
2026 ರಲ್ಲಿ ಕ್ರಿಕೆಟ್ ಲೋಕದಲ್ಲಿ ಪ್ರಮುಖ ಐಸಿಸಿ (ICC) ಈವೆಂಟ್ಗಳು ನಡೆಯಲಿವೆ. ಈ ಪಂದ್ಯಾವಳಿಗಳು ಜನವರಿಯಿಂದಲೇ ಪ್ರಾರಂಭವಾಗುತ್ತಿದ್ದು, ಅಂಡರ್-19 ಪುರುಷರ ವಿಶ್ವಕಪ್ ಮತ್ತು ಆ ನಂತರ 2026 ರ ಪುರುಷರ ಟಿ20 ವಿಶ್ವಕಪ್ (ICC World Cup 2026) ಪ್ರಮುಖ ಪಂದ್ಯಾವಳಿಗಳಾಗಿವೆ. ಭಾರತ ತಂಡವು ಎರಡೂ ಪಂದ್ಯಾವಳಿಗಳಲ್ಲಿ ಪ್ರಶಸ್ತಿ ಸ್ಪರ್ಧಿಗಳಾಗಿ ಪ್ರವೇಶಿಸಲಿದೆ. ಈ ಎರಡೂ ತಂಡಗಳಲ್ಲೂ ಪ್ರತಿಭಾವಂತೆ ಆಟಗಾರರಿದ್ದಾರೆ. ಆದಾಗ್ಯೂ, ಈ ವಿಶ್ವಕಪ್ಗಳ ಆರಂಭಕ್ಕೂ ಮೊದಲು, ಈ ಎರಡೂ ತಂಡಗಳ ನಾಯಕರು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದ್ದಾರೆ. ಒಂದೆಡೆ ಹಿರಿಯರ ಪುರುಷರ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ರನ್ ಗಳಿಸಲು ಹೆಣಗಾಡುತ್ತಿದ್ದರೆ, ಇನ್ನೊಂದೆಡೆ ಅಂಡರ್-19 ತಂಡದ ನಾಯಕ ಆಯುಷ್ ಮ್ಹಾತ್ರೆ (Ayush Mhatre) ಕೂಡ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ.
ಡಿಸೆಂಬರ್ 21 ರ ಭಾನುವಾರದಂದು, ಭಾರತದ ಅಂಡರ್-19 ತಂಡವು ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್ನಲ್ಲಿ ಸೋತಿತು. ಮುಂದಿನ ತಿಂಗಳು ನಡೆಯಲಿರುವ ಅಂಡರ್-19 ವಿಶ್ವಕಪ್ನಲ್ಲಿ ಸ್ಪರ್ಧಿಸಲಿರುವ ತಂಡ ಇದೇ ಆಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಎಲ್ಲಾ ಪಂದ್ಯಗಳಲ್ಲೂ ತಂಡವು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿತ್ತು. ಹೆಚ್ಚಿನ ಆಟಗಾರರು ಅದ್ಭುತ ಫಾರ್ಮ್ನಲ್ಲಿದ್ದರು. ಆದ್ದರಿಂದ, ಈ ಸೋಲು ತಂಡದ ಭವಿಷ್ಯದ ಬಗ್ಗೆ ಹೆಚ್ಚಿನ ಕಳವಳವನ್ನು ಉಂಟುಮಾಡಿಲ್ಲ. ಆದಾಗ್ಯೂ, ಈ ಫೈನಲ್ನಲ್ಲಿ ನಾಯಕ ಆಯುಷ್ ಮ್ಹಾತ್ರೆ ಅವರ ವೈಫಲ್ಯವು ಮತ್ತೊಮ್ಮೆ ಅವರ ಪ್ರದರ್ಶನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲ್ಲಲು 348 ರನ್ಗಳು ಬೇಕಾಗಿದ್ದವು, ಆದರೆ ಫೈನಲ್ನಲ್ಲಿ ನಾಯಕ ಆಯುಷ್ 8 ಎಸೆತಗಳಲ್ಲಿ ಕೇವಲ 2 ರನ್ಗಳಿಗೆ ಔಟಾದರು. ಇದು ಕೇವಲ ಫೈನಲ್ ಅಲ್ಲ, ಇಡೀ ಟೂರ್ನಮೆಂಟ್ನಲ್ಲಿ ಆಯುಷ್ ರನ್ ಗಳಿಸಲು ವಿಫಲರಾದರು. ಆಯುಷ್ ಮ್ಹಾತ್ರೆ ಆಡಿದ ಐದು ಇನ್ನಿಂಗ್ಸ್ಗಳಲ್ಲಿ 13 ರ ಸಾಧಾರಣ ಸರಾಸರಿಯಲ್ಲಿ ಕೇವಲ 65 ರನ್ಗಳನ್ನು ಗಳಿಸಿದರು. ಇದರಲ್ಲಿ ಅವರ ಗರಿಷ್ಠ ಸ್ಕೋರ್ 38 ರನ್ ಅಷ್ಟೆ.
