ರಿಯಲ್​ ಲೈಫ್​ನಲ್ಲೂ ಇದ್ದಾರೆ ‘ನಾನು ಮತ್ತು ಗುಂಡ’; ಆಟೋ ಚಾಲಕನ ನೆಚ್ಚಿನ ಬಂಟ ರೋನಿ

ಆಟೋ ಚಾಲಕನೊಬ್ಬರು ನಾಯಿಮರಿಯನ್ನು ಜೀವಕ್ಕಿಂತ ಹೆಚ್ಚಾಗಿ ಹಚ್ಚಿಕೊಳ್ಳುವ, ಅದರ ಪರಿಣಾಮವಾಗಿ ಅವನ ಬದುಕು ತೆಗೆದುಕೊಳ್ಳುವ ತಿರುವುಗಳ ಬಗ್ಗೆ ಬಂದಿದ್ದ ಚಲನಚಿತ್ರ ‘ನಾನು ಮತ್ತು ಗುಂಡ’ ನಿಮಗೆ ನೆನಪಿರಬಹುದು. ಈ ಚಿತ್ರದ ದೃಶ್ಯಗಳನ್ನೇ ನೆನಪಿಸುವಂಥ ಬದುಕೊಂಡು ಪುಣೆಯಲ್ಲಿ ಕಂಡುಬಂದಿದೆ.

ರಿಯಲ್​ ಲೈಫ್​ನಲ್ಲೂ ಇದ್ದಾರೆ ‘ನಾನು ಮತ್ತು ಗುಂಡ’; ಆಟೋ ಚಾಲಕನ ನೆಚ್ಚಿನ ಬಂಟ ರೋನಿ
ಹರ್ವಿಂದರ್​ ಸಿಂಗ್​ ಮತ್ತು ಅವರು ಸಾಕಿದ ಶ್ವಾನ

Updated on: Dec 27, 2020 | 7:36 PM

ಆಟೋ ಚಾಲಕನೊಬ್ಬರು ನಾಯಿಮರಿಯನ್ನು ಜೀವಕ್ಕಿಂತ ಹೆಚ್ಚಾಗಿ ಹಚ್ಚಿಕೊಳ್ಳುವ, ಅದರ ಪರಿಣಾಮವಾಗಿ ಅವನ ಬದುಕು ತೆಗೆದುಕೊಳ್ಳುವ ತಿರುವುಗಳ ಬಗ್ಗೆ ಬಂದಿದ್ದ ಚಲನಚಿತ್ರ ‘ನಾನು ಮತ್ತು ಗುಂಡ’ ನಿಮಗೆ ನೆನಪಿರಬಹುದು. ಈ ಚಿತ್ರದ ದೃಶ್ಯಗಳನ್ನೇ ನೆನಪಿಸುವಂಥ ಬದುಕೊಂದು ಪುಣೆಯಲ್ಲಿ ಕಂಡುಬಂದಿದೆ.

ಅನೇಕರಿಗೆ ಬೆಕ್ಕು ಅಥವಾ ನಾಯಿಯನ್ನು ಸಾಕಬೇಕು ಎನ್ನುವ ಆಸೆ ಇರುತ್ತದೆ. ಆದರೆ, ನಿತ್ಯ ಕಚೇರಿಗೆ ತೆರಳಬೇಕು. ಮನೆಯಲ್ಲಿ ಅವುಗಳನ್ನು ಆರೈಕೆ ಮಾಡಲು ಯಾರೂ ಇರುವುದಿಲ್ಲ ಎನ್ನುವ ಕಾರಣಕ್ಕೆ ಪ್ರಾಣಿ ಸಾಕುವ ನಿರ್ಧಾರದಿಂದ ಅನೇಕರು ಹಿಂದೆ ಸರಿದಿರುತ್ತಾರೆ. ಆದರೆ, ಇಲ್ಲೋರ್ವ ಆಟೋ ಚಾಲಕ ಈ ವಿಚಾರದಲ್ಲಿ ಇಂಥವರ ನಡುವೆ ಭಿನ್ನವಾಗಿ ಕಾಣಿಸುತ್ತಾರೆ.

ಹರ್ವೀಂದರ್ ಪುಣೆಯಲ್ಲಿ ಆಟೋ ಓಡಿಸುತ್ತಾರೆ. ಅವರ​ ಮಗ ಒಮ್ಮೆ ಶಾಲೆಯಿಂದ ಬರುವಾಗ ಬೀದಿಬದಿಯಲ್ಲಿದ್ದ ನಾಯಿಮರಿಯನ್ನು ಮನೆಗೆ ತಂದಿದ್ದ. ಮನೆಯಲ್ಲಿ ಅದರ ಬಗ್ಗೆ ಕಾಳಜಿ ವಹಿಸೋಕೆ ಯಾರೂ ಇರಲಿಲ್ಲ. ಈ ಕಾರಣಕ್ಕೆ ನಾಯಿಯನ್ನು ಆಟೋದಲ್ಲಿ ಇಟ್ಟುಕೊಂಡೇ ಹರ್ವಿಂದರ್​ ಸಿಂಗ್​ ಓಡಾಡುತ್ತಿದ್ದಾರೆ.

