ದೆಹಲಿಯಲ್ಲಿ ನೂಪುರ್ ಶರ್ಮಾಗಾಗಿ ಮುಂಬೈ ಪೊಲೀಸ್ ಹುಡುಕಾಡಿದರೂ ಆಕೆಯನ್ನು ಪತ್ತೆ ಹಚ್ಚಲಾಗಲಿಲ್ಲ: ಮೂಲಗಳು

ಮುಸ್ಲಿಂ ಸಂಘಟನೆಯಾದ ರಾಝಾ ಅಕಾಡೆಮಿಯ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಮೇ 28 ರಂದು ದೆಹಲಿ ನಿವಾಸಿ ನೂಪುರ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದರು

ದೆಹಲಿಯಲ್ಲಿ ನೂಪುರ್ ಶರ್ಮಾಗಾಗಿ ಮುಂಬೈ ಪೊಲೀಸ್ ಹುಡುಕಾಡಿದರೂ ಆಕೆಯನ್ನು ಪತ್ತೆ ಹಚ್ಚಲಾಗಲಿಲ್ಲ: ಮೂಲಗಳು
ನೂಪುರ್ ಶರ್ಮ
Image Credit source: Newsroom Post
Edited By: ರಶ್ಮಿ ಕಲ್ಲಕಟ್ಟ

Updated on: Jun 17, 2022 | 8:55 PM

ದೆಹಲಿ: ಸುದ್ದಿ ವಾಹಿನಿಯೊಂದರಲ್ಲಿ ಪ್ರವಾದಿ ಮುಹಮ್ಮದ್‌ (Prophet Muhammad) ಕುರಿತು ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಇದೀಗ ಬಿಜೆಪಿಯಿಂದ (BJP) ಅಮಾನತುಗೊಂಡಿರುವ ವಕ್ತಾರೆ ನೂಪುರ್‌ ಶರ್ಮಾ (Nupur Sharma) ವಿರುದ್ಧ ಹಲವು ರಾಜ್ಯಗಳಲ್ಲಿ ಪೊಲೀಸ್‌ ಕೇಸ್‌ಗಳು ದಾಖಲಾಗಿದ್ದರೂ ಆಕೆಯನ್ನು  ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಮುಸ್ಲಿಂ ಸಂಘಟನೆಯಾದ ರಾಝಾ ಅಕಾಡೆಮಿಯ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಮೇ 28 ರಂದು ದೆಹಲಿ ನಿವಾಸಿ ನೂಪುರ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಶರ್ಮಾ ಅವರನ್ನು ವಿಚಾರಣೆಗೊಳಪಡಿಸುವುದಕ್ಕಾಗಿ ಮುಂಬೈ ಪೊಲೀಸ್ ತಂಡವು ದೆಹಲಿಗೆ ಹೋಗಿದ್ದು ಅಲ್ಲಿಯೂ   ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ  ಎಂದು ಪೊಲೀಸರು ಹೇಳಿದ್ದಾರೆ. ಬಿಜೆಪಿಯ ಮಾಜಿ ವಕ್ತಾರರನ್ನು ಬಂಧಿಸಲು ಮುಂಬೈ ಪೊಲೀಸರ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.ಮುಂಬೈ ಪೊಲೀಸ್ ತಂಡ ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ತಂಗಿದ್ದು, ಶರ್ಮಾ ಅವರನ್ನು ಹುಡುಕುತ್ತಿದೆ.

ತೃಣಮೂಲ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಅಬುಲ್ ಸೊಹೈಲ್ ಅವರ ದೂರಿನ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸರು ದಾಖಲಿಸಿದ ಎಫ್‌ಐಆರ್ ಅನ್ನು ಶರ್ಮಾ ಎದುರಿಸುತ್ತಿದ್ದಾರೆ. ಜೂನ್ 20 ರಂದು ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಕೋಲ್ಕತ್ತಾ ಪೊಲೀಸರು ಆಕೆಗೆ ಸಮನ್ಸ್ ನೀಡಿದ್ದಾರೆ.
ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿರುವ ಶರ್ಮಾ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಎಫ್‌ಐಆರ್ ದಾಖಲಿಸಿದ್ದಾರೆ.

ಸುದ್ದಿ ವಾಹಿನಿಯಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಶರ್ಮಾ ಮಾಡಿದ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಇರಾನ್, ಇರಾಕ್, ಕುವೈತ್, ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಕನಿಷ್ಠ 15 ರಾಷ್ಟ್ರಗಳಿಂದ ತೀವ್ರ ಪ್ರತಿಕ್ರಿಯೆಗಳು ಮತ್ತು ಅಧಿಕೃತ ಪ್ರತಿಭಟನೆಗಳು ವ್ಯಕ್ತವಾದ ನಂತರ ಶರ್ಮಾ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ. ಹಲವಾರು ಗಲ್ಫ್ ರಾಷ್ಟ್ರಗಳು ಭಾರತೀಯ ರಾಯಭಾರಿಗಳನ್ನು ಕರೆಸಿ ಬಿಜೆಪಿ ವಕ್ತಾರರ “ಇಸ್ಲಾಂ ವಿರೋಧಿ ಹೇಳಿಕೆಗಳು” ಎಂದು ಖಂಡನೆ ವ್ಯಕ್ತಪಡಿಸಿದ್ದವು.

ಇದನ್ನೂ ಓದಿ
ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿಕೆ ವಿವಾದ ಹಿನ್ನಲೆಯಲ್ಲಿ ಹಿಂಸಾಚಾರ ಖಂಡಿಸಿ ನಾಳೆ ದೇಶದಾದ್ಯಂತ ಬಜರಂಗ ದಳ ಪ್ರತಿಭಟನೆ
ಬಿಜೆಪಿಯ ‘ಬುಲ್ಡೋಜರ್’ ತಡೆಯುವ ಶಕ್ತಿ ಯಾರಿಗಿದೆ?: ಅಖಿಲೇಶ್ ಯಾದವ್
Fact Check ನೂಪುರ್ ಶರ್ಮಾಗೆ 34 ದೇಶಗಳು ಬೆಂಬಲ ನೀಡಿವೆ ಎಂಬ ವೈರಲ್ ಟ್ವೀಟ್ ಸುಳ್ಳು

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us