Akshaya Tritiya: ಅಕ್ಷಯ ತೃತೀಯಂದು ಚಿನ್ನವೇ ಖರೀದಿಸಬೇಕೆಂದಿಲ್ಲ, ಈ 5 ಅಗ್ಗದ ವಸ್ತು ಮನೆಗೆ ತಂದರೂ ಒಲಿಯಲಿದೆ ಲಕ್ಷ್ಮಿ ಕೃಪೆ!

ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ, ಈ ದಿನ ಮಾಡಿದ ಶುಭ ಕಾರ್ಯಗಳಿಗೆ ಅಕ್ಷಯ ಫಲ ಲಭಿಸುತ್ತದೆ. ಚಿನ್ನ ಖರೀದಿಗೆ ಅಸಾಧ್ಯವಾದರೂ ಚಿಂತೆಯಿಲ್ಲ. ಜ್ಯೋತಿಷ್ಯದ ಪ್ರಕಾರ, ಕೇವಲ ಚಿನ್ನವಲ್ಲದೆ, ಕಡಿಮೆ ಬೆಲೆಯ ಕೆಲವು ಪವಿತ್ರ ವಸ್ತುಗಳನ್ನು ಮನೆಗೆ ತರುವುದರಿಂದಲೂ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು. ಸಂಪತ್ತು, ಸಮೃದ್ಧಿ ಹೆಚ್ಚಿಸುವ ಆ ಐದು ಪ್ರಮುಖ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ.

Akshaya Tritiya: ಅಕ್ಷಯ ತೃತೀಯಂದು ಚಿನ್ನವೇ ಖರೀದಿಸಬೇಕೆಂದಿಲ್ಲ, ಈ 5 ಅಗ್ಗದ ವಸ್ತು ಮನೆಗೆ ತಂದರೂ ಒಲಿಯಲಿದೆ ಲಕ್ಷ್ಮಿ ಕೃಪೆ!
ಅಕ್ಷಯ ತೃತೀಯ

Updated on: Apr 12, 2026 | 2:48 PM

ಭಾರತೀಯ ಸಂಸ್ಕೃತಿಯಲ್ಲಿ ‘ಅಕ್ಷಯ ತೃತೀಯ‘ಕ್ಕೆ ವಿಶೇಷ ಮಹತ್ವವಿದೆ. ಈ ದಿನ ಏನೇ ಮಾಡಿದರೂ ಅದು ‘ಅಕ್ಷಯ’ (ಅಳಿಯದ) ಫಲ ನೀಡುತ್ತದೆ ಎಂಬುದು ನಂಬಿಕೆ. ಅಕ್ಷಯ ತೃತೀಯ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಚಿನ್ನ-ಬೆಳ್ಳಿಯ ಖರೀದಿ. ಆದರೆ, ಇಂದಿನ ಕಾಲದಲ್ಲಿ ಎಲ್ಲರಿಗೂ ಚಿನ್ನ ಖರೀದಿಸಲು ಸಾಧ್ಯವಾಗದಿರಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೇವಲ ಚಿನ್ನ ಮಾತ್ರವಲ್ಲ, ಅತಿ ಕಡಿಮೆ ಬೆಲೆಯಲ್ಲಿ ಸಿಗುವ ಕೆಲವು ಪವಿತ್ರ ವಸ್ತುಗಳನ್ನು ಮನೆಗೆ ತರುವುದರಿಂದಲೂ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು.

ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಆ ೫ ವಸ್ತುಗಳು ಇಲ್ಲಿವೆ:

ಉಪ್ಪು: ನಕಾರಾತ್ಮಕತೆ ದೂರ ಮಾಡುವ ಸಂಕೇತ

ಅಕ್ಷಯ ತೃತೀಯದಂದು ಉಪ್ಪು ಖರೀದಿಸುವುದು ಚಿನ್ನ ಖರೀದಿಸುವುದಕ್ಕಿಂತಲೂ ಶ್ರೇಷ್ಠ ಎಂದು ಜ್ಯೋತಿಷ್ಯ ವಿದ್ವಾಂಸರು ಹೇಳುತ್ತಾರೆ. ಉಪ್ಪು ಲಕ್ಷ್ಮಿ ದೇವಿಯ ಸ್ವರೂಪ ಎಂದು ನಂಬಲಾಗಿದೆ. ಈ ದಿನ ಉಪ್ಪನ್ನು ಮನೆಗೆ ತರುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ, ಧನಾತ್ಮಕತೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.