ಇದೇ ಆಟೋ ಹತ್ತಿದ ಮಂಜಿರಿ ಪ್ರಭು ಎಂಬ ಪ್ರಯಾಣಿಕರು ಈ ಬಗ್ಗೆ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡುವ ಎಲ್ಲರ ಗಮನ ಸೆಳೆದಿದ್ದಾರೆ. ಭಾವುಕ ಸಾಲುಗಳಿಂದ ಕಣ್ಣಾಲಿಗಳನ್ನು ತೇವವಾಗಿಸುವಂತಿರುವ ಅವರ ಪೋಸ್ಟ್​ನ ಕನ್ನಡರೂಪ ಇಲ್ಲಿದೆ..

‘ನಾನು ನನ್ನ ಜೀವನದಲ್ಲಿ ನಿಜವಾದ ಸಂತಾನನ್ನು (ಸಂತಾ ಕ್ಲಾಸ್) ಭೇಟಿ ಮಾಡಿದೆ. ನನ್ನ ಸಹೋದರಿ ಲೀನಾ ಹಾಗೂ ನಾನು ಆಟೋ ಒಂದನ್ನು ಬುಕ್​ ಮಾಡಿದ್ದೆವು. ಆಟೋ ಏರಿ ನಾವು ತಲುಪಬೇಕಾದ ಜಾಗ ತಲುಪಿದ್ದೆವು. ಇಳಿದ ಮೇಲೆ ಆಟೋ ಚಾಲಕನ ಕಾಲಿನ ಸಮೀಪ ಸಣ್ಣ ನಾಯಿಯೊಂದನ್ನು ಗಮನಿಸಿದೆವು.

‘ನನಗೆ ಅಚ್ಚರಿ ಆಗಿತ್ತು. ನನ್ನ ಪ್ರಯಾಣದುದ್ದಕೂ ಈ ಶ್ವಾನ ಒಮ್ಮೆಯೂ ಕೂಗಿರಲಿಲ್ಲ. ನಿಜ ಹೇಳಬೇಕೆಂದರೆ ನಮ್ಮ ಆಟೋದಲ್ಲಿ ಹೀಗೊಂದು ಪ್ರಾಣಿ ಇರಬಹುದು ಎನ್ನುವ ಕಲ್ಪನೆ ಕೂಡ ನಮಗೆ ಮೂಡಿರಲಿಲ್ಲ. ಅಷ್ಟು ಶಾಂತವಾಗಿ ಕೂತಿತ್ತು ಆ ಶ್ವಾನ.

‘ರೋನಿ ಅನ್ನೋದು ಆ ಶ್ವಾನದ ಹೆಸರು. ಮುದ್ದಾದ ಮುಖ. ಸ್ವಲ್ಪವೂ ಬೇಸರ ಇಲ್ಲದೆ ಆಟೋ ಚಾಲಕ ಹರ್ವಿಂದರ್​ ಸಿಂಗ್​ ಜೊತೆ ಸುತ್ತಾಟ ನಡೆಸುತ್ತದೆ. ಮನೆಯಲ್ಲಿ ರೋನಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅದನ್ನೂ ಹರ್ವಿಂದರ್​ ನಿತ್ಯ ರಿಕ್ಷಾದಲ್ಲಿ ಅವರು ಕರೆತರುತ್ತಾರೆ. ರೋನಿಗಾಗಿ ಆಟೋ ರಿಕ್ಷಾದಲ್ಲೇ ಆಹಾರವನ್ನು ಕೂಡ ಸ್ಟಾಕ್​ ಮಾಡಿಕೊಂಡಿರುತ್ತಾರೆ.

‘ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಡುವ ಬಗ್ಗೆಯೇ ಹಲವರು ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಜಗತ್ತಿನಲ್ಲಿ ಹರ್ವಿಂದರ್ ನನಗೆ ಭಿನ್ನವಾಗಿ ಕಂಡರು. ಜಗತ್ತಿನಲ್ಲಿ ಸಂತಾ ಬೇರೆ ಬೇರೆ ರೂಪದಲ್ಲಿ ಇರುತ್ತಾರೆ’ ಎಂದು ಫೇಸ್​ಬುಕ್​ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಮಂಜಿರಿ ಪ್ರಭು ಅವರ ಪೋಸ್ಟ್​ಗೆ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಮಂಜಿರಿ ಪ್ರಭು ಪೋಸ್ಟ್​ಗೆ ಬಂದಿರುವ ಕಾಮೆಂಟ್​ಗಳು

 

ಹಾಯಾಗಿದ್ದ ಸ್ನೇಹಿತರಿಗೆ ಮುಳುವಾಯ್ತು ಅಪಘಾತ.. ಅಗಲಿದ ಗೆಳೆಯನ ನೆನೆದು ಶ್ವಾನದ ಕಣ್ಣೀರು

Published On - 4:41 pm, Sun, 27 December 20

Follow Us