
ಭಾರತ ಹಾಗೂ ಶ್ರೀಲಂಕಾ ನಡುವಿನ ಬಹುನಿರೀಕ್ಷಿತ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಶ್ರೀಲಂಕಾದ ಮಾಜಿ ಆಲ್ ರೌಂಡರ್ ಫರ್ವೀಝ್ ಮಹರೂಫ್ ಕಠಿಣ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅದು ಸಹ ‘ಕಿಂಗ್ ಆಫ್ ಗಾಲೆ’ಯ ಎಚ್ಚರಿಕೆ!.
34 ವರ್ಷದ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪ್ರಸ್ತುತ ಶ್ರೀಲಂಕಾ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇವರನ್ನೇ ಕಿಂಗ್ ಆಫ್ ಗಾಲೆ ಎಂದು ಬಣ್ಣಿಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗಾಲೆ ಮೈದಾನದಲ್ಲಿ ಪ್ರಭಾತ್ ಅವರ ಪ್ರದರ್ಶನ.
ಇದೇ ಕಾರಣದಿಂದಾಗಿ ಫರ್ವೀಝ್ ಮಹರೂಫ್ ‘ಕಿಂಗ್ ಆಫ್ ಗಾಲೆ’ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಗಾಲೆ ಕ್ರೀಡಾಂಗಣದ ಪಿಚ್ಗಳು ಸಾಂಪ್ರದಾಯಿಕವಾಗಿ ಸ್ಪಿನ್ನರ್ಗಳಿಗೆ ಸ್ವರ್ಗ ಎನಿಸಿಕೊಂಡಿವೆ. ಇಲ್ಲಿನ ಒಣ ಹವೆ ಮತ್ತು ಒರಟಾದ ಮೇಲ್ಮೈಯಿಂದಾಗಿ ಚೆಂಡು ಬೇಗನೇ ಸವೆಯುತ್ತದೆ. ಇದು ಸ್ಪಿನ್ ಮಾತ್ರವಲ್ಲದೆ ರಿವರ್ಸ್ ಸ್ವಿಂಗ್ಗೂ ಹೆಚ್ಚಿನ ನೆರವು ನೀಡುತ್ತದೆ. ಈ ಭೀತಿಯನ್ನು ಎದುರಿಸಲು ಭಾರತದ ಯುವ ಬ್ಯಾಟರ್ ಶುಭ್ಮನ್ ಗಿಲ್ ಈಗಾಗಲೇ ನೆಟ್ಸ್ನಲ್ಲಿ ಹಳೆಯ ಕೂಕಬುರ್ರಾ ಚೆಂಡುಗಳನ್ನು ಬಳಸಿ ವಿಶೇಷ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.
ಈ ಮಹತ್ವದ ಸರಣಿಗೂ ಮುನ್ನ ಭಾರತ ತಂಡಕ್ಕೆ ಗಾಯದ ದೊಡ್ಡ ಆಘಾತ ಎದುರಾಗಿದೆ. ಪ್ರಮುಖ ಆಟಗಾರರಾದ ಸಾಯಿ ಸುದರ್ಶನ್ (ಕಾಲ್ಬೆರಳ ಗಾಯ), ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (ಮೊಣಕಾಲು ಗಾಯ) ಮತ್ತು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ (ಹ್ಯಾಮ್ಸ್ಟ್ರಿಂಗ್ ಗಾಯ) ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಸ್ಪಿನ್ ಪಿಚ್ಗಳನ್ನು ಚೆನ್ನಾಗಿ ಆಡಬಲ್ಲ ಸರ್ಫರಾಝ್ ಖಾನ್, ಬೌಲರ್ಗಳಾದ ಸರಂಶ್ ಜೈನ್ ಮತ್ತು ಆಖಿಬ್ ನಬಿ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಭಾರತ vs ಬಾಂಗ್ಲಾ ಸರಣಿ ಡೌಟ್: ಡೇಟ್ ಫಿಕ್ಸ್ ಮಾಡಿದ ಅಫ್ಘಾನಿಸ್ತಾನ್!
ಒಟ್ಟಾರೆಯಾಗಿ, ಯಾವುದೇ ಉಪಖಂಡದ ಪ್ರವಾಸದಲ್ಲಿ ಸ್ಪಿನ್ ಸವಾಲನ್ನು ಎದುರಿಸುವುದು ಭಾರತೀಯ ಬ್ಯಾಟರ್ಗಳಿಗೆ ಹೊಸದೇನಲ್ಲ. ಆದರೆ, ಗಾಲೆ ಮೈದಾನದಲ್ಲಿ ಪ್ರಭಾತ್ ಜಯಸೂರ್ಯ ಸೃಷ್ಟಿಸಿರುವ ದಾಖಲೆಗಳು ಮತ್ತು ಪ್ರಸ್ತುತ ಭಾರತ ತಂಡವನ್ನು ಕಾಡುತ್ತಿರುವ ಗಾಯದ ಸಮಸ್ಯೆಗಳು ಈ ಸರಣಿಯನ್ನು ಮತ್ತಷ್ಟು ರೋಚಕಗೊಳಿಸಿವೆ.