IND vs ENG: ಜಡೇಜಾ ಏಕಾಂಗಿ ಹೋರಾಟ ವ್ಯರ್ಥ; ಲಾರ್ಡ್ಸ್ ಟೆಸ್ಟ್ ಸೋತ ಟೀಂ ಇಂಡಿಯಾ
England Beats India by 22 Runs at Lords: ಲಾರ್ಡ್ಸ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭಾರತವನ್ನು 22 ರನ್ಗಳಿಂದ ಸೋಲಿಸಿದೆ. ಸೋಮವಾರದ ಕೊನೆಯ ಸೆಷನ್ನಲ್ಲಿ ಭಾರತವನ್ನು 170 ರನ್ಗಳಿಗೆ ಆಲೌಟ್ ಮಾಡಿ ಇಂಗ್ಲೆಂಡ್ 2-1 ಮುನ್ನಡೆ ಸಾಧಿಸಿತು. ಆದಾಗ್ಯೂ ಈ ಪಂದ್ಯದಲ್ಲಿ ಜಡೇಜಾರ ಅದ್ಭುತ ಪ್ರದರ್ಶನ ಇಡೀ ವಿಶ್ವದ ಗಮನ ಸೆಳೆಯಿತು.

ಲಾರ್ಡ್ಸ್ನಲ್ಲಿ (Lords Test) ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಭಾರತವನ್ನು 22 ರನ್ಗಳಿಂದ ಸೋಲಿಸಿದೆ. ಸೋಮವಾರ ನಡೆದ ಲಾರ್ಡ್ಸ್ ಟೆಸ್ಟ್ನ ಕೊನೆಯ ದಿನದ ಕೊನೆಯ ಸೆಷನ್ನಲ್ಲಿ ಭಾರತ ತಂಡವನ್ನು 170 ರನ್ಗಳಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಈ ರೋಚಕ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಇಂಗ್ಲೆಂಡ್ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದಕ್ಕೂ ಮೊದಲು, ಬೆನ್ ಸ್ಟೋಕ್ಸ್ ತಂಡವು ಲೀಡ್ಸ್ ಟೆಸ್ಟ್ನಲ್ಲಿ ಭಾರತವನ್ನು ಐದು ವಿಕೆಟ್ಗಳಿಂದ ಸೋಲಿಸಿದರೆ, ಭಾರತ ತಂಡವು ಎರಡನೇ ಟೆಸ್ಟ್ ಪಂದ್ಯವನ್ನು 336 ರನ್ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋತರೂ, ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾರ (Ravindra Jadeja) ಆಟಕ್ಕೆ ಇಡೀ ವಿಶ್ವ ಕ್ರಿಕೆಟ್ ಸಲಾಂ ಹೊಡೆದಿದೆ.
ಗೆಲ್ಲುವ ಪಂದ್ಯ ಕೈಚೆಲ್ಲಿದ ಭಾರತ
ವಾಸ್ತವವಾಗಿ ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಕ್ಕೆ 39 ವರ್ಷಗಳ ಹಿಂದಿನ ಇತಿಹಾಸವನ್ನು ಪುನರಾವರ್ತಿಸುವ ಅವಕಾಶವಿತ್ತು. ಇದಕ್ಕೆ ಅನುಕೂಲಕರವಾಗಿ ಕೇವಲ 193 ರನ್ಗಳ ಗುರಿ ಗಿಲ್ ಪಡೆಯ ಮುಂದಿತ್ತು. ಆದಾಗ್ಯೂ ಇಡೀ ಸರಣಿಯಲ್ಲಿ ರನ್ಗಳ ಶಿಖರ ಕಟ್ಟಿದ್ದ ಟೀಂ ಇಂಡಿಯಾ ಆಟಗಾರರು, ಲಾರ್ಡ್ಸ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಆಂಗ್ಲ ವೇಗಿಗಳ ದಾಳಿಗೆ ಮಂಡಿಯೂರಿದರು. ಆದಾಗ್ಯೂ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ ನಡುವೆ ಬಾಲಂಗೋಚಿಗಳು ಗೆಲುವಿಗಾಗಿ ನೀಡಿದ ಹೋರಾಟ ಸ್ಮರಣೀಯವಾಗಿತ್ತು. ಕೊನೆಯ ಎರಡು ವಿಕೆಟ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರೊಂದಿಗೆ ರವೀಂದ್ರ ಜಡೇಜಾ ಕಟ್ಟಿದ ಜೊತೆಯಾಟ ಆಂಗ್ಲರಲ್ಲಿ ಒಂದು ಕ್ಷಣ ಸೋಲಿನ ಭಯ ಹುಟ್ಟಿಸಿತ್ತು. ಆದರೆ ಕೊನೆಗೂ ವಿಜಯಲಕ್ಷ್ಮೀ ಆಂಗ್ಲರ ಪರ ವಾಲಿದಳು.
