AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಸರ್ಕಾರ ಪತನ ಬೆಳಗಾವಿಯಿಂದ ಶುರು: ಮುನಿರತ್ನ, ಬಿಜೆಪಿ ಶಾಸಕ

ಬೆಳಗಾವಿ ಜಿಲ್ಲಾ ಕಾಂಗ್ರೆಸ್​ ನಾಯಕರಲ್ಲಿ ಆಂತರಿಕ ಭಿನ್ನಾಬಿಪ್ರಾಯ ಎದ್ದಿದೆ. ಸ್ವತಃ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಜಿಲ್ಲೆಗೆ ಆಗಮಿಸಿದ್ದರೂ ಯಾವೊಬ್ಬ ಶಾಸಕನೂ ಸ್ವಾಗತ ಕೋರಲು ಆಗಮಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್​ಆರ್​ ನಗರ ಕ್ಷೇತ್ರದ ಬಿಜೆಪಿ ಶಾಸಕ ಎನ್.ಮುನಿರತ್ನ, ಸಿದ್ದರಾಮಯ್ಯ ಸರ್ಕಾರ ಉರುಳಿಸಲು ಬೆಳಗಾವಿಯಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಪತನ ಬೆಳಗಾವಿಯಿಂದ ಶುರು: ಮುನಿರತ್ನ, ಬಿಜೆಪಿ ಶಾಸಕ
ಆರ್​ಆರ್​ ನಗರ ಬಿಜೆಪಿ ಶಾಸಕ ಎನ್.ಮುನಿರತ್ನ ಮತ್ತು ಸಿಎಂ ಸಿದ್ದರಾಮಯ್ಯ
Follow us
ಕಿರಣ್​ ಹನಿಯಡ್ಕ
| Updated By: Rakesh Nayak Manchi

Updated on:Oct 19, 2023 | 11:52 AM

ಬೆಂಗಳೂರು, ಅ.19: ಬೆಳಗಾವಿ ಜಿಲ್ಲಾ ಕಾಂಗ್ರೆಸ್​ ನಾಯಕರಲ್ಲಿ ಆಂತರಿಕ ಭಿನ್ನಾಬಿಪ್ರಾಯ ಎದ್ದಿದೆ. ಸ್ವತಃ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K. Shivakumar) ಅವರೇ ಜಿಲ್ಲೆಗೆ ಆಗಮಿಸಿದ್ದರೂ ಯಾವೊಬ್ಬ ಶಾಸಕನೂ ಸ್ವಾಗತ ಕೋರಲು ಆಗಮಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್​ಆರ್​ ನಗರ ಕ್ಷೇತ್ರದ ಬಿಜೆಪಿ ಶಾಸಕ ಎನ್.ಮುನಿರತ್ನ (N.Munirathna), ಸಿದ್ದರಾಮಯ್ಯ ಸರ್ಕಾರ ಪತನ ಬೆಳಗಾವಿಯಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ ಎಂದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಕಾಂಗ್ರೆಸ್​ನಲ್ಲಿ ಆಂತರಿಕ ಜಗಳ ಕಾವೇರಿ ನೀರು ಉಕ್ಕಿ ಹರಿಯುವ ರೀತಿಯಲ್ಲಿ ಅಲ್ಲಿ ಉಕ್ಕಿ ಹರಿಯುತ್ತಿದೆ. ಈ ಹಿಂದೆ ಇದೇ ರೀತಿ ಅಲ್ಲಿ ಉಕ್ಕಿಹರಿದು ಮೈತ್ರಿ ಸರ್ಕಾರ ಪತನ ಆಗಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರ ಉರುಳಿಸಲು ಬೆಳಗಾವಿಯಿಂದ ಶುರುವಾಗಿದ್ದು, ಬೆಂಗಳೂರಿನಲ್ಲಿ ಮುಕ್ತಾಯ ಆಗುತ್ತದೆ ಎಂದರು.

ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಆಶ್ಚರ್ಯ ತಂದಿದೆ. ಇದು 8ನೇ ಅದ್ಭುತ, ಇದು ಒಂಥರಾ‌ ನಿಗೂಢ ಎಂದ ಮುನಿರತ್ನ ಅವರು ಕಿಚಾಯಿಸಿದರು. ಅಲ್ಲದೆ, ಸತೀಶ್ ಜಾರಕಿಹೊಳಿ ಹೋಗದಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದರು.

