
ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿ ರದ್ದಾಗುವ ಸಾಧ್ಯತೆಯಿದೆ. ಏಕೆಂದರೆ, ಇದೇ ಅವಧಿಯಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ವಿರುದ್ಧ ಸರಣಿಯನ್ನು ಆಡಲಿದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು (ACB) ಭಾರತದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಹೀಗಾಗಿ, ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿ ನಡೆಯುವುದು ಅನುಮಾನ.
ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ (BCB) ಸೆಪ್ಟೆಂಬರ್ 1 ರಿಂದ 13 ರವರೆಗೆ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಯೋಜಿಸಲು ಉತ್ಸುಕವಾಗಿತ್ತು. ಆದರೆ, ಅಫ್ಘಾನಿಸ್ತಾನ್ ಮಂಡಳಿ ಈಗ ಸೆಪ್ಟೆಂಬರ್ 13 ರಿಂದ 17 ರವರೆಗೆ ಭಾರತದ ವಿರುದ್ಧ ಸರಣಿ ನಿಗದಿಪಡಿಸಿದೆ.
ಸೆಪ್ಟೆಂಬರ್ 13 ರಂದು ಎರಡೂ ಸರಣಿಗಳ ದಿನಾಂಕಗಳು ಒಟ್ಟಿಗೇ ಎದುರಾಗುವುದರಿಂದ, ಭಾರತ ತಂಡಕ್ಕೆ ಬಾಂಗ್ಲಾದೇಶದಿಂದ ವಾಪಸ್ ಬಂದು ತಕ್ಷಣವೇ ಅಫ್ಘಾನ್ ಎದುರಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಹೀಗಾಗಿ ಬಾಂಗ್ಲಾ ವಿರುದ್ಧ ಸರಣಿ ರದ್ದಾಗುವುದು ಬಹುತೇಕ ಖಚಿತವಾಗಿದೆ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಉಂಟಾದ ರಾಜಕೀಯ ಅಸ್ಥಿರತೆ ಹಾಗೂ ಭದ್ರತಾ ಕಾರಣಗಳಿಂದಾಗಿ ಭಾರತ ಸರ್ಕಾರವು ಟೀಮ್ ಇಂಡಿಯಾವನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಬಿಸಿಸಿಐಗೆ (BCCI) ಇನ್ನೂ ಹಸಿರು ನಿಶಾನೆ ನೀಡಿಲ್ಲ. ರಾಜತಾಂತ್ರಿಕ ಉದ್ವಿಗ್ನತೆಯೂ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಇನ್ನು 2026ರ ಐಪಿಎಲ್ (IPL) ಸಮಯದಲ್ಲಿ ಬಾಂಗ್ಲಾದೇಶದ ಸ್ಟಾರ್ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಬಾಂಗ್ಲಾ ಮಂಡಳಿ ಅರ್ಧದಲ್ಲೇ ವಾಪಸ್ ಕರೆಸಿಕೊಂಡಿತ್ತು. ಇದು ಉಭಯ ಮಂಡಳಿಗಳ ನಡುವೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಾಂಗ್ಲಾದೇಶ್ ತಂಡವು ಸುರಕ್ಷತೆಯ ಕಾರಣ ನೀಡಿ ಟಿ20 ವಿಶ್ವಕಪ್ ಬಹಿಷ್ಕರಿಸುವ ಆಲೋಚನೆ ನಡೆಸಿತ್ತು, ಇದು ಬಿಸಿಸಿಐ ಕೋಪಕ್ಕೆ ಕಾರಣವಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಬಿಸಿಸಿಐ ಬಾಂಗ್ಲಾ ಪ್ರವಾಸದ ಬದಲು ಅಫ್ಘಾನಿಸ್ತಾನ್ ವಿರುದ್ಧದ ಸರಣಿಗೆ ಹೆಚ್ಚಿನ ಆದ್ಯತೆ ನೀಡಿದೆ.
ಬಿಸಿಸಿಐ ಅಥವಾ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಈ ಸರಣಿಯನ್ನು ಅಧಿಕೃತವಾಗಿ ‘ರದ್ದು’ ಎಂದು ಘೋಷಿಸಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಸರಣಿ ನಡೆಯುವುದು ಅಸಾಧ್ಯ ಎನ್ನಲಾಗುತ್ತಿದೆ.
ಅತ್ತ ಬಾಂಗ್ಲಾದೇಶದ ಕ್ರೀಡಾ ಸಚಿವ ಅಮೀನುಲ್ ಹಕ್ ನೀಡಿರುವ ಹೇಳಿಕೆಯ ಪ್ರಕಾರ, ಈ ಸರಣಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಉಭಯ ದೇಶಗಳ ವಿದೇಶಾಂಗ ಸಚಿವರ ಮಟ್ಟದಲ್ಲಿ ಕೊನೆಯ ಹಂತದ ಮಾತುಕತೆಗಳು ನಡೆಯುತ್ತಿವೆ.
ಇದನ್ನೂ ಓದಿ: IND vs SL: ಸ್ವಿಂಗ್ ಮತ್ತು ಸ್ಪಿನ್ ತಂತ್ರಕ್ಕೆ ಟೀಮ್ ಇಂಡಿಯಾ ರಣತಂತ್ರ!
ಅಫ್ಘಾನಿಸ್ತಾನ್ ಸರಣಿ ಖಚಿತವಾಗಿರುವುದರಿಂದ, ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತ ತಂಡ ಬಾಂಗ್ಲಾದೇಶ್ ಪ್ರವಾಸ ಕೈಗೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ, ಭವಿಷ್ಯದಲ್ಲಿ ಈ ಸರಣಿಗಾಗಿ ದಿನಾಂಕಗಳನ್ನು ಮರುಹೊಂದಿಸಲು ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿಯು ತೆರೆಮರೆಯ ಪ್ರಯತ್ನಗಳನ್ನು ಆರಂಭಿಸಿದೆ.