ಕೈಹಿಡಿಯದ ರಾಹುಲ್- ಪಂತ್
ನಾಲ್ಕನೇ ದಿನದ ಅಂತ್ಯದ ವೇಳೆಗೆ ಟೀಂ ಇಂಡಿಯಾ ಪ್ರಮುಖ 4 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 58 ರನ್ಗಳನ್ನು ಗಳಿಸಿತ್ತು. ಇಲ್ಲಿಂದ ಮುಂದೆ, ಟೀಂ ಇಂಡಿಯಾದ ಗೆಲುವು ಕಷ್ಟಕರವಾಗಿ ಕಾಣಲಾರಂಭಿಸಿತು. ಆದರೂ, ನಾಲ್ಕನೇ ದಿನದಂದು 33 ರನ್ಗಳೊಂದಿಗೆ ಅಜೇಯರಾಗಿ ಮರಳಿದ್ದ ಕೆಎಲ್ ರಾಹುಲ್ ಮೇಲೆ ಎಲ್ಲರ ಕಣ್ಣುಗಳಿದ್ದವು. ರಾಹುಲ್ ಜೊತೆಗೆ ರಿಷಭ್ ಪಂತ್ ದಿನದಾಟವನ್ನು ಆರಂಭಿಸಿದಾಗ ಇವರಿಬ್ಬರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಈ ಹಿಂದೆಯೂ ಸಾಕಷ್ಟು ಬಾರಿ ಇಂತಹದ್ದೇ ಪರಿಸ್ಥಿತಿ ಇದ್ದಾಗ ರಿಷಭ್ ಪಂತ್ ಏಕಾಂಗಿಯಾಗಿ ನಿಂತು ಪಂದ್ಯ ಗೆಲ್ಲಿಸಿಕೊಟ್ಟಿದ್ದರಿಂದ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದರೆ ಕೊನೆಯ ದಿನದ ಮೂರನೇ ಓವರ್ನಲ್ಲಿ, ಜೋಫ್ರಾ ಆರ್ಚರ್ ಎಸೆದ ಅದ್ಭುತ ಚೆಂಡಿಗೆ ಪಂತ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಈ ಭರವಸೆಗಳಿಗೆ ದೊಡ್ಡ ಹೊಡೆತ ನೀಡಿದರು. ಕೇವಲ ಮೂರು ಓವರ್ಗಳ ನಂತರ, ಬೆನ್ ಸ್ಟೋಕ್ಸ್ ರಾಹುಲ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡುವ ಮೂಲಕ ಭಾರತದ ಭರವಸೆಯನ್ನು ಕೊನೆಗೊಳಿಸಿದರು.
