
ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ಸೋನು ಸೂದ್ ನಾವ್ಯಾರೂ ಅರಿಯಲಾರದದಷ್ಟು, ಅರ್ಥಮಾಡಿಕೊಳ್ಳಲಾರದಷ್ಟು ದೊಡ್ಡ ಹೃದಯವನ್ನು ಪಡೆದಿದ್ದಾರೆ. ಅವರು ವಲಸೆ ಕಾರ್ಮಿಕರಿಗೆ ಮಾಡಿದ ಸಹಾಯದ ಹಿನ್ನೆಲೆಯಲ್ಲಿ ಈ ಮಾತನ್ನು ನಾವು ಖಂಡಿತವಾಗಿಯೂ ಹೇಳುತ್ತಿಲ್ಲ. ಅದು ಈಗಾಗಲೇ ಜಗಜ್ಜಾಹೀರಾಗಿದೆ ಮತ್ತು ಅವರಿಂದ ಸಹಾಯ ಪಡೆದು ತಮ್ಮ–ತಮ್ಮ ಊರುಗಳಿಗೆ ವಾಪಸ್ಸಾಗಿ ನೆಮ್ಮದಿಯ ಜೀವನ ನಡೆಸುತ್ತಿರುವ ಲಕ್ಷಾಂತರ ಜನ ಸೋನು ಅವರನ್ನು ದಿನಾಲು ತುಂಬು ಹೃದಯದಿಂದ ನೆನಸುತ್ತಿದ್ದಾರೆ ಮತ್ತು ಹಾರೈಸುತ್ತ್ತಿದ್ದಾರೆ.
ನಾವು ಹೇಳುತ್ತಿರುವ ವಿಷಯವೇ ಬೇರೆ. ಆದರೆ, ಖಂಡಿತವಾಗಿಯೂ ಅದು ಸೋನು ಅವರ ಮುಂದುವರಿದ ಹೃದಯ ವೈಶಾಲ್ಯತೆ, ಅವರಲ್ಲಿರುವ ಪರೋಪಕಾರದ ಗುಣ, ಬಡಜನರ ಬಗ್ಗೆ ಅವರಿಗಿರುವ ಕಾಳಜಿ ಮತ್ತು ಕಳಕಳಿಗೆ ಸಂಬಂಧಿಸಿದ್ದು.
ಯಾದಗಿರಿ ಜಿಲ್ಲೆಯಲ್ಲಿ ರಾಮಸಮುದ್ರವೆಂಬ ಗ್ರಾಮವಿದೆ. ಜಿಲ್ಲಾ ಕೇಂದ್ರದಿಂದ ಸುಮಾರು14 ಕಿಲೊಮೀಟರ್ ದೂರವಿರುವ ಈ ಊರು, ಯಾದಗಿರಿಯಿಂದ ಗುರುಮಠಕಲ್ಗೆ ಅಥವಾ ಹೈದರಾಬಾದ್ಗೆ ಹೋಗುವ ಮಾರ್ಗದಲ್ಲಿ ಸಿಗುವ ಒಂದು ಚಿಕ್ಕ ಊರು.
ಈ ಗ್ರಾಮದಲ್ಲಿ ನಾಗರಾಜ ಹೆಸರಿನ ವ್ಯಕ್ತಿ ಹೆಂಡತಿಯೊಂದಿಗೆ ವಾಸವಾಗಿದ್ದಾರೆ. ಅವರದ್ದು ತೀರ ಬಡ ಕುಟುಂಬ. ಗರ್ಭಿಣಿಯಾಗಿದ್ದ ನಾಗರಾಜ ಹೆಂಡತಿ ಕೆಲವೇ ದಿನಗಳ ಹಿಂದೆ ತ್ರಿವಳಿಗಳಿಗೆ ಜನ್ಮ ನೀಡಿದ್ದಾರೆ! ಹುಟ್ಟಲಿರುವ ಒಂದು ಮಗುವನ್ನೇ ಹೇಗೆ ಸಾಕುವುದು ಎಂಬ ಚಿಂತೆಯಲ್ಲಿದ್ದ ನಾಗರಾಜಗೆ, ಪತ್ನಿ ಮೂರು ಮಕ್ಕಳನ್ನು ಹೆತ್ತಿದ್ದು ಬರಸಿಡಿಲು ಬಂದೆರಗಿದಂತಾಗಿತ್ತು. ಅವರಿಗೆ ಅಕ್ಷರಶಃ ದಿಕ್ಕು ತೋಚದಂಥ ಸ್ಥಿತಿ.
