
ದೇವರ ದೇವ ಈ ಮಹಾದೇವ. ಭಕ್ತರ ಕಷ್ಟಗಳನ್ನ ಸ್ವೀಕರಿಸಿ ಭಯಮುಕ್ತಗೊಳಿಸುವ ಭೋಲೇನಾಥ. ಸಮುದ್ರಮಥನದ ವೇಳೆ ವಿಷ ಕುಡಿದು ದೇವತೆಗಳನ್ನು ಬದುಕಿಸಿದ ನೀಲಕಂಠ. ಈಗ ಅದೊಂದು ದೇವಾಲಯದಲ್ಲಿ ತನ್ನ ಪವಾಡ ತೋರುತ್ತಿದ್ದಾನೆ.
ಪರಮೇಶ್ವರ ಇಲ್ಲಿ ಕಾಲಭೈರವನ ರೂಪದಲ್ಲಿ ದರ್ಶನ ನೀಡ್ತಾನೆ. ಶಿವಭಕ್ತರು ಮಾಡುವ ಪೂಜೆಗಳಲ್ಲಿ ಅಷ್ಟ ಭೈರವರ ಪೂಜೆ ಮಹತ್ತರವಾದುದು. ಅಷ್ಟ ಭೈರವರ ಪೈಕಿ ಕಾಲ ಭೈರವನ ಪೂಜೆ ಪ್ರಮುಖವಾದದ್ದು. ಅಷ್ಟಕ್ಕೂ, ಶಿವ ಕಾಲಭೈರವನ ರೂಪ ತಳೆದದ್ದೇಕೆ ಗೊತ್ತಾ? ಭಕ್ತರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಈ ಕಾಲ ಭೈರವನ ಸೃಷ್ಟಿಯ ಹಿಂದೆ ರೋಚಕ ಕಥೆಯೇ ಇದೆ.
ಸ್ಕಂದ ಪುರಾಣದ ಆವಂತಿ ಖಂಡದಲ್ಲಿ ಕಾಲಭೈರವನ ಈ ಮಂದಿರದ ಬಗ್ಗೆ ಉಲ್ಲೇಖವಿದೆ. ಪುರಾಣಗಳ, ಪ್ರಕಾರ, ಗರ್ವಿಷ್ಟನಾದ ಬ್ರಹ್ಮ ಒಮ್ಮೆ ಶಿವನಿಗೆ ಶಾಪ ನೀಡ್ತಾನೆ. ಆಗ ಕುಪಿತಗೊಂಡ ಶಿವ ತನ್ನ ಮೂರನೇ ಕಣ್ಣು ಬಿಟ್ಟಾಗ ಆ ಕಣ್ಣಿನಿಂದ ಬಂದ ಬೆಂಕಿಯಿಂದ ಭೈರವ ಜನಿಸಿದ. ಆ ಭೈರವ ಬ್ರಹ್ಮನ ಐದನೇ ತಲೆಯನ್ನು ಕತ್ತರಿಸಿದ.
ಬ್ರಹ್ಮನನ್ನು ಹತ್ಯೆಗೈದ ದೋಷ ವಿಮೋಚನೆಗೆ ನೀನು ಭೂಲೋಕ ಸಂಚಾರ ಮಾಡಿಕೊಂಡು ಆ ಕ್ಷೇತ್ರದಲ್ಲಿ ನೆಲೆ ನಿಲ್ಲು ಎಂದು ವಿಷ್ಣು ಹೇಳಿದ. ಆ ಪ್ರಕಾರ, ಭೈರವ ತನ್ನ ವಾಹನವಾದ ಕಪ್ಪು ನಾಯಿಯ ಮೇಲೆ ಬ್ರಹ್ಮನ ತಲೆ ಹಿಡಿದುಕೊಂಡು ಸಂಚರಿಸ್ತಾ ಇಲ್ಲಿ ಬಂದು ನೆಲೆ ನಿಂತ. ಹೀಗೆ ಅಗ್ನಿಯಿಂದ ಉತ್ಪತ್ತಿಯಾದ ಕಾಲಭೈರವ ಅತ್ಯಂತ ಕೋಪಿಷ್ಟ.
