Maharaja Trophy 2024: ಲಯನ್ಸ್​ಗೆ ಸತತ 2ನೇ ಗೆಲುವು ತಂದ ಅಭಿನವ್- ಶಿವರಾಜ್ ಆಟ

Maharaja Trophy 2024: ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ 22ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡ​ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಶಿವಮೊಗ್ಗ ಒಂದು ಸ್ಥಾನ ಮೇಲೇರಿ ಅಂದರೆ ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಮುಂಬಟ್ತಿ ಪಡೆಯುವುದರೊಂದಿಗೆ ಮುಂದಿನ ಸುತ್ತಿಗೆ ತನ್ನ ಹಾದಿಯನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ

Maharaja Trophy 2024: ಲಯನ್ಸ್​ಗೆ ಸತತ 2ನೇ ಗೆಲುವು ತಂದ ಅಭಿನವ್- ಶಿವರಾಜ್ ಆಟ
ಶಿವಮೊಗ್ಗ ಲಯನ್ಸ್
Follow us
|

Updated on:Aug 25, 2024 | 10:57 PM

ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ 22ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ತಂಡ​ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಶಿವಮೊಗ್ಗ ಒಂದು ಸ್ಥಾನ ಮೇಲೇರಿ ಅಂದರೆ ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಮುಂಬಡ್ತಿ ಪಡೆಯುವುದರೊಂದಿಗೆ ಮುಂದಿನ ಸುತ್ತಿಗೆ ತನ್ನ ಹಾದಿಯನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ತಂಡ 20 ಓವರ್​ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶಿವಮೊಗ್ಗ ತಂಡ 7 ವಿಕೆಟ್​ಗಳನ್ನು ಕಳೆದುಕೊಂಡು ಇನ್ನು 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

ಅಭಿನವ್​ಗೆ ಆರೆಂಜ್ ಕ್ಯಾಪ್

ನಿನ್ನೆ ನಡೆದ ಹುಬ್ಬಳ್ಳಿ ಟೈಗರ್ಸ್​ ವಿರುದ್ಧದ ಪಂದ್ಯದಲ್ಲೂ ಗೇಮ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದ ಅಭಿನವ್ ಮನೋಹರ್, ಈ ಪಂದ್ಯದಲ್ಲೂ ತಂಡವನ್ನು ಏಕಾಂಗಿಯಾಗಿ ಗೆಲುವಿನ ಸನಿಹಕ್ಕೆ ತಂದರು. ನಿನ್ನೆಯ ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್​ಗಳ ನೆರವಿನಿಂದ ಬರೋಬ್ಬರಿ 70 ರನ್ ಚಚ್ಚಿದ್ದ ಅಭಿನವ್, ಇಂದಿನ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 5 ಸಿಕ್ಸರ್​ಗಳ ಸಹಿತ 43 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಈ ಟೂರ್ನಿಯಲ್ಲಿ 372 ರನ್ ಕಲೆಹಾಕಿರುವ ಅಭಿನವ್ ಆರೆಂಜ್ ಕ್ಯಾಪ ಅನ್ನು ತನ್ನದಾಗಿಸಿಕೊಂಡರು. ಇದುವರೆಗೆ ಈ ಕ್ಯಾಪ್ ಮೈಸೂರು ತಂಡದ ನಾಯಕ ಕರುಣ್ ನಾಯರ್ ಅವರ ಬಳಿ ಇತ್ತು.

157 ರನ್ ಕಲೆಹಾಕಿದ ಮಂಗಳೂರು

ಮೊದಲು ಬ್ಯಾಟ್ ಮಾಡಿದ ಮಂಗಳೂರು ತಂಡ 14 ರನ್​​ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ 27 ರನ್​ಗಳಿಗೆ 2ನೇ ವಿಕೆಟ್ ಪತನವಾಯಿತು. ಆ ಬಳಿಕ ನಾಯಕನ ಇನ್ನಿಂಗ್ಸ್ ಆಡಿದ ನಿಖಿನ್ ಜೋಶ್ 37 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 57 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಶ್ರೇಯಸ್ ಗೋಪಾಲ್ 19 ರನ್, ದರ್ಶನ್ 18 ರನ್, ಲೋಚನ್ ಗೌಡ 19 ರನ್​ಗಳ ಇನ್ನಿಂಗ್ಸ್ ಆಡಿ ತಂಡವನ್ನು ಈ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

ಗೆಲುವಿಗೆ ಕಾರಣರಾದ ಅಭಿನವ್

ಈ ಗುರಿ ಬೆನ್ನಟ್ಟಿದ ಮಂಗಳೂರು ತಂಡಕ್ಕೆ ಎಂದಿನಂತೆ ಆಮೆಗತಿಯ ಆರಂಭ ಸಿಕ್ಕಿತು. ಕೇವಲ 10 ರನ್​ಗಳಿಗೆ ಮೊದಲ ವಿಕೆಟ್ ಪತನವಾಯಿತು. ನಂತರ ನವೀನ್ ಹಾಗೂ ನಿಹಾಲ್ 2ನೇ ವಿಕೆಟ್​ಗೆ 30 ರನ್ ಸೇರಿಸಿದರಾದರೂ ಇದಕ್ಕಾಗಿ ಇಡೀ ಪವರ್ ಪ್ಲೇ ಅನ್ನು ತೆಗೆದುಕೊಂಡರು. ಹೀಗಾಗಿ ತಂಡ ಒತ್ತಡಕ್ಕೆ ಸಿಲುಕಿತು. ನಾಯಕ ನಿಹಾಲ್ ವಿಕೆಟ್ ಬಳಿಕ ಕ್ರೀಸ್​ಗಿಳಿದ ಮನೋಹರ್ ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ನಡೆಸಿ, ರನ್ ಹಾಗೂ ಚೆಂಡುಗಳ ಅಂತರವನ್ನು ಕಡಿಮೆ ಮಾಡಿದರು. ಇದರ ಲಾಭ ಪಡೆದ ಇತರ ಬ್ಯಾಟ್ಸ್​ಮನ್​ಗಳು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಪಂದ್ಯದಲ್ಲಿ ಅಭಿನವ್ ಹೊರತಾಗಿ ನವೀನ್ 37 ರನ್ ಹಾಗೂ ಕೊನೆಯಲ್ಲಿ ಶಿವರಾಜ್ 24 ರನ್​ಗಳ ಮಹತ್ವದ ಇನ್ನಿಂಗ್ಸ್ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Sun, 25 August 24