IND vs WI: ‘ಯಾವ ಆಧಾರದ ಮೇಲೆ ಆಯ್ಕೆ ಮಾಡಿದ್ರಿ’; ಟಿ20 ತಂಡದಲ್ಲಿ ಈ ಇಬ್ಬರ ಆಯ್ಕೆಗೆ ನೆಟ್ಟಿಗರ ಆಕ್ರೋಶ!

IND vs WI: ಕಳಪೆ ಪ್ರದರ್ಶನದ ಹೊರತಾಗಿಯೂ ಈ ಆಟಗಾರರ ಆಯ್ಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಯಾವ ಆಧಾರದ ಮೇಲೆ ಈ ಆಟಗಾರರನ್ನು ಆಯ್ಕೆ ಮಾಡಿದ್ದೀರಿ ಎಂದು ಬಿಸಿಸಿಐ ವಿರುದ್ಧ ಹರಿಹಾಯ್ದಿದ್ದಾರೆ.

IND vs WI: ‘ಯಾವ ಆಧಾರದ ಮೇಲೆ ಆಯ್ಕೆ ಮಾಡಿದ್ರಿ’; ಟಿ20 ತಂಡದಲ್ಲಿ ಈ ಇಬ್ಬರ ಆಯ್ಕೆಗೆ ನೆಟ್ಟಿಗರ ಆಕ್ರೋಶ!
ಟೀಂ ಇಂಡಿಯಾ

Updated on: Jul 06, 2023 | 12:05 PM

ವೆಸ್ಟ್ ಇಂಡೀಸ್ ವಿರುದ್ಧದ (India vs West Indies) ಐದು ಪಂದ್ಯಗಳ ಟಿ20 ಸರಣಿಗೆ ನಿನ್ನೆ ಅಂದರೆ, ಜುಲೈ 5 ರಂದು ಬಿಸಿಸಿಐ (BCCI) 15 ಸದಸ್ಯರ ಯುವ ಪಡೆಯನ್ನು ಪ್ರಕಟಿಸಿದೆ. ಮೊದಲೇ ಹೇಳಿದಂತೆ ಆಯ್ಕೆ ಮಂಡಳಿ ಆಯ್ಕೆ ಮಾಡಿರುವ ತಂಡದಲ್ಲಿ ಭಾಗಶಃ ಯುವ ಆಟಗಾರರೆ ತುಂಬಿ ತುಳುಕುತ್ತಿದ್ದಾರೆ. ಒಂದರ್ಥದಲ್ಲಿ ಹೇಳಬೇಕೆಂದರೆ ದೇಶೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರನ್ನು ಬದಿಗೊತ್ತಿ, ಐಪಿಎಲ್​ನಲ್ಲಿ (IPL 2023) ಮಿಂಚಿದವರಿಗೆ ಮಣೆ ಹಾಕಲಾಗಿದೆ. ಹಾಗೆಯೇ ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ ನೀಡಿ, ಸೀಸನ್ ಮಧ್ಯದಲ್ಲಿಯೇ ತಂಡದಿಂದ ಗೇಟ್​ಪಾಸ್ ಪಡೆದುಕೊಂಡಿದ್ದ ಕೆಲವು ಆಟಗಾರರು ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೀಗ ಕಳಪೆ ಪ್ರದರ್ಶನದ ಹೊರತಾಗಿಯೂ ಈ ಆಟಗಾರರ ಆಯ್ಕೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಯಾವ ಆಧಾರದ ಮೇಲೆ ಈ ಆಟಗಾರರನ್ನು ಆಯ್ಕೆ ಮಾಡಿದ್ದೀರಿ ಎಂದು ಬಿಸಿಸಿಐ ವಿರುದ್ಧ ಹರಿಹಾಯ್ದಿದ್ದಾರೆ.