ಉಗ್ರಸ್ವರೂಪಿ ಶಿವನ ಹಲವು ರೂಪಗಳಲ್ಲಿ ಕಾಲಭೈರವನ ರೂಪವೂ ಒಂದು. ಹಾಗೆ ಈ ಕಾಲಭೈರವ ಪರಮ ದಯಾಳು. ಕ್ಷಣದಲ್ಲಿ ಕೋಪ ಬಿಟ್ಟು ಮಹಾಪ್ರಸನ್ನನಾಗಿ ಕೃಪೆ ತೋರುವ ಕರುಣಾನಿಧಿ. ಪವಾಡ ಪುರುಷ. ನಿತ್ಯ ಇಲ್ಲಿ ಒಂದು ಪವಾಡ ನಡೆಯುತ್ತೆ. ಆ ಪವಾಡ ಕಂಡು ಭಕ್ತರು ನಿಬ್ಬರಗಾಗ್ತಾರೆ.
ಇಲ್ಲಿ ಕಾಲಭೈರವನಿಗೆ ಬೇಕು ಮದ್ಯ ನೈವೇದ್ಯ:
ಪ್ರತಿನಿತ್ಯ ಭಕ್ತರ ಎದುರಲ್ಲೇ ಕಾಲಭೈರವ ತನ್ನ ಪವಾಡ ತೋರುತ್ತಾನೆ. ಆ ಪವಾಡ ಕಂಡು ಭಕ್ತರು ಮೂಕವಿಸ್ಮಿತರಾಗ್ತಾರೆ. ಅಷ್ಟಕ್ಕೂ ಇಲ್ಲಿ ಕಾಲಭೈರವ ತೋರುವ ಆ ಪವಾಡವಾದ್ರೂ ಏನು ಅಂದ್ರೆ ಈ ಕ್ಷೇತ್ರ ಅಂತಿಂಥಾ ಕ್ಷೇತ್ರವಲ್ಲ. ಇಲ್ಲಿನ ಕಣ ಕಣದಲ್ಲೂ ಶಿವನಿದ್ದಾನೆ. ಇಲ್ಲಿನ ಪ್ರತಿಯೊಂದು ಜೀವರಾಶಿ ಕೂಡ ಓಂ ನಮಃ ಶಿವಾಯ ಎಂಬ ಬೀಜಾಕ್ಷರಿ ಮಂತ್ರವನ್ನು ಜಪಿಸುತ್ತೆ. ಇಂತಹ ಪುಣ್ಯಕ್ಷೇತ್ರದಲ್ಲಿ ನೆಲೆ ನಿಂತಿದ್ದಾನೆ ಮದ್ಯ ಸೇವಿಸೋ ಕಾಲಭೈರವ.
ಈ ದೇವಾಲಯದ ಆವರಣದಲ್ಲಿ ಮದ್ಯವನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತೆ. ಇಲ್ಲಿಗೆ ಬರುವ ಭಕ್ತರು ಸ್ವಾಮಿಗೆ ನೈವೇದ್ಯ ಮಾಡಲು ಮದ್ಯದ ಬಾಟಲಿಗಳನ್ನೇ ತರ್ತಾರೆ. ಭಕ್ತರು ತರುವ ಮದ್ಯವನ್ನ ತಟ್ಟೆಯಲ್ಲಿ ಹಾಕಿ ಸ್ವಾಮಿಯ ಬಾಯಿಯ ಮುಂದೆ ಹಿಡಿದ್ರೆ ಸಾಕು, ಕ್ಷಣಾರ್ಧದಲ್ಲಿ ಕುಡಿದುಬಿಡ್ತಾನೆ. ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ತಟ್ಟೆಯಲ್ಲಿದ್ದ ಮದ್ಯ ಖಾಲಿಯಾಗುತ್ತೆ.