ಮಲ್ಲಿಕಾರ್ಜುನ ಎಂಬ ಹೆಸರಿನ ಯಾದಗಿರಿ ನಿವಾಸಿಗೆ ಈ ವಿಷಯ ಅದ್ಹೇಗೋ ಗೊತ್ತಾಯಿತು. ಅವರಿಗೆ ಏನನಿಸಿತೋ ಅಥವಾ ಯಾಕೆ ಹಾಗಿನಿಸಿತೋ ಅಂತ ಅವರೇ ಹೇಳಬೇಕು. ಅವರು ಕೂಡಲೇ ರಾಮಸಮುದ್ರಕ್ಕೆ ತೆರಳಿ ನಾಗರಾಜ, ಅವರ ಪತ್ನಿ ಹಾಗೂ ಮೂರು ನವಜಾತ ಶಿಶುಗಳ ಇಮೇಜ್ ಹಾಗೂ ವಿಡಿಯೊ ಮಾಡಿ, ಲಾಕ್ಡೌನ್ ಸಮಯದಲ್ಲಿ ಸೋನು ಮೂಲಕ ಸಹಾಯ ಪಡೆದು ಮುಂಬೈಯಿಂದ ಯಾದಗಿರಿಗೆ ವಾಪಾಸ್ಸಾಗಿದ್ದ ಒಬ್ದ ವ್ಯಕ್ತಿಯ ಬಳಿ ಸೋನು ಅವರ ನಂಬರ್ ಪಡೆದು ಅವರಿಗೆ ಆ ಇಮೇಜ, ಮತ್ತು ವಿಡಿಯೊವನ್ನು ವಾಟ್ಸ್ಯಾಪ್ ಮಾಡಿದರು.
ಯಾದಗಿರಿ ಸುತ್ತಮುತ್ತಲಿನ ಜನಕ್ಕೆ ಸೋನು ಸಂದೇಶವನ್ನು ನೀಡಿ ನಾಗರಾಜನ ಕುಟುಂಬಕ್ಕೆ ಕೈಲಾದ ಸಹಾಯ ಮಾಡಿ ಅಂತ ವಿನಂತಿಸಿಕೊಂಡಿದ್ದಾರೆ. ಅವರಿಗಷ್ಟೇ ಅಲ್ಲದೆ, ಕಷ್ಟದಲ್ಲಿರುವ ಎಲ್ಲಾ ಜನರಿಗೆ ಸಹಾಯ ಮಾಡಿ ಎಂದು ಹೇಳಿದ್ದಾರೆ.
ವಿಡಿಯೊ ಕಳಿಸಿದ ಮಲ್ಲಿಕಾರ್ಜುನ ಅವರಿಗೆ ಧನ್ಯವಾದಗಳನ್ನು ಹೇಳಲು ಸೋನು ಮರೆತಿಲ್ಲ. ಬೇರೆಯವರ ಕಷ್ಟ ನಿವಾರಿಸಲೆಂದೇ ಈ ಮನುಷ್ಯ ಹುಟ್ದಸಿದ್ದಾನೆಯೇ? ಸುಳ್ಳು ಭರವಸೆಗಳನ್ನು ನೀಡಿ ಕೊವಿಡ್-19 ಸೋಂಕಿತರನ್ನು ಯಾಮಾರಿಸಿ ಅವರಿಗೆಂದೇ ಬಿಡುಗಡೆಗಾಗಿರುವ ಹಣವನ್ನು ಲಪಟಾಯಿಸುವ ನಮ್ಮ ನಾಯಕರ ನಡುವೆ, ಈ ಸೋನು ಸಂತ್ರಸ್ತ ಜನರಿಗೆ ದೇವತಾ ಸ್ವರೂಪಿಯಾಗಿ ಕಾಣುತ್ತಿರುವುದರಲ್ಲಿ ಏನಾದರೂ ಆಶ್ಚರ್ಯವಿದೆಯೇ?
ನಮ್ಮ ಯಾದಗಿರಿ ವರದಿಗಾರರೊಂದಿಗೆ ಮಾತಾಡಿದ ನಾಗರಾಜ, ಸೋನು ಸರ್ ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸುವುದೆಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ. ನಮಗೂ ಅದು ಗೊತ್ತಾಗುತ್ತಿಲ್ಲ ನಾಗರಾಜ………