ವಾಸ್ತವವಾಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವೂ ಇದ್ದು, ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಿಂಕು ಸಿಂಗ್, ಜಿತೇಶ್ ಶರ್ಮಾ, ಆಕಾಶ ಮಧ್ವಲ್​ರಂತಹ ಆಟಗಾರರನ್ನು ಕಡೆಗಣಿಸಿ, ಕಳಪೆ ಪ್ರದರ್ಶನ ನೀಡಿ ತಂಡದಿಂದ ಡ್ರಾಪ್ ಔಟ್ ಆಗಿದ್ದ ಆವೇಶ್ ಖಾನ್ ಹಾಗೂ ಉಮ್ರಾನ್ ಮಲಿಕ್​ರಂತಹ ಆಟಗಾರರಿಗೆ ಬಿಸಿಸಿಐ ಮಣೆ ಹಾಕಿದೆ. ಹೀಗಾಗಿ ನೆಟ್ಟಿಗರು ಆಯ್ಕೆ ಮಂಡಳಿಯ ವಿರುದ್ಧ ಕಿಡಿಕಾರುತ್ತಿದ್ದಾರೆ.

IND vs WI: ಅಭ್ಯಾಸ ಪಂದ್ಯದಲ್ಲೂ ಅದೇ ತಪ್ಪು; ಕೇವಲ 3 ರನ್​ಗಳಿಗೆ ಸುಸ್ತಾದ ಕೊಹ್ಲಿ! ವಿಡಿಯೋ ನೋಡಿ

ಹಾಂಗ್ ಕಾಂಗ್ ವಿರುದ್ಧ ದುಬಾರಿ

ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಭಾರತ ಪರ ಕೊನೆಯ ಪಂದ್ಯವನ್ನಾಡಿದ್ದ ಆವೇಶ್ ಖಾನ್, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ 13.25 ಎಕಾನಮಿ ದರದಲ್ಲಿ 53 ರನ್‌ ಬಿಟ್ಟುಕೊಟ್ಟಿದ್ದರು. ಹೀಗಾಗಿ ಆ ನಂತರ ಆವೇಶ್​ರನ್ನು ತಂಡದಿಂದ ಕೈಬಿಡಲಾಯಿತು. ಇನ್ನು ಐಪಿಎಲ್​ನಲ್ಲೂ ಮಂಕಾಗಿದ್ದ ಆವೇಶ್ 9.75 ರ ಎಕಾನಮಿಯಲ್ಲಿ ಕೇವಲ ಎಂಟು ವಿಕೆಟ್‌ಗಳನ್ನು ಪಡೆದಿದ್ದರು. ಹೀಗಾಗಿ ದುಬಾರಿಯಾಗುತ್ತಿದ್ದ ಆವೇಶ್​ರನ್ನು ಲಕ್ನೋ ಸೂಪರ್ ಜೈಂಟ್ಸ್‌ ತಂಡದಿಂದ ಕೈಬಿಟ್ಟಿತ್ತು. ಆದರೀಗ ಆಶ್ಚರ್ಯಕರ ರೀತಿಯಲ್ಲಿ ಆವೇಶ್ ಖಾನ್ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಐಪಿಎಲ್​ನಲ್ಲಿ ಕಳಪೆ ಬೌಲಿಂಗ್

ಇವರೊಂದಿಗೆ 15 ಸದಸ್ಯರ ತಂಡದಲ್ಲಿ ಉಮ್ರಾನ್ ಮಲಿಕ್ ಅವರ ಹೆಸರನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಉಮ್ರಾನ್ ಮೇಲೆ ಭಾರಿ ನಿರೀಕ್ಷೆ ಇಟ್ಟಿತ್ತು. ಆದರೆ ಉಮ್ರಾನ್ ಕೇವಲ ಎಂಟು ಐಪಿಎಲ್ ಪಂದ್ಯಗಳಲ್ಲಿ 10.85 ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಫಲವಾಗಿ ಕೇವಲ ಐದು ವಿಕೆಟ್ಗಳನ್ನು ಮಾತ್ರ ಪಡೆದಿದ್ದರು. ಹೀಗಾಗಿ ಉಮ್ರಾನ್​ರನ್ನು ಸನ್‌ರೈಸರ್ಸ್ ಹೈದರಾಬಾದ್‌ ಫ್ರಾಂಚೈಸ್ ಬೆಂಚ್ ಕಾಯಲು ಬಿಟ್ಟಿತ್ತು. ಇದೀಗ ಉಮ್ರಾನ್ ಮಲಿಕ್ ಕೂಡ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದ್ದು ಟ್ವಿಟರ್​ನಲ್ಲಿ ಈ ರೀತಿಯಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us