ಈ ದೇವರಿಗೆ ಬೇಕಾದ್ದು ಹೂವಲ್ಲ.. ಹಣ್ಣಲ್ಲ, ಕಾಯಲ್ಲ. ಇವನಿಗೆ ನಿತ್ಯ ಬೇಕು ಮದ್ಯದ ನೈವೇದ್ಯ. ಹೌದು, ಈ ಭೋಲೇನಾಥನಿಗೆ ನಿತ್ಯ ಮದ್ಯವನ್ನು ನೈವೇದ್ಯ ಮಾಡಬೇಕು. ಅದು ಒಂದು ಸಲವಲ್ಲ. ಇವನಲ್ಲಿಗೆ ಬರೋ ಭಕ್ತರೆಲ್ಲಾ ಇವನಿಗೆ ತರೋದು ಮದ್ಯವನ್ನೇ ಹೀಗೆ ಭಕ್ತರು ತಂದ ಮದ್ಯವನ್ನೆಲ್ಲಾ ಭೋಲೇನಾಥ ಕುಡೀತಾನೆ.
ಲೋಕರಕ್ಷಣೆಗಾಗಿ ವಿಷ ಕುಡಿದು ನೀಲಕಂಠನಾದ ಶಿವ ಇಲ್ಲಿ ಕಾಲಭೈರವನಾಗಿ ಭಕ್ತರ ಕಷ್ಟಗಳನ್ನ ಸ್ವೀಕರಿಸೋದು ಮದ್ಯ ಸೇವಿಸೋದ್ರ ಸಂಕೇತ ಎನ್ನಲಾಗುತ್ತೆ. ಮದ್ಯ ನೀಡಿದ್ರೆ ಪ್ರಸನ್ನನಾಗ್ತಾನೆ ಈ ಕಾಲಭೈರವ. ಪುಟ್ಟ ಗರ್ಭಗುಡಿಯೊಳಗೆ ಕೇಸರಿಮಯನಾಗಿ ಆಸೀನನಾಗಿದ್ದಾನೆ. ವಿಶಾಲವಾದ ಹಣೆ. ಗೋಲಿಯಾಕಾರದ ಕಣ್ಣುಗಳು. ವಿಶಾಲವಾಗಿ ತೀಡಿರುವ ಹುಬ್ಬುಗಳು.. ದೊಡ್ಡದಾದ ಬಾಯಿ ಇವನೇ ಕಾಲಭೈರವ.
ಕೋಪಿಷ್ಟ ಭೈರವನ ಕೋಪ ತಗ್ಗಿಸಲು..
ಸಾಕ್ಷಾತ್ ಶಿವನೇ ಇಲ್ಲಿ ಭೈರವ ಸ್ವರೂಪನಾಗಿದ್ದಾನೆ. ಈ ಕಾಲಭೈರವ 8 ಭೈರವರಿಗೆ ಅಧಿಪತಿ. ನಿತ್ಯ ಮದ್ಯ ಸೇವಿಸುವ ಕಾಲಭೈರವನ ಚಮತ್ಕಾರ ನೋಡಲು ದೂರದ ಊರುಗಳಿಂದ ಅಸಂಖ್ಯಾತ ಭಕ್ತರು ಬರ್ತಾರೆ. ಸ್ವಾಮಿಯ ಪವಾಡ ಕಂಡು ನಿಬ್ಬೆರಗಾಗ್ತಾರೆ.
