Daily Devotional: ದೇವರಿಗೆ ಮುಡಿ ಕೊಡುವುದರ ಹಿಂದಿನ ಪೌರಾಣಿಕ ಕಥೆ ಮತ್ತು ಮಹತ್ವ ತಿಳಿಯಿರಿ
ಕಷ್ಟಗಳ ನಿವಾರಣೆಗಾಗಿ ಭಗವಂತನ ಮೊರೆ ಹೋಗುವಾಗ ಅನೇಕರು ಮುಡಿ ಅರ್ಪಣೆ ಮಾಡುತ್ತಾರೆ. ತಿರುಪತಿ ವೆಂಕಟೇಶ್ವರ ಸ್ವಾಮಿಗೆ ನೀಲಾದೇವಿ ಕೂದಲು ನೀಡಿದ ಕಥೆಯಿಂದ ಈ ಸಂಪ್ರದಾಯ ಹುಟ್ಟಿಕೊಂಡಿತು. ಇಷ್ಟಾರ್ಥ ಸಿದ್ಧಿ, ದೋಷ ನಿವಾರಣೆ ಮತ್ತು ಮಾನಸಿಕ ತೃಪ್ತಿಗಾಗಿ ಈ ಆಚರಣೆಯನ್ನು ಪಾಲಿಸಲಾಗುತ್ತದೆ ಎಂದು ಮುಡಿ ಅರ್ಪಣೆಯ ಮಹತ್ವವನ್ನು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

ಕಷ್ಟಗಳಿಂದ ಮುಕ್ತಿ ಪಡೆಯಲು ದೇವರ ಮೊರೆ ಹೋಗುವುದು ಸಾಮಾನ್ಯ. ಅಭಿಷೇಕ, ಪೂಜೆ, ಹರಕೆಗಳನ್ನು ಹೊತ್ತುಕೊಳ್ಳುವ ಮೂಲಕ ಪ್ರಯತ್ನಿಸುತ್ತೇವೆ. ಈ ಹರಕೆಗಳಲ್ಲಿ ಮುಡಿ (ಕೂದಲು) ಅರ್ಪಿಸುವುದು ಒಂದು ಪ್ರಮುಖ ಪದ್ಧತಿಯಾಗಿದೆ. ಆದ್ದರಿಂದ ದೇವರಿಗೆ ಮುಡಿ ಕೊಡುವುದರ ಹಿಂದಿನ ಕಾರಣವೇನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಗುರೂಜಿಯವರು ಹೇಳುವಂತೆ, ದೇವರಿಗೆ ಮುಡಿ ಅರ್ಪಿಸುವ ಸಂಪ್ರದಾಯದ ಮೂಲ ತಿರುಪತಿ ವೆಂಕಟೇಶ್ವರ ಸ್ವಾಮಿ ಮತ್ತು ನೀಲಾದೇವಿಯ ಕಥೆಯಲ್ಲಿ ಅಡಗಿದೆ. ಪುರಾಣಗಳ ಪ್ರಕಾರ, ವೆಂಕಟೇಶ್ವರ ಸ್ವಾಮಿಯ ತಲೆಗೆ ಗಾಯವಾದಾಗ, ಆತನ ಪರಮ ಭಕ್ತೆಯಾದ ನೀಲಾದೇವಿ ತನ್ನ ಸಂಪೂರ್ಣ ಕೂದಲನ್ನು ತೆಗೆದು ಸ್ವಾಮಿಯ ಗಾಯದ ಮೇಲೆ ಇಟ್ಟು ವಾಸಿ ಮಾಡಿದಳು. ಇದರಿಂದ ಪ್ರಸನ್ನನಾದ ವೆಂಕಟೇಶ್ವರ ಸ್ವಾಮಿ, ಅಂದಿನಿಂದ ಯಾರು ನನಗೆ ಮುಡಿ ಅರ್ಪಿಸುತ್ತಾರೋ, ಅವರ ಆಸೆ-ಆಕಾಂಕ್ಷೆಗಳು ಮತ್ತು ಇಷ್ಟಾರ್ಥಗಳನ್ನು ಈಡೇರಿಸುತ್ತೇನೆ ಎಂದು ನೀಲಾದೇವಿಗೆ ವಾಗ್ದಾನ ಮಾಡಿದನು. ಈ ಘಟನೆಯ ನಂತರವೇ ಮುಡಿ ಅರ್ಪಿಸುವ ಪದ್ಧತಿ ರೂಢಿಗೆ ಬಂತು ಎಂದು ಹೇಳಲಾಗುತ್ತದೆ. ತಿರುಪತಿಯಲ್ಲಿ ಇಂದಿಗೂ ಸ್ವಾಮಿಯ ಹಿಂದೆ ದೊಡ್ಡ ಕೂದಲು ಇರುವುದು ನೀಲಾದೇವಿ ಅರ್ಪಿಸಿದ್ದು ಎಂಬ ನಂಬಿಕೆ ಇದೆ.
