48 ಸಿಕ್ಸ್, 459 ರನ್ಸ್: ಅನ್ವಯ್ ದ್ರಾವಿಡ್ ಆರ್ಭಟಕ್ಕೆ ಸಿಕ್ತು ಪ್ರಶಸ್ತಿ

Rahul Dravid Son Anvay Dravid: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಅಂಡರ್-16 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. 2024 ರಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಮಿಂಚಿದ್ದ ಅನ್ವಯ್ ಇದೀಗ ಮತ್ತೊಮ್ತೆ ಕೆಎಸ್​ಸಿಎ ಪ್ರಶಸ್ತಿಗೆ ಭಾಜನರಾಗಿದ್ದಾರೆ.

48 ಸಿಕ್ಸ್, 459 ರನ್ಸ್: ಅನ್ವಯ್ ದ್ರಾವಿಡ್ ಆರ್ಭಟಕ್ಕೆ ಸಿಕ್ತು ಪ್ರಶಸ್ತಿ
Anvay - Dravid

Updated on: Oct 06, 2025 | 9:04 AM

ಟೀಮ್ ಇಂಡಿಯಾ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಸುಪುತ್ರ ಅನ್ವಯ್ ದ್ರಾವಿಡ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಭರ್ಜರಿ ಪ್ರದರ್ಶನ. ಈ ಪ್ರದರ್ಶನದೊಂದಿಗೆ 16 ವರ್ಷದ ಅನ್ವಯ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಅಕ್ಟೋಬರ್ 5 ರಂದು ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಅನ್ವಯ್ ದ್ರಾವಿಡ್ ಅತ್ಯುತ್ತಮ ಕಿರಯ ಬ್ಯಾಟರ್ ಪ್ರಶಸ್ತಿ ಪಡೆದಿದ್ದಾರೆ. ಅಂಡರ್ 16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಪರ ಅತಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಕೆಎಸ್‌ಸಿಎ ಅನ್ವಯ್​ಗೆ ಈ ಪ್ರಶಸ್ತಿ ನೀಡಿದೆ.

ಈ ಬಾರಿಯ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-16 ತಂಡದ ಪರ ಕಣಕ್ಕಿಳಿದ ಅನ್ವಯ್ ಎಂಟು ಇನಿಂಗ್ಸ್​ಗಳಿಂದ ಒಟ್ಟು 459 ರನ್ ಕಲೆಹಾಕಿದ್ದಾರೆ.  ಈ ವೇಳೆ ಅವರ ಬ್ಯಾಟ್​ನಿಂದ ಎರಡು ಭರ್ಜರಿ ಶತಕಗಳು ಮೂಡಿಬಂದಿವೆ. ಇದರ ನಡುವೆ 48 ಸಿಕ್ಸ್ ಹಾಗೂ ಫೋರ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ  91.80 ಸರಾಸರಿಯಲ್ಲಿ ರನ್​ಗಳಿಸಿ ಈ ಬಾರಿಯ ವಿಜಯ ಮರ್ಚೆಂಟ್ ಟೂರ್ನಿಯಲ್ಲಿ ಕರ್ನಾಟಕ ಪರ ಅತ್ಯಧಿಕ ರನ್​ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಈ ಭರ್ಜರಿ ಪ್ರದರ್ಶನ ಫಲವಾಗಿ ಇದೀಗ ಕರ್ನಾಟಕದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿ ಅನ್ವಯ್ ಪಾಲಾಗಿದೆ. ಅಂದಹಾಗೆ ಅನ್ವಯ್ ದ್ರಾವಿಡ್ ಈ ಪ್ರಶಸ್ತಿ ಪಡೆಯುತ್ತಿರುವುದು ಇದೇ ಮೊದಲೇನಲ್ಲ. 2024 ರಲ್ಲಿ ನಡೆದ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಒಟ್ಟು 357 ರನ್​ಗಳಿಸಿ ಕಳೆದ ವರ್ಷವೇ ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಮತ್ತೊಮ್ಮೆ ಕರ್ನಾಟಕದ ಕಿರಿಯ ಬ್ಯಾಟರ್ ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.

ಮಯಾಂಕ್​, ಸ್ಮರಣ್​ಗೆ ಪ್ರಶಸ್ತಿ:

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಮಯಾಂಕ್ ಅಗರ್ವಾಲ್ ಏಕದಿನ ಬ್ಯಾಟರ್  ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮಯಾಂಕ್ 93 ರ ಸರಾಸರಿಯಲ್ಲಿ ಒಟ್ಟು 651 ರನ್ ಗಳಿಸಿ ಮಿಂಚಿದ್ದರು.

ರಣಜಿ ಟ್ರೋಫಿಯಲ್ಲಿನ ಪ್ರದರ್ಶನಕ್ಕಾಗಿ ಯುವ ಆಟಗಾರ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಪ್ರಶಸ್ತಿ ಪಡೆದಿದ್ದಾರೆ. ಸ್ಮರಣ್ ಈ ಬಾರಿಯ ರಣಜಿ ಟೂರ್ನಿಯಲ್ಲಿ  ಎರಡು ಶತಕಗಳೊಂದಿಗೆ 64.50 ರ ಸರಾಸರಿಯಲ್ಲಿ 516 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ಅಬ್ಬರಕ್ಕೆ ವಿರಾಟ್ ಕೊಹ್ಲಿಯ ಸಾರ್ವಕಾಲಿಕ ರ‍್ಯಾಂಕಿಂಗ್ ಷೇಕ್ ಷೇಕ್ 

ಹಾಗೆಯೇ ಸೈಯದ್ಯ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್​ ಕಲೆಹಾಕಿದ ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಎಲ್. ಶ್ರೀಜಿತ್ ಅವರು ಈ ಬಾರಿಯ ಟಿ20 ಬ್ಯಾಟರ್ ಪ್ರಶಸ್ತಿ ಪಡೆದಿದ್ದಾರೆ.

 

 

Published On - 9:03 am, Mon, 6 October 25