Vijay Hazare Trophy: 412 ರನ್ ಬೆನ್ನಟ್ಟಿ ಚಾಂಪಿಯನ್ ತಂಡಕ್ಕೆ ಮಣ್ಣು ಮುಕ್ಕಿಸಿದ ಕರ್ನಾಟಕ
Vijay Hazare Trophy: ಅಹಮದಾಬಾದ್ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಜಾರ್ಖಂಡ್ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಜಾರ್ಖಂಡ್ 412 ರನ್ ಗಳಿಸಿದರೆ, ಇಶಾನ್ ಕಿಶನ್ ಸ್ಫೋಟಕ 125 ರನ್ ಸಿಡಿಸಿದರು. ಪ್ರತಿಯಾಗಿ ಕರ್ನಾಟಕ ದೇವದತ್ ಪಡಿಕ್ಕಲ್ ಅವರ 147 ರನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಅವರ ಅರ್ಧಶತಕದ ನೆರವಿನಿಂದ ಬೃಹತ್ ಗುರಿಯನ್ನು ಸುಲಭವಾಗಿ ತಲುಪಿತು. ಈ ಗೆಲುವಿನೊಂದಿಗೆ ಕರ್ನಾಟಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ( Narendra Modi Stadium) ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಕರ್ನಾಟಕ ಹಾಗೂ ಜಾರ್ಖಂಡ್ (Karnataka vs Jharkhand) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಕರ್ನಾಟಕ ತಂಡ 5 ವಿಕೆಟ್ಗಳಿಂದ ಗೆದ್ದುಕೊಂಡು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇಂದಿನಿಂದ ಆರಂಭವಾಗಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ, ಕೆಲವೇ ದಿನಗಳ ಹಿಂದಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದು ಬೀಗಿದ್ದ ಜಾರ್ಖಂಡ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡ ದಾಖಲೆಯ 412 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ಕೂಡ ಕೆಚ್ಚೆದೆಯ ಪ್ರದರ್ಶನ ನೀಡಿ ಇನ್ನು 15 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆಬೀರಿತು.
ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ
ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಆಯ್ದುಕೊಂಡರು. ಆದರೆ ಜಾರ್ಖಂಡ್ ಬ್ಯಾಟರ್ಗಳು ಕರ್ನಾಟಕದ ಆಯ್ಕೆಯನ್ನು ತಪ್ಪೆಂದು ಸಾಭೀತುಪಡಿಸಿದರು. ಜಾರ್ಖಂಡ್ ಪರ ಆರಂಭಿಕ ಶಿಖರ್ ಮೋಹನ್ 44 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. 4ನೇ ಕ್ರಮಾಂಕದಲ್ಲಿ ಬಂದ ವಿರಾಟ್ ಸಿಂಗ್ ಕೂಡ 88 ರನ್ಗಳ ಕಾಣಿಕೆ ನೀಡಿದರು.
ಐದನೇ ಕ್ರಮಾಂಕದಲ್ಲಿ ಬಂದ ಕುಶಾಗ್ರ 63 ರನ್ಗಳ ಇನ್ನಿಂಗ್ಸ್ ಆಡಿದರೆ, 6ನೇ ಕ್ರಮಾಂಕದಲ್ಲಿ ಬಂದ ನಾಯಕ ಇಶಾನ್ ಕಿಶನ್ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಟೀಂ ಇಂಡಿಯಾದಲ್ಲಿ ಆರಂಭಿಕನಾಗಿ ಆಡುತ್ತಿದ್ದ ಕಿಶನ್, ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಿದ್ದಾರೆ. ಇದಕ್ಕೆ ಕಾರಣ ಟೀಂ ಇಂಡಿಯಾದಲ್ಲಿ ಕಿಶನ್ಗೆ ಆರಂಭಿಕ ಸ್ಥಾನ ಸಿಗುವುದು ಅನುಮಾನ. ಅಲ್ಲದೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗಿರುವ ಕಿಶನ್ಗೆ ಆರಂಭಿಕ ಸ್ಥಾನ ಸಿಗುವುದಿಲ್ಲ.
ಸ್ಫೋಟಕ ಶತಕ ಸಿಡಿಸಿದ ಕಿಶನ್
ಹೀಗಾಗಿ ಗೇಮ್ ಫಿನಿಶರ್ ಸ್ಥಾನವನ್ನು ಪಡೆದುಕೊಳ್ಳುವ ಗುರಿಯಲ್ಲಿರುವ ಕಿಶನ್ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 39 ಎಸೆತಗಳನ್ನು ಎದುರಿಸಿ, 7 ಬೌಂಡರಿ ಹಾಗೂ 14 ಭರ್ಜರಿ ಸಿಕ್ಸರ್ಗಳ ಸಹಿತ 125 ರನ್ ಬಾರಿಸಿದರು. ಕಿಶನ್ ಶತಕದಿಂದಾಗಿ ಜಾರ್ಖಂಡ್ ತಂಡ ಕರ್ನಾಟಕದ ಮುಂದೆ 412 ರನ್ಗಳ ಬೃಹತ್ ರನ್ ಕಲೆಹಾಕಿತು.
412 ರನ್ಗಳ ಬೃಹತ್ ಗುರಿ; 147 ರನ್ ಸಿಡಿಸಿದ ದೇವದತ್ ಪಡಿಕ್ಕಲ್
ಕರ್ನಾಟಕಕ್ಕೆ ಉತ್ತಮ ಆರಂಭ
ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್ಗೆ ದೇವದತ್ ಪಡಿಕ್ಕಲ್ ಹಾಗೂ ಮಯಾಂಕ್ ಅಗರ್ವಾಲ್ 114 ರನ್ಗಳ ಭರ್ಜರಿ ಜೊತೆಯಾಟವನ್ನು ನೀಡಿದರು. ಇವರಿಬ್ಬರು ಕೇವಲ 11.5 ಓವರ್ಗಳಲ್ಲಿ ತಂಡವನ್ನು ಇಷ್ಟು ಮೊತ್ತಕ್ಕೆ ಕೊಂಡೊಯ್ದರು. ಇದೇ ವೇಳೆ ನಾಯಕ ಮಯಾಂಕ್ 54 ರನ್ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 34 ಎಸೆತಗಳನ್ನು ಎದುರಿಸಿದ ಮಯಾಂಕ್ 10 ಬೌಂಡರಿ ಕೂಡ ಬಾರಿಸಿದರು.
147 ರನ್ ಸಿಡಿಸಿದ ಪಡಿಕ್ಕಲ್
ಇತ್ತ ದೇವದತ್ ಪಡಿಕ್ಕಲ್ ತಮ್ಮ ಇನ್ನಿಂಗ್ಸ್ನಲ್ಲಿ 118 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಹಿತ 147 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ದೇವದತ್ ಔಟಾಗುವುದಕ್ಕೂ ಮುನ್ನ ಕರ್ನಾಟಕದ ಗೆಲುವು ಖಚಿತವಾದ್ದಂತ್ತಾಗಿತ್ತು. ಉಳಿದ ಕೆಲಸ ಮಾಡಿದ ಕೆ. ಶ್ರೀಕಾಂತ್ 38 ರನ್ಗಳ ಇನ್ನಿಂಗ್ಸ್ ಆಡಿದರೆ, ಅಭಿನವ್ ಮನೋಹರ್ ಅಜೇಯ 56 ರನ್ ಮತ್ತು ಧೃವ್ ಪ್ರಭಾಕರ್ ಅಜೇಯ 40 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Wed, 24 December 25