ವಿಡಿಯೋ ಇಲ್ಲಿದೆ ನೋಡಿ:
ಆದರೆ, ಹರಕೆಗಳನ್ನು ಹೊತ್ತುಕೊಳ್ಳುವುದು ಹಣಕಾಸಿನ ವ್ಯವಹಾರದಂತೆ ಇರಬಾರದು. “ನನಗೆ ಒಂದು ಕೋಟಿ ರೂಪಾಯಿ ಕೊಡು, ನಾನು ನಿನಗೆ ಒಂದು ರೂಪಾಯಿ ಕೊಡುತ್ತೇನೆ” ಎಂಬಂತಹ ಭಾವನೆ ಸರಿಯಲ್ಲ. ಭಗವಂತನಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇನೆ, ಪ್ರಾರ್ಥನೆ ಮಾಡುತ್ತೇನೆ, ನಿಜವಾಗಿ ಈ ಕೋರಿಕೆ ಈಡೇರಿಸು ಎಂದು ಭಕ್ತಿಯಿಂದ ಬೇಡಿಕೊಳ್ಳುವುದೇ ನಿಜವಾದ ಹರಕೆ. ಇಷ್ಟಾರ್ಥ ಸಿದ್ಧಿಗಾಗಿ, ಕೋರಿಕೆಗಳ ಈಡೇರಿಕೆಗಾಗಿ, ಮನೆ, ಆರೋಗ್ಯ, ಹಣಕಾಸು, ಸಾಲ ವಿಮುಕ್ತಿ, ಉದ್ಯೋಗ ಪ್ರಾಪ್ತಿ ಮುಂತಾದ ಕಾರಣಗಳಿಗಾಗಿ ಭಕ್ತರು ಮುಡಿ ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಕೆಲವರು ಜನ್ಮ ಮುಡಿ (ಮಗು ಹುಟ್ಟಿದ ತಕ್ಷಣ ಅದರ ಕೂದಲನ್ನು ಅರ್ಪಿಸುವುದು) ಪದ್ಧತಿಯನ್ನು ಅನುಸರಿಸುತ್ತಾರೆ. ಮನೆದೇವರು, ಇಷ್ಟದೇವರು, ಹುಟ್ಟುಕೂದಲು ಅರ್ಪಿಸುವುದು, ಪುಣ್ಯಕ್ಷೇತ್ರಗಳಲ್ಲಿ ಕೂದಲನ್ನು ನೀಡುವುದು ರೂಢಿಯಲ್ಲಿದೆ.
ಇದನ್ನೂ ಓದಿ: ಮನೆಯಲ್ಲಿ ಮೆಟ್ಟಿಲು ನಿರ್ಮಿಸುವಾಗ ಈ ವಾಸ್ತು ನಿಯಮ ನಿರ್ಲಕ್ಷ್ಯಿಸದಿರಿ
ಮುಡಿ ಅರ್ಪಣೆಯಿಂದ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಮಾಟಮಂತ್ರ, ದೃಷ್ಟಿ ದೋಷಗಳಿಂದ ಬಳಲುತ್ತಿರುವವರು ತಮ್ಮ ಇಷ್ಟದೇವರ ಬಳಿ ಹೋಗಿ ಸಂಪೂರ್ಣ ಮುಡಿ ಅರ್ಪಿಸಿದಾಗ ತಕ್ಷಣವೇ ಸಕ್ರಿಯರಾಗುತ್ತಾರೆ ಮತ್ತು ಒಂದು ರೀತಿಯ ಶಕ್ತಿ ಉದ್ಭವಿಸುತ್ತದೆ ಎಂದು ಹೇಳಲಾಗುತ್ತದೆ. ಕೆಟ್ಟ ದೋಷಗಳಿದ್ದಾಗ, ಹರಕೆ ಹೊತ್ತ ಮೇಲೆ ಮುಡಿಯನ್ನು ತಪ್ಪದೇ ಅರ್ಪಿಸಬೇಕು. ಇದು ಮಾನಸಿಕ ತೃಪ್ತಿ ನೀಡುವುದರ ಜೊತೆಗೆ ದೈವ ಬಲವನ್ನೂ ತರುತ್ತದೆ.
ದೇಹದಲ್ಲಿ ನಾವು ಮಾಡಿದ ಎಲ್ಲಾ ಪಾಪಗಳು ನಮ್ಮ ತಲೆಯ ಕೂದಲಿನಲ್ಲಿ ಸೇರಿಕೊಂಡಿರುತ್ತವೆ ಎಂದು ಇನ್ನೊಂದು ಅರ್ಥವಿದೆ. ಆ ಪಾಪಗಳನ್ನು ಹೋಗಲಾಡಿಸಲು, ಹಿಂದಿನ ಜನ್ಮದ ಕರ್ಮಗಳ ಪ್ರಭಾವವನ್ನು ಕಡಿಮೆ ಮಾಡಲು ಮುಡಿ ಅರ್ಪಣೆ ಸಹಕಾರಿಯಾಗಿದೆ. ಕನಿಷ್ಠ ಮೂರು ವರ್ಷಕ್ಕೊಮ್ಮೆ ಆದರೂ ಭಗವಂತನಿಗೆ ಮುಡಿ ಅರ್ಪಿಸುವುದು ಶುಭಕರ. ಇದು ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಹಳಷ್ಟು ಪ್ರಭಾವವನ್ನು ಹೊಂದಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Wed, 29 October 25




