ಯಡಿಯೂರಪ್ಪ ಜತೆ ಏನೇ ವೈಷಮ್ಯ ಇರಬಹುದು, ನನ್ನನ್ನು ಬೆಳೆಸಿದ್ರು: ವಿದಾಯದ ಮಾತಲ್ಲಿ ರಾಜಾಹುಲಿ ಹೊಗಳಿದ ಹಿಂದೂಹುಲಿ

ನಾವೆಲ್ಲರೂ ಲಾಸ್ಟ್ ಬೆಂಚ್​​ನಲ್ಲಿ ಕೂರುತ್ತಿದ್ದೆವು. ಮಾಜಿ ಸಿಎಂ B.S​.ಯಡಿಯೂರಪ್ಪ ನಮ್ಮನ್ನೆಲ್ಲ ಮುನ್ನಡೆಸುತ್ತಿದ್ದರು. ಸುಮ್ಮನೇ ಕೂತ್ಕೊಳ್ಳಿ ಎಂದು ನಮ್ಮನ್ನು ಗದರುತ್ತಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬೆಂಗಳೂರು: ನಾನು, ಸ್ಪೀಕರ್, ಆರಗ ಜ್ಞಾನೇಂದ್ರ ಎಲ್ಲರೂ 94ರ ಬ್ಯಾಚ್​​​ನವರು. ಹೆಚ್​​ಡಿಡಿ, ಖರ್ಗೆ, ವಾಟಾಳ್ ನಾಗರಾಜ್ ಎಲ್ಲರೂ ದೊಡ್ಡವರಿದ್ದರು. ನಾವೆಲ್ಲರೂ ಲಾಸ್ಟ್ ಬೆಂಚ್​​ನಲ್ಲಿ ಕೂರುತ್ತಿದ್ದೆವು. ಮಾಜಿ ಸಿಎಂ B.S​.ಯಡಿಯೂರಪ್ಪ (BS Yediyurappa) ನಮ್ಮನ್ನೆಲ್ಲ ಮುನ್ನಡೆಸುತ್ತಿದ್ದರು. ಸುಮ್ಮನೇ ಕೂತ್ಕೊಳ್ಳಿ ಎಂದು ನಮ್ಮನ್ನು ಗದರುತ್ತಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಧಾನಸಭೆಯಲ್ಲಿ ಮಾತನಾಡಿ, 2 ಬಾರಿ ಸಂಸದ, ಒಂದು ಬಾರಿ MLC, 2 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯ ಆದಾಗ ಧ್ವನಿ ಎತ್ತಿದ್ದೇನೆ. ಇಲ್ಲಿಯೂ ಅನ್ಯಾಯವಾದಾಗ ಮಾತನಾಡಲು ಅವಕಾಶ ನೀಡಿದ್ದೀರಿ. BSY ಜತೆ ಏನೇ ವೈಷಮ್ಯ ಇರಬಹುದು, ಅವರು ನಮ್ಮ ನಾಯಕರು. ರಾಜ್ಯದಲ್ಲಿ ಪಕ್ಷ ಕಟ್ಟಿದ್ದು ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ್ ಎಂದು ಹೇಳಿದರು.