ಬಾಲಂಗೋಚಿಗಳ ಅಮೋಘ ಪ್ರದರ್ಶನ
ಇದಾದ ನಂತರ, ವಾಷಿಂಗ್ಟನ್ ಸುಂದರ್ ಕೂಡ ಪೆವಿಲಿಯನ್ಗೆ ಮರಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ, ಆರ್ಚರ್ ತಮ್ಮದೇ ಬೌಲಿಂಗ್ನಲ್ಲಿ ಡೈವ್ ಮಾಡುವ ಮೂಲಕ ಅದ್ಭುತವಾದ ಕ್ಯಾಚ್ ಹಿಡಿದು ಸುಂದರ್ ಅವರನ್ನು ಪೆವಿಲಿಯನ್ಗೆ ವಾಪಸ್ ಕಳುಹಿಸಿದರು. ಹೀಗಾಗಿ ಕೇವಲ 82 ರನ್ಗಳಿಗೆ 7 ವಿಕೆಟ್ಗಳ ಪತನದೊಂದಿಗೆ ತಂಡದ ಸೋಲು ಖಚಿತವಾಗಿತ್ತು. ಆದಾಗ್ಯೂ, ಈ ಸಮಯದಲ್ಲಿ, ರವೀಂದ್ರ ಜಡೇಜಾ ಮತ್ತು ನಿತೀಶ್ ಕುಮಾರ್ ರೆಡ್ಡಿ ನಡುವಿನ 30 ರನ್ಗಳ ಪಾಲುದಾರಿಕೆ ಸ್ವಲ್ಪ ಭರವಸೆಯನ್ನು ಹುಟ್ಟುಹಾಕಿತು, ಆದರೆ ಮೊದಲ ಸೆಷನ್ನ ಕೊನೆಯ ಓವರ್ನಲ್ಲಿ ಕ್ರಿಸ್ ವೋಕ್ಸ್, ನಿತೀಶ್ ರೆಡ್ಡಿ ವಿಕೆಟ್ ಪಡೆದು ತಂಡದ ಗೆಲುವಿನ ಕನಸಿಗೆ ನೀರೆರಚಿದರು.
IND vs ENG: ರವೀಂದ್ರ ಜಡೇಜಾ ಮೇಲೆ ಒಮ್ಮೆಲೆ ಮುಗಿಬಿದ್ದ ಇಂಗ್ಲೆಂಡ್ ಆಟಗಾರರು; ವಿಡಿಯೋ ನೋಡಿ
ಏಕಾಂಗಿ ಹೋರಾಟ ನೀಡಿದ ಜಡೇಜಾ
ಎರಡನೇ ಸೆಷನ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ 112 ರನ್ಗಳಿಗೆ ಪ್ರಮುಖ 8 ವಿಕೆಟ್ಗಳನ್ನು ಕಳೆದುಕೊಂಡಿದ್ದರಿಂದ ಆಂಗ್ಲರು ಬಹುಬೇಗನೇ ಪಂದ್ಯ ಗೆಲ್ಲುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಟೀಂ ಇಂಡಿಯಾದ ಬಾಲಂಗೋಚಿಗಳು ಆಂಗ್ಲರನ್ನು ಹೈರಾಣಾಗಿಸಿದರು. ಹಿಂದೆಂದೂ ಈ ರೀತಿಯ ತಾಳ್ಮೆಯ ಬ್ಯಾಟಿಂಗ್ ಮಾಡಿರದ ಜಸ್ಪ್ರೀತ್ ಬುಮ್ರಾ ಈ ಇನ್ನಿಂಗ್ಸ್ನಲ್ಲಿ 54 ಎಸೆತಗಳನ್ನು ಎದುರಿಸಿದರೆ, ಮೊಹಮ್ಮದ್ ಸಿರಾಜ್ ಕೂಡ 30 ಎಸೆತಗಳನ್ನು ಎದುರಿಸಿದರು. ಆದಾಗ್ಯೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ಎಚ್ಚರಿಕೆಯಿಂದ ಆಡಿದಿದ್ದರೆ, ಈ ಪಂದ್ಯದ ಫಲಿತಾಂಶವೇ ಬೇರೆಯದ್ದಾಗಿರುತಿತ್ತು. ತಂಡದ ಪರ ಏಕಾಂಗಿ ಹೋರಾಟ ನಡೆಸಿ ಅಜೇಯರಾಗಿ ಉಳಿದ ಜಡೇಜಾ 181 ಎಸೆತಗಳನ್ನು ಎದುರಿಸಿ 61 ರನ್ ಕಲೆಹಾಕಿ ಬೇಸರದಿಂದ ಪೆವಿಲಿಯನ್ತ್ತ ಹೆಜ್ಜೆಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:33 pm, Mon, 14 July 25