ಆದರೆ ಈ ಟೂರ್ನಮೆಂಟ್ನಲ್ಲಿ ಮಾತ್ರವಲ್ಲ, ತಮ್ಮ ಅಂಡರ್-19 ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಆಡಿರುವ ಎಲ್ಲಾ ಏಕದಿನ ಪಂದ್ಯಗಳಲ್ಲಿ, ಮ್ಹಾತ್ರೆ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ 14 ಅಂಡರ್-19 ಏಕದಿನ ಪಂದ್ಯಗಳನ್ನು ಆಡಿರುವ ಆಯುಷ್ ಒಂದೇ ಒಂದು ಅರ್ಧಶತಕವಿಲ್ಲದೆ ಕೇವಲ 143 ರನ್ ಗಳಿಸಿದ್ದಾರೆ. ಪರಿಣಾಮವಾಗಿ, ಮುಂದಿನ ತಿಂಗಳು ನಡೆಯಲಿರುವ ಅಂಡರ್-19 ವಿಶ್ವಕಪ್ನಲ್ಲಿ ಅವರು ಟೀಂ ಇಂಡಿಯಾಕ್ಕೆ ಪ್ರಮುಖ ಚಿಂತೆಯಾಗಿ ಪರಿಣಮಿಸಿದ್ದಾರೆ.
ನಾಯಕತ್ವ ವೈಫಲ್ಯದ ಕಥೆ ಕೇವಲ ಅಂಡರ್-19 ತಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿರಿಯರ ಟಿ20 ತಂಡ ಕೂಡ ಇದೇ ರೀತಿಯ ಪರಿಸ್ಥಿತಿಯಲ್ಲಿದೆ. ಅನುಭವಿ ಸೂಪರ್ಸ್ಟಾರ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿಯೂ ಸೂರ್ಯ ರನ್ಗಳಿಸಲು ವಿಫಲರಾದರು. ಆಡಿದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಕೇವಲ 34 ರನ್ ಗಳಿಸಿದರು. ಅದಕ್ಕೂ ಮೊದಲು ಆಸ್ಟ್ರೇಲಿಯಾ ಮತ್ತು ಏಷ್ಯಾಕಪ್ನಲ್ಲಿಯೂ ಸೂರ್ಯ ಇದೇ ರೀತಿಯ ಪ್ರದರ್ಶನ ನೀಡಿದ್ದರು.
ಐಸಿಸಿ ಮನವಿಗೂ ನಿಲುವು ಬದಲಿಸದ ಬಿಸಿಸಿಐ; ಪಾಕ್ ನಾಯಕನೊಂದಿಗೆ ಕೈಕುಲುಕದ ಟೀಂ ಇಂಡಿಯಾ ನಾಯಕ
2024 ರ ವಿಶ್ವಕಪ್ ನಂತರ ಸೂರ್ಯ ಅವರನ್ನು ಟಿ20 ತಂಡದ ನಾಯಕನನ್ನಾಗಿ ನೇಮಿಸಲಾಯಿತು, ಆದರೆ ಅಂದಿನಿಂದ ಅವರು ನಿರಂತರವಾಗಿ ವಿಫಲರಾಗಿದ್ದಾರೆ. 2025 ರಲ್ಲಿ ಅವರ ಪ್ರದರ್ಶನವು ವಿಶೇಷವಾಗಿ ನಿರಾಶಾದಾಯಕವಾಗಿದೆ. ಈ ವರ್ಷದುದ್ದಕ್ಕೂ, ಸೂರ್ಯ 21 ಟಿ20 ಪಂದ್ಯಗಳಲ್ಲಿ 13 ಸರಾಸರಿಯಲ್ಲಿ ಕೇವಲ 218 ರನ್ ಗಳಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧಶತಕವಿಲ್ಲದಿರುವುದು ಅವರ ಕಳಪೆ ಫಾರ್ಮ್ಗೆ ಹಿಡಿದ ಕೈಗನ್ನಡಿಯಾಗಿದೆ. ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಲಿದ್ದು, ಸೂರ್ಯ ಅಷ್ಟರೊಳಗೆ ತಮ್ಮ ಫಾರ್ಮ್ ಕಂಡುಕೊಳ್ಳಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 pm, Sun, 21 December 25