ಬಿ.ಎಸ್​.ಯಡಿಯೂರಪ್ಪ ಅವರು ನನ್ನನ್ನು ಬೆಳೆಸಿದ್ರು

ಸದ್ಯ ಪಕ್ಷ ಕಟ್ಟಿ ಕೊನೆವರೆಗೂ ಉಳಿದವರು ಯಡಿಯೂರಪ್ಪ ಅವರು. ಈಗ ಸ್ಪರ್ಧಿಸಲ್ಲ ಪುತ್ರನನ್ನು ರೆಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಕೆಲವರು ಸಾಯೋವರೆಗೂ ಶಾಸಕನಾಗೇ ಉಳಿಯಬೇಕು ಅಂತಿದ್ದಾರೆ. ಬಿಎಸ್​ವೈ ನನ್ನನ್ನೂ ಮಂತ್ರಿ ಮಾಡಲಿಲ್ಲ, ನಿಮ್ಮನ್ನೂ ಮಂತ್ರಿ ಮಾಡ್ಲಿಲ್ಲ. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನನ್ನನ್ನ ಶಿಕ್ಷಣ ಮಂತ್ರಿ ಮಾಡಿದ್ರು, ನಿಮ್ಮನ್ನು ಕೇಂದ್ರ ಮಂತ್ರಿ ಮಾಡಿದ್ದರು. ನಾನು ಮುಖ್ಯಮಂತ್ರಿ ಆಗ್ತೀನಿ ಎಂದು ಮಂತ್ರಿ ಮಾಡಲಿಲ್ಲ ಎಂದು ಯತ್ನಾಳ್ ಹೇಳಿದರು. ಅದೇನೇ ಇರಲಿ ಬಿ.ಎಸ್​.ಯಡಿಯೂರಪ್ಪ ಅವರು ನನ್ನನ್ನು ಬೆಳೆಸಿದ್ರು ಎಂದರು.

ಇದನ್ನೂ ಓದಿ: BS Yediyurappa: ವಿಧಾನಸಭೆಯಲ್ಲಿ ಬಿ.ಎಸ್ ಯಡಿಯೂರಪ್ಪ ವಿದಾಯದ ಭಾಷಣ: ಶಿಕಾರಿಪುರ ಜನತೆಗೆ ಚಿರಋಣಿ ಎಂದ ಮಾಜಿ ಸಿಎಂ

ನಾನು ಕಾಂಗ್ರೆಸ್​​ ಬಿಟ್ಟು ಬರಲು ಸ್ವಲ್ಪ ಭಯ ಆಗಿತ್ತು: ಸುಧಾಕರ್

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಶೇಕಡಾ 2ರಷ್ಟು ಮತ ಮಾತ್ರ ಬಿಜೆಪಿಗೆ ಇತ್ತು. ಹಾಗಾಗಿ ನಾನು ಕಾಂಗ್ರೆಸ್​​ ಬಿಟ್ಟು ಬರಲು ಸ್ವಲ್ಪ ಭಯ ಆಗಿತ್ತು. ಆದ್ರೆ ನಿರ್ಧಾರತೆಗೆದುಕೊಂಡು ಹೊರ ಬಂದೆವು. ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬಂತು. ಹತ್ತು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ. ತಾವು ಅತ್ಯುತ್ತಮ ಸ್ಪೀಕರ್ ಆಗಿ ಕೆಲಸ ಮಾಡಿದ್ದೀರಿ.​ ನಿಮ್ಮ ಹೆಸರು ಹಲವು ವರ್ಷಗಳ ಕಾಲ ದಾಖಲೆಗಳಲ್ಲಿ ನಿಲ್ಲುತ್ತದೆ. ಸಂವಿಧಾನ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮಾತನಾಡಿ, ಇದು ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವ ಮಾತೇ ಇಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸದನಕ್ಕೆ ಆಯ್ಕೆಯಾಗಿ ಬರಬೇಕು. ಶಿಕಾರಿಪುರ ತಾಲೂಕಿನ ಜನರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ.

ಇದನ್ನೂ ಓದಿ: BS Yediyurappa: ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಬಿಎಸ್​ ಯಡಿಯೂರಪ್ಪ ಭಾಷಣ ಸ್ಫೂರ್ತಿದಾಯಕ: ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್

ಫೆಬ್ರವರಿ 27ಕ್ಕೆ ನನಗೆ 80 ವರ್ಷ ತುಂಬುತ್ತದೆ. ಅಂದೇ ಏರ್​ಪೋರ್ಟ್​ ಉದ್ಘಾಟನೆಗೆ ಬರುತ್ತೇನೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದು ನನಗೆ ಅತ್ಯಂತ ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದು ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us