ಇದನ್ನೂ ಓದಿ: ನುಡಿದಂತೆ ನಡೆದ ಮುನಿರತ್ನ; ಅನುದಾನ ಬಿಡುಗಡೆ ಮಾಡುವಂತೆ ಸಾರ್ವಜನಿಕವಾಗಿ ಡಿಕೆ ಶಿವಕುಮಾರ್ ಕಾಲಿಗೆ ಬಿದ್ದು ಮನವಿ ಮಾಡಿದರು!

ಡಿಸಿಎಂ ಹೇಳಿರುವ ಪ್ರಕಾರ ಅನುದಾನದ ಪಟ್ಟಿ ಕಳುಹಿಸಿಕೊಟ್ಟಿದ್ದೇನೆ. ನಮ್ಮ ಅನುದಾನ ಬೇರೆ ಕ್ಷೇತ್ರಗಳಿಗೆ ಹೇಗೆ ಕೊಡುತ್ತಾರೆ. ನಮ್ಮ ಕ್ಷೇತ್ರದ ಅನುದಾನ ಬಿಡುವ ಪ್ರಶ್ನೆಯೇ ಇಲ್ಲ. ಆ ಅನುದಾನ ವಾಪಸ್ ಬಂದೇ ಬರುತ್ತದೆ. ಈ ಬಗ್ಗೆ ನನಗೆ ನಂಬಿಕೆ ಇದೆ, ಕಾಯುತ್ತೇನೆ ಎಂದು ಹೇಳಿದ ಮುನಿರತ್ನ, ಅನುದಾನ ವಾಪಸ್ ಬರದಿದ್ದರೆ ಮತ್ತೆ ಪ್ರತಿಭಟನೆ ಮಾಡಲ್ಲ, ಕಾಲು ಹಿಡಿಯಲ್ಲ. ಮುಂದೇನು ಅಂತಾ ತಿಳಿಸುತ್ತೇನೆ ಎಂದರು.

ದೇವಾನು ದೇವತೆಗಳು ತಥಾಸ್ತು ಅಂದರೆ ಸುಮ್ಮನಿರಲ್ಲ: ಮುನಿರತ್ನ

ಆಪರೇಷನ್​ ಕಮಲದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಆರೋಪ ಮಾಡಿದ ವಿಚಾರವಾಗಿ ಮಾತನಾಡಿದ ಮುನಿರತ್ನ, ಕಾಂಗ್ರೆಸ್ ನಾಯಕರೇ ನೆಮ್ಮದಿಯಾಗಿ ಆಡಳಿತ ಮಾಡಿ. ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಸಿಕೊಂಡು ಹೋಗಿ. ನಮಗೆ ಸರ್ಕಾರ ಬೀಳಿಸುವ ಆಲೋಚನೆ ಇಲ್ಲ. ಆದರೆ ಈಗ ಕಾಂಗ್ರೆಸ್​ನವರೇ ಆ ರೀತಿ ದಾರಿ ಮಾಡಿಕೊಂಡಿದ್ದಾರೆ. ಕೈ ಹಾಕಬೇಕು ಅಂತಾ ಹೊರಟರೆ ಮುಂದೆ ಆ ಮಾತು ಸತ್ಯ ಆಗುತ್ತದೆ. ನಮಗೆ 17+3 ಮಾಡುವುದು ಕಷ್ಟ ಏನಲ್ಲ. ದೇವಾನು ದೇವತೆಗಳು ತಥಾಸ್ತು ಅಂದರೆ ನಾವಂತೂ ಸುಮ್ಮನಿರಲ್ಲ ಎಂದರು.