ಕೋಪಿಷ್ಟ ಭೈರವನ ಕೋಪ ತಗ್ಗಿಸುವ ಸಂಕೇತವಾಗಿ ಇಲ್ಲಿ ಸ್ವಾಮಿಗೆ ಭಕ್ತರು ಮದ್ಯ ಕುಡಿಸ್ತಾರಂತೆ, ತಟ್ಟೆಗೆ ಹಾಕಿದ ಮದ್ಯವನ್ನ ಭೈರವ ಹೇಗೆ ಕುಡೀತಾನೆ ಎಂಬ ಬಗ್ಗೆ ಹಲವು ಜಿಜ್ಞಾಸೆಗಳಿವೆ. ಆದ್ರೆ ಅದರ ಗುಟ್ಟು ಇಂದಿಗೂ ತಿಳಿದಿಲ್ಲ. ಈ ರಹಸ್ಯ ಬಯಲಿಗೆಳೆಯಲು ಬ್ರಿಟೀಷರು ತಮ್ಮ ಆಡಳಿತಾವಧಿಯಲ್ಲಿ ಭಾರೀ ಪ್ರಮಾಣದ ಮದ್ಯ ಕುಡಿಸಿದ್ರಂತೆ. ಎಷ್ಟು ಕುಡಿಸಿದ್ರೂ ಈ ಸ್ವಾಮಿ ಮದ್ಯ ಕುಡಿಯುತ್ತಲೇ ಇದ್ನಂತೆ.
ಮಹಾವಿಷ್ಣು ಶಿವನಿಗೆ ನೆಲೆ ನಿಲ್ಲುವಂತೆ ಹೇಳಿದ ಆ ಕ್ಷೇತ್ರ ಯಾವುದು?
ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ನಂದಿ ಕಾವಲಿರೋದನ್ನು ನೋಡಿರ್ತೀವಿ. ಆದ್ರೆ ಈ ದೇವಾಲಯದಲ್ಲಿ ಶಿವನೆದುರು ನಾಯಿ ಇದೆ. ನಾಯಿಯ ಕಿವಿಯ ಮೂಲಕ ಹೇಳುವ ಬೇಡಿಕೆ ಶೀಘ್ರವಾಗಿ ಶಿವನಿಗೆ ತಲುಪಿ ಈಡೇರುತ್ತಂತೆ. ಶಿವ ತಂತ್ರಸಾಧಕನೂ ಹೌದು. ಹಾಗಾಗಿ ಭೈರವನ ಈ ಕ್ಷೇತ್ರ ಅಘೋರಿಗಳ ಸಾಧನಾ ಭೂಮಿ. ಅಘೋರಿಗಳು ಇಲ್ಲಿ ಯಾಗ, ಹೋಮ, ಸಾಧನೆ ಮಾಡ್ತಾರೆ.
ಈ ದೇವಾಲಯದ ವಿಶಾಲವಾದ ಪ್ರವೇಶದ್ವಾರದ ಬಳಿ ಸಭಾಗೃಹದ ಪಕ್ಕ ಬೃಹತ್ ದೀಪಸ್ತಂಭವಿದೆ. ಈ ಸ್ತಂಭಕ್ಕೆ ಎಣ್ಣೆ ಬತ್ತಿ ಹಾಕಿ ದೀಪ ಹಚ್ಚಲಾಗುತ್ತೆ. ಆ ದೃಶ್ಯವ ವೈಭವವನ್ನು ನೋಡೋದೇ ಚಂದ. ಇಲ್ಲಿ ದೀಪ ಹಚ್ಚಿದ್ರೆ ಮನದ ಇಷ್ಟಾರ್ಥಗಳು ನೆರವೇರುತ್ತವೆ ಅನ್ನೋ ನಂಬಿಕೆ ಕಾಲಭೈರವನಲ್ಲಿಗೆ ಬರುವ ಭಕ್ತರದ್ದು.
ಅಷ್ಟಕ್ಕೂ ಇಷ್ಟೆಲ್ಲಾ ಮಹತ್ವ ಪಡೆದಿರುವ ಸಾಕ್ಷಾತ್ ಶಿವ, ಕಾಲಭೈರವನಾಗಿ ನೆಲೆಸಿರುವ ಈ ಕ್ಷೇತ್ರ ಇರೋದಾದ್ರೂ ಎಲ್ಲಿ ಅಂದ್ರೆ.. ಅದು ಮಧ್ಯಪ್ರದೇಶದ ಉಜ್ಜೈನಿ ಬಳಿ ಇರುವ ಭೈರೋಗರ್ನಲ್ಲಿ.