಕಾಗಿ ಬಿಜೆಪಿ ಬಿಧುರಿಗೆ “ಬಹುಮಾನ” ನೀಡಿದೆ ಎಂದು ಹೇಳಿದ್ದಾರೆ.

“ಬಿಜೆಪಿ ‘ದ್ವೇಷ’ಕ್ಕೆ ಪ್ರತಿಫಲ ನೀಡುತ್ತದೆ. ಸಂಸತ್​​​ನ ವಿಶೇಷ ಅಧಿವೇಶನದಲ್ಲಿ ಅವಾಚ್ಯ ಶಬ್ದಗಳಿಂದ ಡ್ಯಾನಿಶ್ ಅಲಿ  ಮೇಲೆ ದಾಳಿ ಮಾಡಿದ್ದಕ್ಕಾಗಿ ಬಿಧುರಿಗೆ ಬಹುಮಾನವಾಗಿ ರಾಜಸ್ಥಾನದ ಟೋಂಕ್ ಜಿಲ್ಲೆಯ ಬಿಜೆಪಿ ಉಸ್ತುವಾರಿ ಸಿಕ್ಕಿದೆ. ಟೋಂಕ್​​ನಲ್ಲಿ ಮುಸ್ಲಿಂ ಜನಸಂಖ್ಯೆ ಶೇಕಡಾ 29.25 ಇದೆ. ಇದು ದ್ವೇಷದಿಂದ ಲಾಭ ಪಡೆಯುವುದನ್ನು ತೋರಿಸುತ್ತದೆ ಎಂದ ಸಿಬಲ್ ಹೇಳಿದ್ದಾರೆ.


ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಳೆದ ರಾತ್ರಿ ಎಕ್ಸ್​​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಯೇ ಸಬ್ ಹೈ ಇನ್ಕಾ ಬಕ್ವಾಸ್ ಎಂದು ಹೇಳಿದ್ದಾರೆ. ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಮುಸ್ಲಿಂ ಸಂಸದರ ವಿರುದ್ಧ ಮಾಡಿದ ಹೇಳಿಕೆಗಾಗಿ ಬಿಧುರಿ ಅವರಿಗೆ “ಬಹುಮಾನ” ನೀಡಲಾಗಿದೆ ಎಂದು ಹೇಳಿದ್ದಾರೆ. ಇಂಥಾ ವ್ಯಕ್ತಿಗೆ ಬಿಜೆಪಿ ಹೇಗೆ ಹೊಸ ಜವಾಬ್ದಾರಿ ನೀಡುತ್ತದೆ? ನರೇಂದ್ರ ಮೋದಿ ಜೀ, ಇದು ಅಲ್ಪಸಂಖ್ಯಾತರಿಗಾಗಿ ನಿಮ್ಮ ಸ್ನೇಹ ಯಾತ್ರೆಯೇ, ನಿಮ್ಮ ಪ್ರೀತಿ ಪ್ರೇಮವೇ?ಎಂದು ಮೊಯಿತ್ರಾ ಕೇಳಿದ್ದಾರೆ.


ಹಿರಿಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೊಂದಿದ್ದ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಟೋಂಕ್ ಜಿಲ್ಲೆಯಲ್ಲಿ ಗುರ್ಜರ್ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಿಧುರಿ ಅವರು ಅದೇ ಜಾತಿಯವರಾಗಿರುವುದರಿಂದ ಮತಗಳನ್ನು ಪಡೆಯಲು ಅವರ ಉಪಸ್ಥಿತಿ ಸಹಾಯ ಮಾಡಬಹುದು ಎಂದು ಬಿಜೆಪಿ ನಂಬುತ್ತದೆ. ಪೈಲಟ್ ಕೂಡ ಗುರ್ಜರ್ ಸಮುದಾಯದವರು.

ಬಿಧುರಿ ಅವರ ಜವಾಬ್ದಾರಿಯು ಬಿಜೆಪಿಯ ಜಿಲ್ಲಾ ಚುನಾವಣಾ ಉಸ್ತುವಾರಿಯಂತೆಯೇ ಇರುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಧುರಿ ಅವರು ಜೈಪುರದಲ್ಲಿ ನಡೆದ ಟೋಂಕ್ ಜಿಲ್ಲೆಯ ಸಮನ್ವಯ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸಿಪಿ ಜೋಶಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಳೆದ ವಾರ ಲೋಕಸಭೆಯಲ್ಲಿ ಅಲಿ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿಯ ಬಿಜೆಪಿ ಸಂಸದರಿಗೆ ಪಕ್ಷವು ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ: ;ಈ ಮುಲ್ಲಾ ಒಬ್ಬ ಭಯೋತ್ಪಾದಕ ಲೋಕಸಭೆಯಲ್ಲಿ ಮುಸ್ಲಿಂ ಸಂಸದನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಎಂಪಿ

ಕಳೆದ ಗುರುವಾರ ಚಂದ್ರಯಾನ-3 ಚಂದ್ರಯಾನ ಮಿಷನ್‌ನ ಯಶಸ್ಸಿನ ಚರ್ಚೆಯ ಸಂದರ್ಭದಲ್ಲಿ ಅಲಿಯನ್ನು ಗುರಿಯಾಗಿಸಿಕೊಂಡು ಬಿಧುರಿ ಮಾಡಿದ ಹೇಳಿಕೆಗಳು ಕೋಲಾಹಲವನ್ನು ಹುಟ್ಟುಹಾಕಿದವು, ವಿರೋಧ ಪಕ್ಷದ ನಾಯಕರು ಬಿಜೆಪಿ ಸಂಸದರ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಿದರು. ಸಂಸದರ ಹೇಳಿಕೆಗೆ ವಿರೋಧ ಪಕ್ಷಗಳು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದವು. ಕಾಂಗ್ರೆಸ್, ಟಿಎಂಸಿ ಮತ್ತು ಎನ್‌ಸಿಪಿಯ ಹಲವಾರು ಸದಸ್ಯರು ಬಿಧುರಿ ವಿರುದ್ಧ ಕಠಿಣ ಕ್ರಮಕ್ಕೆ ಕೋರಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us