ವಿಧಾನಸೌಧದಲ್ಲಿ ರಾಸಾಯನಿಕಯುಕ್ತ ಕುಂಬಳಕಾಯಿ, ಅರಿಶಿನ ಕುಂಕುಮ ಬಳಸದಂತೆ ಸರ್ಕಾರಿ ಆದೇಶ ವಿಚಾರವಾಗಿ ಮಾತನಾಡಿದ ಅವರು, ಕುಂಬಳಕಾಯಿ ಒಡೆಯುವುದು ತಪ್ಪು, ಕುರಿ, ಕೋಳಿ ಕಡಿಯಿರಿ ಅಂತ ಆದೇಶ ಇರಬೇಕು. ಅವರು ಹೊರಡಿಸಿರುವ ಆದೇಶ ಮಿಸ್ಟೇಕ್ ಆಗಿದೆ ಎಂದು ಟಾಂಗ್ ಕೊಟ್ಟರು.

ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧಕ್ಕೆ ದೀಪ ಹಚ್ಚಿ, ಕುಂಬಳಕಾಯಿ ಒಡೆದೇ ಪ್ರವೇಶ ಮಾಡಿದ್ದರು. ಆ ಜಾಗದಲ್ಲೇ ಇವತ್ತು ಅರಿಶಿನ ಕುಂಕುಮ ಬೇಡ, ಕುಂಬಳಕಾಯಿ ಬೇಡ ಅಂತಾರಲ್ಲಾ ಇವರು? ಕಾಂಗ್ರೆಸ್ ಬಂದಿದೆ, ಕುಂಬಳಕಾಯಿ ಬೇಡ ರಕ್ತದ ಬಲಿ‌ ಕೊಡಿ ಅನ್ನೋ ಉದ್ದೇಶನಾ? ಕೆಂಗಲ್ ಹನುಮಂತಯ್ಯ ತಪ್ಪು ಮಾಡಿದ್ದಾರೆ, ನಾವು ಸರಿ ಮಾಡುತ್ತೇವೆ ಅನ್ನೋದು ಇವರ ಉದ್ದೇಶ ಇರಬೇಕು ಎಂದರು.

ಸಿಎಂ ಇಬ್ರಾಹಿಂ ಔಟ್ ಡೇಟೆಡ್ ಹೀರೋ

ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಿರೋಧ ವಿಚಾರವಾಗಿ ಮಾತನಾಡಿದ ಮುನಿರತ್ನ, ಇಬ್ರಾಹಿಂ ಮೂವಿ ಯಾರೂ ನೋಡಲ್ಲ, ಔಟ್ ಡೇಟೆಡ್ ಹೀರೋ. ದೇವೇಗೌಡರು ನನ್ನ ದೇವರು, ಹಾರ್ಟ್, ಕಿಡ್ನಿ, ಕುಮಾರಸ್ವಾಮಿ ನನ್ನ ಉಸಿರು ಅಂತ ಹೇಳಿದ ವ್ಯಕ್ತಿ ಇಬ್ರಾಹಿಂ. ಈಗ ದೇವೇಗೌಡರ ಪಕ್ಷಕ್ಕೆ ವಾರಸುದಾರ ಆಗಲು ಹೋಗುತ್ತಿದ್ದಾರೆ. ದೇವೇಗೌಡರ ಶ್ರಮ, ಪಕ್ಷ ಕಟ್ಟಲು ಹರಿಸಿದ ಬೆವರ ಹನಿ ಎಷ್ಟಿದೆ ಎಲ್ಲರಿಗೂ ಗೊತ್ತು. ಆವತ್ತು ರಾಮಕೃಷ್ಣ ಹೆಗಡೆ ಅವರನ್ನು ಸಸ್ಪೆಂಡ್ ಮಾಡಲು ಇದೇ ಇಬ್ರಾಹಿಂ ತಾನೇ ಕಾರಣ? ದೇವೇಗೌಡರರಿಗೆ ಆವತ್ತು ದಾರಿ ತಪ್ಪಿಸಿದ್ದು ಇದೇ ಇಬ್ರಾಹಿಂ. ಹೆಗಡೆ ಉಚ್ಛಾಟನೆ ಮಾಡಿಸಿದ್ದು ಇದೇ ಇಬ್ರಾಹಿಂ. ಆದರೆ ಅದರ ಎಲ್ಲಾ ತಪ್ಪು ದೇವೇಗೌಡರ ಮೇಲೆ ಬಂತು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:44 am, Thu, 19 October 23