
ನಮ್ಮ ಕುಟುಂಬದ ಸದಸ್ಯರು, ಮಕ್ಕಳು ಅಥವಾ ಇತರ ಆತ್ಮೀಯರು ವಿದೇಶದಲ್ಲಿ ಉದ್ಯೋಗ, ವ್ಯಾಸಂಗ ಅಥವಾ ಜೀವನ ಸಾಗಿಸುತ್ತಿರುವಾಗ, ಅವರು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಉದ್ಯೋಗದಲ್ಲಿ ಸ್ಥಿರತೆ ಸಿಗದಿರುವುದು, ಬಡ್ತಿಯ ಕೊರತೆ, ಅನಾರೋಗ್ಯ, ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುವುದು, ವೀಸಾ ಅಥವಾ ಗ್ರೀನ್ ಕಾರ್ಡ್ ಪಡೆಯುವಲ್ಲಿ ಅಡೆತಡೆಗಳು, ಅಥವಾ ಒಡನಾಟದಲ್ಲಿ ಸಮಸ್ಯೆಗಳು ಇವೆಲ್ಲವೂ ಸಾಮಾನ್ಯ. ಭಾರತದಲ್ಲಿರುವ ಪೋಷಕರು, ಸಹೋದರರು ಮತ್ತು ಇತರ ಬಂಧುಗಳಿಗೆ ಇದು ದೊಡ್ಡ ಚಿಂತೆಯ ವಿಷಯವಾಗಿರುತ್ತದೆ. ತಮ್ಮವರ ಯಶಸ್ಸು ಮತ್ತು ಸುರಕ್ಷತೆಗಾಗಿ ಅವರು ಏನು ಮಾಡಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಧರ್ಮಶಾಸ್ತ್ರಗಳು ಇಂತಹ ಸಂದರ್ಭಗಳಲ್ಲಿ ದಕ್ಷಿಣಾಮೂರ್ತಿಯ ಆರಾಧನೆಯು ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ತಿಳಿಸುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.
ದಕ್ಷಿಣಾಮೂರ್ತಿಯು ಜ್ಞಾನ, ಸ್ಥಿರತೆ, ನಿರ್ಧಾರ ಶಕ್ತಿ ಮತ್ತು ಅಧ್ಯಾತ್ಮಿಕ ಬೆಳವಣಿಗೆಯ ಅಧಿದೇವತೆ. ಇವರನ್ನು ಪೂಜಿಸುವುದರಿಂದ ಅರಿವು ಹೆಚ್ಚಾಗುತ್ತದೆ ಮತ್ತು ಸವಾಲುಗಳನ್ನು ಎದುರಿಸಲು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. ನವಗ್ರಹಗಳಲ್ಲಿ ಪ್ರಮುಖವಾಗಿ ಶನಿ, ರಾಹು ಮತ್ತು ಬುಧ ಗ್ರಹಗಳು ತೊಂದರೆಗಳನ್ನು ಉಂಟುಮಾಡುವಾಗ, ದಕ್ಷಿಣಾಮೂರ್ತಿಯ ಪೂಜೆಯು ಅವುಗಳ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಕಾರಿ ಎಂದು ನಂಬಲಾಗಿದೆ. ವಿದೇಶದಲ್ಲಿರುವವರು ಈ ಗ್ರಹಗಳ ಕಾಟಕ್ಕೆ ಸಿಲುಕಿದಾಗ, ಅವರ ಪೋಷಕರು ಇಲ್ಲಿ ದಕ್ಷಿಣಾಮೂರ್ತಿ ಪೂಜೆಯನ್ನು ಆಚರಿಸಿದರೆ ಶುಭ ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ
ಈ ಪೂಜೆಯನ್ನು ಸತತ 12 ದಿನಗಳವರೆಗೆ ಆಚರಿಸಬೇಕು, ಆದರೆ ವಾರದಲ್ಲಿ ಮೂರು ದಿನಗಳ ಕಾಲ ಮಾತ್ರ. ಮಂಗಳವಾರ, ಬುಧವಾರ ಮತ್ತು ಗುರುವಾರಗಳು ಈ ಪೂಜೆಗೆ ಸೂಕ್ತವಾದ ದಿನಗಳು. ಬೆಳಗಿನ ಜಾವದಲ್ಲಿ ಈ ಆಚರಣೆಯನ್ನು ಮಾಡಬೇಕು.
ದೀಪದ ಮೂಲಕ ದೇವತೆಗಳನ್ನು ಆವಾಹಿಸುವುದು ಒಂದು ಸಾಮಾನ್ಯ ಪದ್ಧತಿಯಾಗಿದೆ. ದಕ್ಷಿಣಾಮೂರ್ತಿ ಪೂಜೆಯನ್ನು ಶ್ರದ್ಧೆಯಿಂದ, ನಂಬಿಕೆಯಿಂದ ಆಚರಿಸಿದರೆ ವಿದೇಶದಲ್ಲಿರುವ ನಿಮ್ಮ ಬಂಧುಗಳಿಗೆ ಸಂದರ್ಶನಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ ಮತ್ತು ಸ್ಥಿರತೆ ದೊರೆಯುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Sun, 7 December 25