AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ; ಪ್ರಿಯಾಂಕ್ ಪಾಂಚಾಲ್​ಗೆ ನಾಯಕತ್ವ

ಈ ಸರಣಿಯಲ್ಲಿ ಬ್ಯಾಟಿಂಗ್ ವಿಭಾಗವನ್ನು ಬಂಗಾಳದ ನಾಯಕ ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್ ಮತ್ತು ಸರ್ಫರಾಜ್ ಖಾನ್ ನಿರ್ವಹಿಸಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ; ಪ್ರಿಯಾಂಕ್ ಪಾಂಚಾಲ್​ಗೆ ನಾಯಕತ್ವ
Priyank Panchal
TV9 Web
| Updated By: ಪೃಥ್ವಿಶಂಕರ|

Updated on:Aug 24, 2022 | 9:13 PM

Share

ಜಿಂಬಾಬ್ವೆ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿರುವ ತಂಡ ಏಷ್ಯಾಕಪ್​ಗಾಗಿ ಯುಎಇಗೆ ಹಾರಿದೆ. ಮತ್ತೊಂದೆಡೆ ಭಾರತ ಎ ತಂಡ ನ್ಯೂಜಿಲೆಂಡ್ ಎ ವಿರುದ್ಧದ ಸರಣಿಯನ್ನು ಆಡಲಿದ್ದು, ಅದಕ್ಕಾಗಿ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಪ್ರಿಯಾಂಕ್ ಪಾಂಚಾಲ್ (Priyank Panchal) ಅವರಿಗೆ ಭಾರತ ಎ ತಂಡದ ನಾಯಕತ್ವ ನೀಡಲಾಗಿದೆ. ಈ ಸರಣಿಯಲ್ಲಿ ಭಾರತ ಎ ತಂಡ 4 ದಿನಗಳ 3 ಪಂದ್ಯಗಳನ್ನು ಮತ್ತು ಮುಂದಿನ ತಿಂಗಳು ನ್ಯೂಜಿಲೆಂಡ್ ಎ ವಿರುದ್ಧ ಅನೇಕ ಏಕದಿನ ಪಂದ್ಯಗಳನ್ನು ಆಡಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ 4 ದಿನಗಳ ಪಂದ್ಯಗಳು ನಡೆಯಲಿವೆ. ಬಳಿಕ ಏಕದಿನ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿದ್ದು, ಈ ಸರಣಿ ಮುಗಿದ ಬಳಿಕ ODI ತಂಡವನ್ನು ಪ್ರಕಟಿಸಲಾಗುವುದು.

ಪ್ರಿಯಾಂಕ್ ಭಾರತ್ ಎ ತಂಡದ ಸಾಮಾನ್ಯ ಸದಸ್ಯರಾಗಿದ್ದು, ಈ ವರ್ಷದ ಆರಂಭದಲ್ಲಿ ಟೀಂ ಇಂಡಿಯಾದ ಹಿರಿಯರ ಟೆಸ್ಟ್ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ತೆರಳಿದ್ದರು. ಈ ಸರಣಿಯಲ್ಲಿ ಬ್ಯಾಟಿಂಗ್ ವಿಭಾಗವನ್ನು ಬಂಗಾಳದ ನಾಯಕ ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್ ಮತ್ತು ಸರ್ಫರಾಜ್ ಖಾನ್ ನಿರ್ವಹಿಸಲಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ ಮಿಂಚಿದ ಹೈದರಾಬಾದ್‌ನ ಯುವ ಆಟಗಾರ ತಿಲಕ್ ವರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗದ ಜವಾಬ್ದಾರಿಯು ಕನ್ನಡಿಗ ಪ್ರಸಿದ್ಧ್ ಕೃಷ್ಣ, ಅರ್ಜನ್ ನಾಗ್ವಾಸ್ವಾಲಾ, ಯುವ ಬೌಲರ್‌ಗಳಾದ ಉಮ್ರಾನ್ ಮಲಿಕ್, ಯಶ್ ದಯಾಲ್, ರಾಹುಲ್ ಚಹಾರ್, ಸೌರಭ್ ಕುಮಾರ್ ಮತ್ತು ಕುಲದೀಪ್ ಯಾದವ್ ಅವರ ಮೇಲಿದೆ. ಕೊರೊನಾ ನಂತರ ಭಾರತದಲ್ಲಿ ಎ ತಂಡದ ಮೊದಲ ಪ್ರವಾಸ ಇದಾಗಿದೆ.

ಈ ಹಿಂದೆ ಬಂದಿದ್ದ ವರದಿಗಳ ಪ್ರಕಾರ, ಭಾರತ ಎ ತಂಡದ ನಾಯಕತ್ವವನ್ನು ಶುಭಮನ್ ಗಿಲ್ (Shubman Gill) ವಹಿಸಿಕೊಳ್ಳಲಿದ್ದಾರೆ ಎಂಬುದಾಗಿತ್ತು. ಆದರೆ, ಗಿಲ್ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿಲ್ಲ. ವರದಿಗಳ ಪ್ರಕಾರ, ಕೌಂಟಿ ಚಾಂಪಿಯನ್‌ಶಿಪ್‌ನ ಉಳಿದ ಪಂದ್ಯಗಳಲ್ಲಿ ಗಿಲ್ ಗ್ಲಾಮೊರ್ಗಾನ್ ಪರ ಆಡಲಿದ್ದಾರೆ. ಗಿಲ್ ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚೊಚ್ಚಲ ಶತಕವನ್ನೂ ಬಾರಿಸಿದ್ದರು. ಹೀಗಾಗಿ ಗಿಲ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುವ ಸಾಧ್ಯತೆಗಳಿವೆ.

ಭಾರತ ತಂಡ: ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕೆಎಸ್ ಭರತ್, ಉಪೇಂದ್ರ ಯಾದವ್, ಕುಲದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಾಹರ್, ಪ್ರಸಿದ್ಧ್ ಕೃಷ್ಣ, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್, ಯಶ್ ದಯಾಳ್, ಅರ್ಜನ್ ನಾಗವಾಸ್ವಾಲಾ

Published On - 9:07 pm, Wed, 24 August 22