Saji Cheriyan ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ್ದ ಕೇರಳದ ಸಚಿವ ಸಜಿ ಚೆರಿಯನ್ ರಾಜೀನಾಮೆ

ರಾಜ್ಯ ಸಿಪಿಎಂ ನಾಯಕತ್ವದ ನಿರ್ದೇಶನದ ಮೇರೆಗೆ ಸಜಿ ಚೆರಿಯನ್ ಅವರು ಬುಧವಾರ ರಾಜೀನಾಮೆ ನೀಡಿ  ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟದಿಂದ ಹೊರ ನಡೆದಿದ್ದಾರೆ.

Saji Cheriyan ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ್ದ ಕೇರಳದ ಸಚಿವ ಸಜಿ ಚೆರಿಯನ್ ರಾಜೀನಾಮೆ
ಸಜಿ ಚೆರಿಯನ್
Edited By:

Updated on: Jul 06, 2022 | 6:52 PM

ತಿರುವನಂತಪುರಂ: ಸಂವಿಧಾನದ (Constitution) ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕೇರಳದ ಸಚಿವ ಸಜಿ ಚೆರಿಯನ್ (Saji Cheriyan) ರಾಜೀನಾಮೆ ನೀಡಿದ್ದಾರೆ. ರಾಜ್ಯ ಸಿಪಿಎಂ (CPM) ನಾಯಕತ್ವದ ನಿರ್ದೇಶನದ ಮೇರೆಗೆ ಸಜಿ ಅವರು ಬುಧವಾರ ರಾಜೀನಾಮೆ ನೀಡಿ  ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟದಿಂದ ಹೊರ ನಡೆದಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು  ಪಾಲ್ಗೊಂಡಿದ್ದ ಸಿಪಿಎಂ ಸಭೆಯಲ್ಲಿ ಭಾಗವಹಿಸಿದ ನಂತರ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಮಾಧ್ಯಮದವರಲ್ಲಿ ಸಜಿ ಹೇಳಿದ್ದರು. ಆದರೆ ಸಜಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದರು. ನಾನು ನನ್ನ ಸ್ವಂತ ನಿರ್ಧಾರದಿಂದ ರಾಜೀನಾಮೆ ನೀಡಿದ್ದೇನೆ. ನಾನು ಯಾವತ್ತೂ ಸಂವಿಧಾನವನ್ನು ಅವಮಾನಿಸಿಲ್ಲ. ಸಿಪಿಐ-ಎಂ ಮತ್ತು ಎಲ್​​ಡಿಎಫ್​​ನ್ನು ದುರ್ಬಲವಾಗಿಸುವುದಕ್ಕಾಗಿ ನನ್ನ ಭಾಷಣದ ಕೆಲವು ಭಾಗಗಳನ್ನು ಮಾತ್ರ ಆಯ್ದುಕೊಂಡು ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ಚೆರಿಯನ್ ಹೇಳಿಕೆ ನೀಡಿದ್ದಾರೆ.  ಭಾಷಣದ ಬಗ್ಗೆ ಇರುವ ಸುದ್ದಿಗಳು ತಿರುಚಿದ್ದು ಎಂದು ಹೇಳಿದ್ದ ಚೆರಿಯನ್, ತಮ್ಮ ಹೇಳಿಕೆ ಬಗ್ಗೆ ಖೇದ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನೇತೃತ್ವದ ಚೆರಿಯನ್ ಹೇಳಿಕೆ ಅಸಹ್ಯಕರ ಎಂದು ಹೇಳಿದ್ದು, ಬಿಜೆಪಿ ಚೆರಿಯನ್ ಹೇಳಿಕೆಯನ್ನು ಖಂಡಿಸಿತ್ತು.

ಸೋಮವಾರ ಪತ್ತನಂತಿಟ್ಟದ ಮಲ್ಲಂಪಳ್ಳಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಚೆರಿಯನ್ ಅವರು ಸಂವಿಧಾನದ ವಿರುದ್ಧ ಹೇಳಿಕೆ ನೀಡಿದ್ದರು. ನಾವು ನಮ್ಮ ಸಂವಿಧಾನ ತುಂಬಾ ಚಂದವಾಗಿದೆ ಎಂದು ಹೇಳುತ್ತಾ ಬರುತ್ತಿದ್ದೇವೆ. ಆದರೆ ನಾವು ಬ್ರಿಟಿಷ್ ವ್ಯವಸ್ಥೆಯನ್ನೇ ನಕಲು ಮಾಡಿ ಸಂವಿಧಾನವನ್ನು ರಚಿಸಿದ್ದೇವೆ. ಇದು ಯಾವತ್ತೂ ಶೋಷಣೆ ವಿರುದ್ಧ ರಕ್ಷಣೆ ನೀಡುತ್ತಿಲ್ಲ. ಇದು ಸಾಮಾನ್ಯ ಜನರನ್ನು ಮತ್ತು ಕಾರ್ಮಿಕ ವರ್ಗವನ್ನು ಲೂಟಿ ಮಾಡಲು ಸಹಾಯ ಮಾಡುತ್ತದೆ ಎಂದಿದ್ದರು.

Published On - 6:25 pm, Wed, 6 July 22