
ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿರುವ ಟೀಮ್ ಇಂಡಿಯಾಗೆ (Team India) ಸೂರತ್ ಕೈಗಾರಿಕೋದ್ಯಮಿ ಮತ್ತು ರಾಜ್ಯಸಭಾ ಸಂಸದ ಗೋವಿಂದ್ ಧೋಲಾಕಿಯಾ ಬಹುಮಾನಗಳನ್ನು ಘೋಷಿಸಿದ್ದಾರೆ . ಶ್ರೀ ರಾಮಕೃಷ್ಣ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಮತ್ತು ಅಧ್ಯಕ್ಷ ಧೋಲಾಕಿಯಾ, ವಿಜೇತ ತಂಡದ ಸದಸ್ಯರಿಗೆ ವಜ್ರಾಭರಣ ಮತ್ತು ಸೌರ ಫಲಕಗಳನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯಕ್ಕೂ ಮುನ್ನ ಧೋಲಾಕಿಯಾ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಪತ್ರ ಬರೆದು, ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಕೈಯಿಂದ ತಯಾರಿಸಿದ ನೈಸರ್ಗಿಕ ವಜ್ರಾಭರಣಗಳನ್ನು ನೀಡುವ ಮೂಲಕ ತಂಡದ ಪ್ರತಿಭೆ ಮತ್ತು ದೃಢಸಂಕಲ್ಪವನ್ನು ಗೌರವಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದರು.
ಹೆಚ್ಚುವರಿಯಾಗಿ, ಕ್ರಿಕೆಟಿಗರ ಮನೆಗಳನ್ನು ಸೌರ ಫಲಕಗಳಿಂದ ಸಜ್ಜುಗೊಳಿಸುವ ಯೋಜನೆಗಳನ್ನು ಅವರು ಬಹಿರಂಗಪಡಿಸಿದರು. ಧೋಲಾಕಿಯಾ ತಮ್ಮ ಈ ಪತ್ರದಲ್ಲಿ, “ಟೀಮ್ ಇಂಡಿಯಾ ಆಟಗಾರ್ತಿಯರು ನಮ್ಮ ದೇಶಕ್ಕೆ ಬೆಳಕನ್ನು ತರುವಂತೆಯೇ, ಅವರ ಜೀವನವೂ ಯಾವಾಗಲೂ ಪ್ರಕಾಶಮಾನವಾಗಿ ಬೆಳಗಲಿ” ಎಂದು ಬರೆದಿದ್ದಾರೆ.
ಈ ಮೂಲಕ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ನೈಸರ್ಗಿಕ ವಜ್ರಾಭರಣಗಳನ್ನು ಹಾಗೂ ಅವರ ಮನೆಗಗಳಿಗೆ ಸೌರಫಲಕಗಳ ಯೋಜನೆಯನ್ನು ನೀಡುವುದಾಗಿ ಗೋವಿಂದ್ ಧೋಲಾಕಿಯಾ ತಿಳಿಸಿದ್ದಾರೆ. ಅದರಂತೆ ಶೀಘ್ರದಲ್ಲೇ ವಿಶ್ವಕಪ್ ವಿಜೇತರಿಗೆ ಧೋಲಾಕಿಯಾ ಕಡೆಯಿಂದ ಭರ್ಜರಿ ಉಡುಗೊರೆ ಸಿಗುವ ನಿರೀಕ್ಷೆಯಿದೆ.
ಇನ್ನು ಟೀಮ್ ಇಂಡಿಯಾದ ಈ ಗಮನಾರ್ಹ ಸಾಧನೆಗಾಗಿ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸೋಮವಾರ ತಂಡಕ್ಕೆ 51 ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಈ ಬಹುಮಾನವು ಎಲ್ಲಾ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಿಗೆ ಹಂಚಲಾಗುತ್ತದೆ. ಹಾಗೆಯೇ ಪ್ರಶಸ್ತಿ ವಿಜೇತ ಭಾರತೀಯ ತಂಡಕ್ಕೆ ಐಸಿಸಿಯಿಂದ 39.55 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
ಇದನ್ನೂ ಓದಿ: IPL 2026: ಹೆಚ್ಚುವರಿ 10 ಪಂದ್ಯಗಳು… ಐಪಿಎಲ್ನಲ್ಲಿ ಮಹತ್ವದ ಬದಲಾವಣೆ
ಇದೀಗ ಕೈಗಾರಿಕೋದ್ಯಮಿ ಮತ್ತು ರಾಜ್ಯಸಭಾ ಸಂಸದ ಗೋವಿಂದ್ ಧೋಲಾಕಿಯಾ ಕಡೆಯಿಂದಲೂ ಟೀಮ್ ಇಂಡಿಯಾ ಆಟಗಾರ್ತಿಯರಿಗೆ ಭರ್ಜರಿ ಉಡುಗೊರೆ ಸಿಗಲಿದೆ. ಹಾಗೆಯೇ ಧೋಲಾಕಿಯಾ ಅವರ ಈ ನಡೆಯ ಬೆನ್ನಲ್ಲೇ ಮತ್ತಷ್ಟು ಉದ್ಯಮಿಗಳೂ ಕೂಡ ಭಾರತ ತಂಡಕ್ಕೆ ಬಂಪರ್ ಗಿಫ್ಟ್ ಘೋಷಿಸುವ ಸಾಧ್ಯತೆಯಿದೆ.