ಮಣ್ಣಿನ ಪಾತ್ರೆ: ಯಶಸ್ಸಿನ ಮೆಟ್ಟಿಲು

ಹೊಸ ಮಣ್ಣಿನ ಪಾತ್ರೆ ಅಥವಾ ಮಡಿಕೆಯನ್ನು ಈ ದಿನ ಖರೀದಿಸುವುದು ಅತ್ಯಂತ ಶುಭದಾಯಕ. ಮಣ್ಣಿನ ಪಾತ್ರೆ ಖರೀದಿಸಿ ಅದರಲ್ಲಿ ನೀರು ತುಂಬಿಸಿಡುವುದು ಜೀವನದ ಹಿನ್ನಡೆಗಳನ್ನು ನೀಗಿಸಿ, ಉನ್ನತ ಸ್ಥಾನಕ್ಕೇರಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ಶಾಂತಿ ಮತ್ತು ಸಮೃದ್ಧಿಯ ಸಂಕೇತ.

ತುಳಸಿ ಗಿಡ: ಸಾಕ್ಷಾತ್ ಲಕ್ಷ್ಮಿಯ ಆಗಮನ

ಮನೆಯಲ್ಲಿ ತುಳಸಿ ಗಿಡ ಇಲ್ಲದವರು ಅಕ್ಷಯ ತೃತೀಯದಂದು ಹೊಸ ಗಿಡವನ್ನು ಖರೀದಿಸಿ ನೆಡುವುದು ಶ್ರೇಯಸ್ಕರ. ತುಳಸಿಯನ್ನು ಮನೆಗೆ ತರುವುದು ಎಂದರೆ ಸಾಕ್ಷಾತ್ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡಂತೆ. ಇದರಿಂದ ಮನೆಯಲ್ಲಿ ಅಶಾಂತಿ ದೂರವಾಗಿ ಸದಾ ಮಂಗಳ ಉಂಟಾಗುತ್ತದೆ.

ಅರಿಶಿನ-ಕುಂಕುಮ: ಸೌಭಾಗ್ಯದ ಸಂಕೇತ

ಅತಿ ಕಡಿಮೆ ವೆಚ್ಚದಲ್ಲಿ ಸಿಗುವ ಅರಿಶಿನ ಮತ್ತು ಕುಂಕುಮ ಸೌಭಾಗ್ಯದ ಸಂಕೇತಗಳಾಗಿವೆ. ಅಕ್ಷಯ ತೃತೀಯದಂದು ಇವುಗಳನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಇರುತ್ತದೆ. ನೀವು ಮಾಡುವ ಎಲ್ಲಾ ಶುಭ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.

ಪುಸ್ತಕಗಳು: ಜ್ಞಾನ ಮತ್ತು ಐಶ್ವರ್ಯದ ಮಿಲನ

ವಿದ್ಯೆಯೇ ಮಹಾಧನ. ಈ ದಿನ ಪುಸ್ತಕಗಳನ್ನು ಖರೀದಿಸುವುದು ಜ್ಞಾನದೇವತೆ ಸರಸ್ವತಿ ಮತ್ತು ಐಶ್ವರ್ಯದೇವತೆ ಲಕ್ಷ್ಮಿಯ ಆಶೀರ್ವಾದವನ್ನು ಒಟ್ಟಿಗೆ ನೀಡುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಫಲ ನೀಡುತ್ತದೆ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ ಕಂಡುಬರಲು ಅಕ್ಷಯ ತೃತೀಯದಂದು ಪುಸ್ತಕ ಅಥವಾ ಲೇಖನ ಸಾಮಗ್ರಿಗಳನ್ನು ಖರೀದಿಸುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us